ಕೇಂದ್ರ ಸರ್ಕಾರದ ದಬ್ಬಾಳಿಕೆಗೆ ನಾನು ಬಗ್ಗಲ್ಲ: ಡಿಕೆಶಿ ಗುಡುಗು
ಬೆಂಗಳೂರು, ಮೇ 31: ನಾನು ಹಳ್ಳಿಯಿಂದ ಬೆಂಗಳೂರಿಗೆ ಬಂದು ರಾಜಕಾರಣ ಮಾಡುತ್ತಿದ್ದೇನೆ. ಅಧಿಕಾರಿಗಳು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ನನಗೆ ತೊಂದರೆ ಕೊಡುತ್ತಿದ್ದಾರೆ. ನಾನು ಬದುಕಿನಲ್ಲಿ ಯಾವತ್ತೂ ಅಡ್ಡದಾರಿ ಹಿಡಿದು ಕೆಲಸ ಮಾಡಿಲ್ಲ ಹೀಗಾಗಿ ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಗುರುವಾರ ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಮ್ಮ ಕುಟುಂಬದ 11 ಜನರ ವಿರುದ್ಧ ಕೇಂದ್ರ ಸರ್ಕಾರ ಎಫ್ಐಆರ್ ದಾಖಲಿಸಲು ಮುಂದಾಗುತ್ತಿರುವ ಕುರಿತಂತೆ ತಮಗೆ ಮಾಹಿತಿ ಬಂದಿದ್ದು ಇಂತಹ ಗೊಡ್ಡು ಬೆದರಿಕೆಗಳಿಗೆ ಬಗ್ಗುವುದಿಲ್ಲ ತಾವೇನಿದ್ದರೂ ನೇರ ರಾಜಕಾರಣ ಮಾಡುವುದಾಗಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಡಿಕೆ ಬ್ರದರ್ಸ್ ಮೇಲೆ ಸಿಬಿಐ ಕಣ್ಣು: ತುರ್ತು ಸುದ್ದಿಗೋಷ್ಠಿಯಲ್ಲಿ ಸ್ಫೋಟಕ ಮಾಹಿತಿ
ಕೇಂದ್ರ ಸರ್ಕಾರದ ಸಂಸ್ಥೆಗಳಾದ ಸಿಬಿಐ, ಇಡಿ, ಆದಾಯ ತೆರಿಗೆ ಇಲಾಖೆ ಮತ್ತಿತರೆ ಸಂಸ್ಥೆಗಳು ಮೋದಿಯವರ ಕೈಗೊಂಬೆಗಳಾಗಿ ಕೆಲಸ ಮಾಡುತ್ತಿದೆ. ಇಂತಹ ಕೀಳು ರಾಜಕಾರಣ ಬಹಳ ದಿನ ನಡೆಯುವುದಿಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ನಮ್ಮ ವಿರುದ್ಧ ಎಷ್ಟು ಸುಳ್ಳು ಕೇಸುಗಳನ್ನು ದಾಖಲಿಸಿದರೂ ಅವೆಲ್ಲವೂ ಬಿದ್ದು ಹೋಗುತ್ತದೆ. ತಕ್ಕಡಿಯಲ್ಲಿ ನ್ಯಾಯ ಅನ್ಯಾಯ ಮೇಲು ಕೆಳಗೆ ಹೋಗುತ್ತಲೇ ಇರುತ್ತದೆ. ಅದು ಒಂದು ದಿನ ನ್ಯಾಯದ ಪರವಾಗಿ ನಿಲ್ಲುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.