ಡಿಕೆ ರವಿ ಆತ್ಮಹತ್ಯೆ: ಸಿಬಿಐ ನೀಡಿದ ಸ್ಫೋಟಕ ವರದಿಯಲ್ಲೇನಿದೆ?
ಬೆಂಗಳೂರು,ನವೆಂಬರ್.26: ಐಎಎಸ್ ಆಧಿಕಾರಿ ಡಿಕೆ ರವಿ ಅವರದು ಆತ್ಮಹತ್ಯೆ ಎಂದು ಸಿಬಿಐ ವರದಿ ನೀಡಿದ್ದು, ಸಾಮಾನ್ಯ ಜನರು ಕೇಳಿರದ ಸ್ಫೋಟಕ ಮಾಹಿತಿಯನ್ನು ಹೊರಹಾಕಿದೆ.
ಡಿಕೆ ರವಿ 500 ಕೋಟಿ ದುಡ್ಡು ಮಾಡಲು ಪ್ಲಾನ್ ಮಾಡಿದ್ರಾ, ಮಸಾಜ್ ಗರ್ಲ್ ಸಂಬಂಧ, ಪ್ರೇಮ ನಿವೇದನೆಯ ಸಂದೇಶ ಹೀಗೆ ಅನೇಕ ಅಚ್ಚರಿಯ ಸಂಗತಿಗಳನ್ನು ಸಿಬಿಐ ಸಾಮಾನ್ಯ ಜನರ ಮುಂದಿಟ್ಟಿದೆ.
ಮಾರ್ಚ್ 16. 2015 ರಲ್ಲಿ ತಮ್ಮ ಬೆಂಗಳೂರಿನ ಫ್ಲಾಟಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಡಿಕೆ ರವಿಯವರ ಮೃತದೇಹ ಸಿಕ್ಕಿತ್ತು. ಅದರೊಂದಿಗೆ ರಾಜ್ಯದಲ್ಲಷ್ಟೇ ಅಲ್ಲದೆ ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ ರಾಜ್ಯದ ರಾಜಕೀಯ ಮುಖಂಡರ ವಿರುದ್ಧ ಕೆಲವು ಆರೋಪಗಳೂ ಕೇಳಿ ಬಂದಿದ್ದವು.
ಡಿಕೆ ರವಿಯವರು ದಕ್ಷ ಅಧಿಕಾರಿಯಾಗಿದ್ದರು. ಕೊಲಾರ, ಬೆಂಗಳೂರು ಇತರೆಡೆ ಜನಾನುರಾಗಿಯಾಗಿ ಅನೇಕ ಕೆಲಸಗಳನ್ನು ಮಾಡಿದ್ದರು. ಈಗ ಸಿಬಿಐ ನೀಡಿದ ವರದಿ ಜನರಲ್ಲಿ ಗೊಂದಲವನ್ನು ಮೂಡಿಸಿದೆ.
ಕಳುಹಿಸಿದ ಪ್ರೇಮ ಸಂದೇಶ
ಓರ್ವ ಮಹಿಳೆಗೆ ಕಳುಹಿಸುತ್ತಿದ್ದ ಪ್ರೇಮ ನಿವೇದನೆಯ ಮೆಸೇಜ್ ಗಳು ಹಾಗು ಕೊನೆಯ ಅವಧಿಯಲ್ಲಿ ಕಳುಹಿಸಿದ ಸಂದೇಶದಲ್ಲಿ ನಾನು ನಿನ್ನನ್ನು ಪ್ರೀತಿಸುತ್ತೇನೆ, ನನಗೆ ಉಳಿದಿರುವುದು ಎರಡೇ ದಾರಿ ಒಂದು ನಿನ್ನನ್ನು ಪ್ರೀತಿಸುವುದು ಇಲ್ಲವಾದರೆ ಸಾಯುವುದು ನಾನು ಎರಡನೆಯದನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಬರೆದ ಸಂದೇಶವನ್ನು ಸಿಬಿಐ ಸಾಕ್ಷಿಯಾಗಿ ಪರಿಗಣಿಸಿದೆ. ಅಲ್ಲದೆ ಆಕೆಯೊಂದಿಗೆ ನಲವತ್ತು ನಿಮಿಷಗಳ ಕಾಲ ಮಾತುಕತೆ ನಡೆಸಿರುವ ಸಿಬಿಐ ಆತ್ಮಹತ್ಯೆಯೇ ಎಂಬ ನಿರ್ಧಾರಕ್ಕೆ ಬಂದಿದೆ.
