ಬೆಂಗಳೂರಿನಲ್ಲಿ ಡಕಾಯಿತನ ಕಾಲಿಗೆ ಬುಲೆಟ್ ಇಳಿಸಿದ ಪೊಲೀಸರು
ಬೆಂಗಳೂರು, ಜನವರಿ 21: ರಾಜಧಾನಿನಲ್ಲಿ ಪಾತಕಿಗಳಿಗೆ ಪೊಲೀಸರು ಗನ್ ಮೂಲಕವೇ ಬುದ್ಧಿ ಕಲಿಸುವ ಸರಣಿ ಮುಂದುವರೆದಿದೆ. ಕಳೆದ ಮೂರು ದಿನದದಲ್ಲಿ ಬೆಂಗಳೂರಿನಲ್ಲಿ ನಾಲ್ಕನೇ ಶ್ಯೂಟೌಟ್ ಪ್ರಕರಣ ವರದಿಯಾಗಿವೆ. ಗುರುವಾರ ಬೆಳಗ್ಗೆ ಡಕಾಯಿತನ ಕಾಲಿಗೆ ಗುಂಡು ಹಾರಿಸಿ ಬ್ಯಾಡರಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ರಾಜೇಶ್ ಅಲಿಯಾಸ್ ಲೂಸ್ ಗುಂಟೇಟು ತಿಂದು ಬಂಧನಕ್ಕೆ ಒಳಗಾದ ಆರೋಪಿ. ಬ್ಯಾಡರಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ಚಿ. ರಾಜೀವ ಗುಂಡು ಹಾರಿಸಿದವರು. ದರೋಡೆ ಪ್ರಕರಣದಲ್ಲಿ ತಪ್ಪಿಸಿಕೊಂಡಿದ್ದ ರಾಜೇಶ್ ಇರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಬ್ಯಾಡರಹಳ್ಳಿ ಪೊಲೀಸರು ಗುರುವಾರ ಬೆಳಗಿನ ಜಾವ ಆರೋಪಿಯನ್ನು ಬಂಧಿಸಲು ತೆರಳಿದ್ದರು. ಬಂಧನ ಕಾರ್ಯಾಚರಣೆ ವೇಳೆ ಚಾಕುವಿನಿಂದ ಹಲ್ಲೆ ನಡೆಸಲು ಯತ್ನಿಸಿದ್ದು, ಪೊಲೀಸ್ ಮುಖ್ಯ ಪೇದೆ ಶ್ರೀನಿವಾಸ್ ಅವರಿಗೆ ಗಾಯವಾಗಿದೆ. ಈ ವೇಳೆ ಸರ್ವೀಸ್ ರಿವಲ್ವಾರ್ ನಿಂದ ಒಂದು ಸುತ್ತು ಗುಂಡು ಹಾರಿಸಿ ಪೊಲೀಸ್ ಇನ್ಸ್ಪೆಕ್ಟರ್ ಚ. ರಾಜೀವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಾಳು ಪೇದೆ ಹಾಗೂ ಆರೋಪಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬಂಧಿತ ಆರೋಪಿ ರಾಜೇಶ್ ಸೇರಿ ಆರು ಮಂದಿ ಬ್ಯಾಡರಹಳ್ಳಿಯ ನಿಂಜಾಕಾರ್ಟ್ ಆನ್ಲೈನ್ ತರಕಾರಿ ಮಾರಾಟ ಮಾಡುವ ಗೋಡನ್ ಗೆ ನುಗ್ಗಿ ದರೋಡೆ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಬ್ಯಾಡರಹಳ್ಳಿ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಗುರುವಾರ ಬಂಧನಕ್ಕೆ ತೆರಳಿದಾಗ ಆರೋಪಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಹೀಗಾಗಿ ಒಂದು ಸುತ್ತು ಗುಂಡು ಹಾರಿಸಿದ್ದು, ಆರೋಪಿಯ ಬಲಗಾಲಿಗೆ ಪೆಟ್ಟಾಗಿದೆ. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಎಂ. ಪಾಟೀಲ್ ತಿಳಿಸಿದ್ದಾರೆ.
Recommended Video
ಬಂಧಿತ ಆರೋಪಿ ರಾಜೇಶ್ ಮತ್ತು ಸಹಚರರು ಕಳೆದ ವರ್ಷ ಕೆಂಗೇರಿಯ ನಿಂಜಾ ಕಾರ್ಟ್ ತರಕಾರಿ ಗೋಡನ್ ನಲ್ಲಿ ದರೋಡೆ ಮಾಡಿ ತಲೆ ಮರೆಸಿಕೊಂಡಿದ್ದರು. ಈ ಕುರಿತು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ಆರೋಪಿಗಾಗಿ ಶೋಧ ನಡೆಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.