ನಿರ್ಮಲಾ ಸೀತಾರಾಮನ್ ಹೆಸರಿನಲ್ಲಿ ಬೆಂಗಳೂರು ವ್ಯಕ್ತಿಗೆ ಟೋಪಿ !
ಬೆಂಗಳೂರು, ಜ. 05: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಹರ್ಬಲ್ ಲೈಫ್ ಕಂಪನಿ ಹೆಸರಿನಲ್ಲಿ ಸೈಬರ್ ವಂಚಕರು ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರಿನ ಕಮಲಾನಗರದ ನಿವಾಸಿ ಸುರೇಶ್ ವಂಚನೆಗೆ ಒಳಗಾದವರು. ಸುರೇಶ್ ಅವರಿಗೆ ಗಿಫ್ಟ್ ಕಾರ್ಡ್ ಕಳುಹಿಸಿ ನಿಮಗೆ ಟಾಟಾ ಸಫಾರಿ ಕಾರು ಬಹುಮಾನ ಬಂದಿದೆ ಎಂದು ಹೇಳಿ ಸಂದೇಶ ಕಳುಹಿಸಿದ್ದಾರೆ. ಈ ಸಂದೇಶ ನೋಡಿ ಕರೆ ಮಾಡಿದ ಸುರೇಶ್ ಅವರಿಂದ ವಿಳಾಸ ಪಡೆದು, "ನಿಮಗೆ ಲಕ್ಷಾಂತರ ಮೌಲ್ಯದ ಟಾಟಾ ಸಫಾರಿ ಕಾರು ಗಿಫ್ಟ್ ಬಂದಿದೆ. ಹರ್ಬಲ್ ಲೈಫ್ ಕಂಪನಿ 40 ವರ್ಷ ಪೂರೈಕೆ ಹಿನ್ನೆಲೆಯಲ್ಲಿ ಈ ಉಡುಗೊರೆ ಬಂದಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಹರ್ಬಲ್ ಲೈಫ್ ಹೆಸರು ಬಳಿಸಿ ಉಡುಗೊರೆ ದಾಖಲಾತಿ ಕಳುಹಿಸಿದ್ದಾರೆ.
ಆ ಬಳಿಕ ನಿಮಗೆ ಬಂದಿರುವ ಕಾರು ಪಡೆಯಲು ಆದಾಯ ತೆರಿಗೆ ಇಲಾಖೆಗೆ ತೆರಿಗೆ ಪಾವತಿಸಬೇಕು ಎಂದು ಆದಾಯ ತೆರಿಗೆ ಇಲಾಖೆಯ ಲೋಗೋ ವಿವರ ದುರ್ಬಳಕೆ ಮಾಡಿಕೊಂಡು ನಕಲಿ ನೋಟಿಸ್ ಕಳುಹಿಸಿದ್ದಾರೆ. ನೋಟಿಸ್ ಪಡೆದ ಸುರೇಶ್, ನಿಜ ಎಂದು ಭಾವಿಸಿ ಉಡುಗೊರೆ ಕಳುಹಿಸಿದ್ದ ವ್ಯಕ್ತಿಗಳನ್ನು ಸಂಪರ್ಕಿಸಿದ್ದಾರೆ. ತೆರಿಗೆ ಪಾವತಿ ಮಾಡುವಂತೆ ಸೂಚಿಸಿ ಅನೇಕ ಸಲ ಹಣವನ್ನು ಗೂಗಲ್ ಪೇ ಮೂಲಕ ಹಾಕಿಸಿಕೊಂಡಿದ್ದಾರೆ. ಸುಮಾರು 85 ಸಾವಿರ ರೂ. ಪಡೆದಿದ್ದಾರೆ. ಟಾಟಾ ಸಫಾರಿ ಕಾರಿಗೆ ಆಸೆ ಬಿದ್ದು ಇದ್ದ ಹಣವನ್ನು ಪಾವತಿಸಿದ ಸುರೇಶ್ ಗೆ ಯಾವ ಕಾರೂ ಬಂದಿಲ್ಲ. ಬಳಿಕ ಆದಾಯ ತೆರಿಗೆ ಇಲಾಖೆಗೆ ಹೋಗಿ ವಿಚಾರಿಸಿದ್ದಾರೆ. ಈ ವೇಳೆ ಕೊಟ್ಟಿರುವ ನೋಟಿಸ್ ಬೋಗಸ್ ಎಂಬುದು ಗೊತ್ತಾಗಿದೆ.
ಈ ಕುರಿತು ಸುರೇಶ್ ಪಶ್ಚಿಮ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸೈಬರ್ ವಂಚಕರು ಆದಾಯ ತೆರಿಗೆ ಇಲಾಖೆಯ ನೋಟಿಸ್ ದುರ್ಬಳಕೆ ಮಾಡಿಕೊಂಡು ವಂಚನೆ ಮಾಡಿದ್ದಾರೆ. ಅಲ್ಲದೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಹರ್ಬಲ್ ಲೈಫ್ ಕಂಪನಿಯ ವಿವರಗಳನ್ನು ಉಲ್ಲೇಖಿಸಿದ್ದು, ಅನೇಕರಿಗೆ ಇದೇ ರೀತಿ ವಂಚನೆ ಮಾಡಿರುವ ಸಂಶಯ ವ್ಯಕ್ತವಾಗಿದೆ.