ರವಿ ಕಾರ್ಯ ನಿರ್ವಹಣೆ ಬಗ್ಗೆ ಮಾಹಿತಿ
ಡಿಕೆ ರವಿ ತಮ್ಮ ಕಾರ್ಯಕ್ಷೇತ್ರದಲ್ಲಿ ಹೇಗೆ ದಕ್ಷರಾಗಿದ್ದರು ತಮಗೆ ವಹಿಸಿದ ಕೆಲಸವನ್ನು ಹೇಗೆ ನಿರ್ವಹಿಸಿದ್ದರು ಎಂಬ ಎಲ್ಲ ಸಂಗತಿಗಳನ್ನು ಕಚೇರಿ, ಮತ್ತು ಕೆಲವು ಆಪ್ತರನ್ನು ವಿಚಾರಣೆಗೊಳಪಡಿಸಿ ಮಾಹಿತಿ ಕಲೆ ಹಾಕಿ ವರದಿಯಲ್ಲಿ ಸೇರಿಸಿದೆ.
ಮಸಾಜ್ ಗರ್ಲ್ ಜೊತೆ ಸಂಬಂಧ
ಡಿ.ಕೆ ರವಿಯವರು ಬೆಂಗಳೂರಿನ ಮಸಾಜ್ ಗರ್ಲ್ ಯುವತಿಯೊಂದಿಗೆ ನಿರಂತರ ಸಂಬಂಧ ಹೊಂದಿದ್ದರು. ಆಕೆಯನ್ನು ಕಾಣಲು ಆಗಾಗ ಹೋಗುತ್ತಿದ್ದರು ಎಂಬ ಹೊಸ ವಿಷಯವೊಂದು ಸಿಬಿಐ ವರದಿಯಿಂದ ಹೊರಬಿದ್ದಿದೆ.
ಸಹೋದ್ಯೋಗಿಗಳ ವಿಚಾರಣೆ
ಡಿ.ಕೆ. ರವಿಯವರು 2009 ರಿಂದ ಎಲ್ಲೆಲ್ಲೆ ಕಾರ್ಯ ನಿರ್ವಹಿಸಿದ್ದರು. ಅವರ ಎಲ್ಲ ಸಹೋದ್ಯೋಗಿಗಳನ್ನು ವಿಚಾರಣೆಗೆ ಒಳಪಡಿಸಿದೆ. ಕೋಲಾರ, ಬೆಂಗಳೂರು ಮತ್ತಿತರ ಕಡೆಗಳಿಂದ ಮಾಹಿತಿ ಕಲೆಹಾಕಲಾಗಿದೆ.
500 ಕೋಟಿ ದುಡ್ಡು ಮಾಡುವ ಪ್ಲಾನ್
ಡಿ.ಕೆ.ರವಿಯವರು 500 ಕೋಟಿ ಹಣವನ್ನು ಮಾಡುವ ಸಲುವಾಗಿ ಸ್ನೇಹಿತರ ಜೊತೆಗೂಡಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹಣ ತೊಗಡಿಗಲು ಮುಂದಾಗಿದ್ದರು ಎಂದು ಸಿಬಿಐ ವರದಿ ನೀಡಿದೆ.
ಸಾಮರಸ್ಯವಿಲ್ಲದ ಸಂಸಾರ
ಹಾಗೆಯೇ ಡಿ.ಕೆ.ರವಿಯವರು ಆತ್ಮಹತ್ಯೆಗೆ ಸಂಸಾರದಲ್ಲಿ ಮತ್ತು ಬಂಧುಗಳೊಂದಿಗೆ ಸಾಮರಸ್ಯ ಇಲ್ಲದಿರುವುದೇ ಕಾರಣ ಎಂದು ವಿವರಿಸಿದೆ. ಅಲ್ಲದೆ ಹೆಂಡತಿಯೊಂದಿಗೆ ಆಗಾಗ ಜಗಳವಾಗುತ್ತಿತ್ತು ಎಂಬುದನ್ನು ವರದಿಯಲ್ಲಿ ಉಲ್ಲೇಖ ಮಾಡಿದೆ.