ಡಿ.ಕೆ. ರವಿ ಸಾವು ಆತ್ಮಹತ್ಯೆ ಎಂದು ಜನ ಈಗಲೂ ಒಪ್ಪುತ್ತಿಲ್ಲ: ಬಿಜೆಪಿ
ಐಎಎಸ್ ಅಧಿಕಾರಿ ಡಿಕೆ ರವಿ ನಿಗೂಢ ಸಾವನ್ನು ಆತ್ಮಹತ್ಯೆ ಎಂದು ಒಪ್ಪಲು ಜನ ಈಗಲು ತಯಾರಿಲ್ಲ ಎಂದು ಬಿಜೆಪಿ ಮುಖಂಡ ಸುರೇಶ್ ಕುಮಾರ್ ಒನ್ ಇಂಡಿಯಾಗೆ ತಿಳಿಸಿದರು.
ಬೆಂಗಳೂರು, ನವೆಂಬರ್, 25: ಐಎಸ್ ಅಧಿಕಾರಿ ಡಿ.ಕೆ. ರವಿ ಅವರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ ಎಂದು ಸಿಬಿಐ ತನ್ನ ಅಂತಿಮ ವರದಿಯನ್ನು ಸಲ್ಲಿಸಿದೆ.
ಸಿಬಿಐ ವರದಿ ಕಾಂಗ್ರೆಸ್ ಪಕ್ಷವನ್ನು ನಿರಾಳ ಮಾಡಿದೆ. ಆದರೆ ಭಾರತೀಯ ಜನತಾ ಪಕ್ಷ ಮುಖಂಡರು ಮಾತ್ರ ಡಿ.ಕೆ.ರವಿ ಸಾವು ಆತ್ಮಹತ್ಯೆ ಅಲ್ಲ. ಅದು ಕೊಲೆ ಎಂದು ತಮ್ಮ ಸಮರ್ಥನೆಯನ್ನು ಮುಂದುವರಿಸಿದ್ದಾರೆ.[ಡಿ.ಕೆ.ರವಿ ಸಾವು ಆತ್ಮಹತ್ಯೆ: ಅಂತಿಮ ಶರಾ ಬರೆದ ಸಿಬಿಐ]
ಸಿಬಿಐ ಅಂತಿಮ ವರದಿ ಕುರಿತು ಒನ್ ಇಂಡಿಯಾಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಮುಖಂಡ ಸುರೇಶ್ ಕುಮಾರ್ ಅವರು "ವರದಿಯಿಂದ ಬಿಜೆಪಿಗೆ ಯಾವುದೇ ಹಿನ್ನೆಡೆ ಆಗಿಲ್ಲ. ಸಿಬಿಐ ತನಿಖೆ ಆಗಬೇಕೆಂದು ಕೇವಲ ಬಿಜೆಪಿ ಮಾತ್ರ ಆಗ್ರಹಿಸಿರಲಿಲ್ಲ, ಅದು ಜನರ ಆಗ್ರಹವೂ ಆಗಿತ್ತು. ಜನ ಈಗಲೂ ರವಿ ಸಾವು ಆತ್ಮಹತ್ಯೆ ಎಂದು ಒಪ್ಪಲು ತಯಾರಿಲ್ಲ" ಎಂದು ಅವರು ಹೇಳಿದರು. [ಡಿಕೆ ರವಿಯದ್ದು ಆತ್ಮಹತ್ಯೆ : ಒಪ್ಪಲು ತಯಾರಿಲ್ಲ ತಾಯಿ ಗೌರಮ್ಮ]
"ನಾವು ಇನ್ನೂ ಸಿಬಿಐ ವರದಿಯನ್ನು ನೋಡಿಲ್ಲ. ಅದರಲ್ಲಿ ಏನು ಉಲ್ಲೇಖಿಸಲಾಗಿದೆ ಎಂಬುದರ ಬಗ್ಗೆ ನಮಗೆ ಅರಿವಿಲ್ಲ. ವರದಿ ತಿಳಿಯದೇ ಈ ಕುರಿತು ಹೆಚ್ಚಾಗಿ ಏನು ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು.
"ಹಾಗಾದರೆ ರಾಜಕೀಯ ಮುಖಂಡರಿಂದ ಡಿ.ಕೆ. ರವಿ ಅವರಿಗೆ ಬಂದಿರುವ ಬೆದರಿಕೆಗಳು ಸುಳ್ಳೇ? ಕೇವಲ ನಾವಷ್ಟೇ ಅಲ್ಲ ಜೆಡಿಎಸ್ ಪಕ್ಷದವರೂ ಸಹ ಡಿ.ಕೆ.ರವಿ ಸಾವು ಖಂಡಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದರು" ಎಂದು ಅವರು ತಿಳಿಸಿದರು.
"ಡಿ.ಕೆ. ರವಿ ನಿಗೂಢ ಸಾವಿನ ಕುರಿತು ಸಿಬಿಐ ತನಿಖೆ ಮಾಡಿಸಬೇಕೆಂದು ಸದನದಲ್ಲೇ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಸಿಬಿಐ ಸಿದ್ಧಪಡಿಸಿರುವ ವರದಿಯನ್ನು ಸದನಕ್ಕೆ ಸಲ್ಲಿಸಲಾಗುವುದು. ಆದರೆ ಅದನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕಾದ ಅಗತ್ಯವಿಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದರು.
ಡಿ.ಕೆ.ರವಿ ಸಾವು ಖಂಡಿಸಿ ಪ್ರತಿಪಕ್ಷಗಳೆಲ್ಲಾ ಒಟ್ಟಾಗಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿದ್ದವು. ಡಿ.ಕೆ.ರವಿ ಸಾವಿನಲ್ಲಿ ಅಂದಿನ ಗೃಹಮಂತ್ರಿ ಕೆ.ಜೆ.ಜಾರ್ಜ್ ಅವರ ಕೈವಾಡವಿದೆ ಎಂದು ಆರೋಪಿಸಲಾಗಿತ್ತು. ಅಷ್ಟೇ ಅಲ್ಲದೆ ಡಿ.ಕೆ.ರವಿ ಸಾವು ಆತ್ಮಹತ್ಯೆ ಎಂದು ಸಿಐಡಿ ಸಲ್ಲಿಸಿದ್ದ ವರದಿಯನ್ನು ಬಿಜೆಪಿ, ಜೆಡಿಎಸ್ ಒಟ್ಟಾಗಿ ಅಲ್ಲಗೆಳೆದಿದ್ದವು.