ಸೈಬರ್ ಜಾಲ:
ಉಡುಗೊರೆ ಹೆಸರಿನಲ್ಲಿ ಸೈಬರ್ ವಂಚಕರ ನಾನಾ ಹೆಸರಿನಲ್ಲಿ ವಂಚನೆ ಮಾಡುತ್ತಲೇ ಇದ್ದಾರೆ. ಪ್ರತಿಷ್ಠಿತ ಕಂಪನಿಗಳು, ಆರ್ಬಿಐ ಹೆಸರು ದುರ್ಬಳಕೆ ಮಾಡಿಕೊಂಡು ಸಾಮಾನ್ಯರಿಗೆ ಉಡುಗೊರೆ ಸಂದೇಶ ಕಳುಹಿಸುತ್ತಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದರೆ, ತೆರಿಗೆ ವಸೂಲಿ ಹೆಸರಿನಲ್ಲಿ ನಾಮ ಹಾಕುತ್ತಾರೆ.
ದೇಶದಲ್ಲಿ ಯಾವುದೂ ಮೂಲೆಯಲ್ಲಿ ಕೂತು ವಂಚಿಸುವ ಈ ಸೈಬರ್ ವಂಚಕರನ್ನು ಪತ್ತೆ ಮಾಡಿ ಬಂಧಿಸುವಷ್ಟು ಶಕ್ತಿಯೂ ಪೊಲೀಸರಿಗೆ ಇಲ್ಲ. ಹೊರ ರಾಜ್ಯದಲ್ಲಿ ಕೂತು ಸಾವಿರ ಗಟ್ಟಲೆ ವಂಚಿಸುವ ಈ ವಂಚಕರನ್ನು ಪತ್ತೆ ಮಾಡಬೇಕಾದರೆ ಲಕ್ಷಾಂತರ ರೂ. ವೆಚ್ಚ ಮಾಡಿ ಆರೋಪಿಗಳನ್ನು ಪತ್ತೆ ಮಾಡುವುದು ಅಸಾಧ್ಯ ಕೆಲಸ. ಅಂತೂ ಮೋಸ ಹೋದ ಮೇಲೆ ಒಂದು ದೂರಿನೊಂದಿಗೆ ಈ ಪ್ರಕರಣಗಳು ಅಂತ್ಯವಾಗುತ್ತವೆ. ಹೀಗಾಗಿ ಸೈಬರ್ ವಂಚಕರ ಜಾಲಕ್ಕೆ ಬಿದ್ದು ಹಣ ಕಳೆದುಕೊಂಡರೆ ಹಣವಂತೂ ಸಿಗುವುದು ಅಸಾಧ್ಯ. ಒಂದು ಪಕ್ಷ ಮನೆ ಕಳ್ಳರನ್ನು ಹಿಡಿಯಬಹುದು. ಸಬರ್ ವಂಚಕರನ್ನು ಪತ್ತೆ ಮಾಡುವುದು ಕಷ್ಟಕರವಾಗಿದೆ.
ಸೈಬರ್ ಫಿಷಿಂಗ್ ಬಗ್ಗೆ ಎಚ್ಚರ:
ಸೈಬರ್ ವಂಚಕರು ಜನರಿಗೆ ಅರಿವು ಇರುವಂತಹ ಪ್ರಚಲಿತ ವಿಷಯಗಳನ್ನು ಇಟ್ಟುಕೊಂಡೇ ವಂಚನೆಗೆ ಗಾಳ ಹಾಕುತ್ತಾರೆ. ಉಡುಗೊರೆ, ಲಾಟರಿ, ತೆರಿಗೆ ರಿಯಾಯಿತಿ ಹೆಸರಿನಲ್ಲಿ ಬರುವ ಆಫರ್ ಗಳನ್ನು ನಂಬಿ ಸಾರ್ವಜನಿಕರು ಆಸೆಗೆ ಬೀಳಬಾರದು. ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ಬರುವ ಉಡುಗೊರೆ ಆಫರ್ ಗಳನ್ನು ಸ್ವೀಕರಿಸಬಾರದು. ಅವನ್ನು ಸ್ವೀಕರಿಸಿದರೆ, ನಾನಾ ಸೋಗಿನಲ್ಲಿ ವಂಚನೆ ಮಾಡುತ್ತಾರೆ. ಈ ಬಗ್ಗೆ ಸಾರ್ವಜನಿಕರೇ ಎಚ್ಚೆತ್ತುಕೊಳ್ಳಬೇಕು ಎಂದು ಸೈಬರ್ ತಜ್ಞ ನಾ. ವಿಜಯಶಂಕರ್ ಮನವಿ ಮಾಡಿದ್ದಾರೆ.
Recommended Video