ಸಂಗೀತದಲ್ಲಿ ಮಿಂದೇಳಲಿದೆ ಕಬ್ಬನ್ ಪಾರ್ಕ್, ಬರಲು ಮರೆಯದಿರಿ!
ಬೆಂಗಳೂರು, ಜುಲೈ. 11 : ಶ್ರೀ ಚಾಮರಾಜೇಂದ್ರ ಉದ್ಯಾನವನ (ಕಬ್ಬನ್ ಪಾರ್ಕ್) ದಲ್ಲಿ ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಪ್ರತಿ ಭಾನುವಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ.
ನಾಳೆ(ಜುಲೈ12) ಬೆಳಿಗ್ಗೆ 6 ರಿಂದ 7 ಗಂಟೆಯವರೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬ್ಯಾಂಡ್ ಸ್ಟ್ಯಾಂಡ್ ಆವರಣದಲ್ಲಿ "ಉದ್ಯಾನವನದಲ್ಲಿ ಉದಯರಾಗ", ಸಂಜೆ 5 ರಿಂದ 6 ಗಂಟೆವರೆಗೆ "ಉದ್ಯಾನವನದಲ್ಲಿ ಸಂಧ್ಯಾರಾಗ" ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ. ಬೆಳಿಗ್ಗೆ 8 ರಿಂದ 9 ಗಂಟೆವರೆಗೆ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಇಲಾಖೆ ಕಲಾವಿದರಿಂದ ಆಕರ್ಷಕ "ಪೊಲೀಸ್ ಬ್ಯಾಂಡ್" ಸಂಗೀತ ನಾದವಿರುತ್ತದೆ.[ಕಬ್ಬನ್ ಪಾರ್ಕ್ನಲ್ಲಿ ಭಾನುವಾರ ವಾಹನ ಸಂಚಾರ ಶಾಶ್ವತ ನಿಷೇಧ]
ನಗರ ಭೂಸಾರಿಗೆ ನಿರ್ದೇಶನಾಲಯ ಸಹಕಾರದಲ್ಲಿ ಬಾಡಿಗೆ ರಹಿತ ಸೈಕಲ್ ಸವಾರಿ ವ್ಯವಸ್ಥೆ ಮಾಡಲಾಗಿದೆ. ಉದ್ಯಾನವನ ಆವರಣದಲ್ಲಿ ಜೈವಿಕ್ ಕೃಷಿಕ್ ಸೊಸೈಟಿ(ರಿ) ಲಾಲ್ ಬಾಗ್ ವತಿಯಿಂದ ಸಾವಯವ ಪದ್ಧತಿಯ ಮಾವು, ಪಪ್ಪಾಯ, ಏಲಕ್ಕಿ ಬಾಳೆ, ಮೂಸುಂಬಿ, ನೇರಳೆ ಹಣ್ಣುಗಳು ಮತ್ತು ವಿವಿಧ ಹಣ್ಣಿನ ಜ್ಯೂಸ್, ಬಗೆ ಬಗೆಯ ಪ್ರೂಟ್ ಬಾರ್ ಗಳು, ಹಲಸಿನ ಹಣ್ಣಿನ ಚಿಪ್ಸ್ ಮತ್ತು ಇತರೆ ಸಾವಯವ ಆಹಾರ ಪದಾರ್ಥಗಳು ಲಭ್ಯವಿರುತ್ತದೆ.
ದಿ ನರ್ಸರಿಮೆನ್ ಕೋ-ಆಪರೇಟೀವ್ ಸೊಸೈಟಿ, ಲಾಲ್ಬಾಗ್, ವತಿಯಿಂದ ವಿವಿಧ ಅಲಂಕಾರಿಕ ಗಿಡಗಳು ಮತ್ತು ಉದ್ಯಾನವನ ಸಲಕರಣೆ ಮಾರಾಟ ಮತ್ತು ಮನೆಗಳಿಗೆ ಅಗತ್ಯವಿರುವ ಗಿಡಗಳ ಮಾರಾಟಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ. ಗ್ರಂಥಾಲಯ ಇಲಾಖೆ, ಬೆಂಗಳೂರು ಇವರ ವತಿಯಿಂದ ನಗರ ಕೇಂದ್ರ ಗ್ರಂಥಾಲಯ ಮತ್ತು ಇಂದಿರಾ ಪ್ರಿಯದರ್ಶಿನಿ ಮಕ್ಕಳ ಗ್ರಂಥಾಲಯ ಆವರಣದಲ್ಲಿ ಪುಸ್ತಕಗಳ ಪ್ರದರ್ಶನವೂ ಇರುತ್ತದೆ.[ಕಬ್ಬನ್ ಪಾರ್ಕ್ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಾಧಿಕಾರ ರಚನೆ]
ಈ ಭಾನುವಾರ (ಜುಲೈ 12) ಶ್ರೀ ಚಾಮರಾಜೇಂದ್ರ ಒಡೆಯರ್ ಪ್ರತಿಮೆ ಬಳಿ ಬೆಳಿಗ್ಗೆ 7 ರಿಂದ ತಾರಸಿ ಕೈತೋಟ (Terrace Garden) ಮತ್ತು ಅಣಬೆ ಬೇಸಾಯ ಬಗ್ಗೆ ತೋಟಗಾರಿಕೆ ಉಪ ನಿರ್ದೇಶಕರು, ಹಾಗೂ ಜೈವಿಕ ಕೇಂದ್ರ, ಹುಳಿಮಾವು ಅವರು ಪ್ರಾತ್ಯಕ್ಷ್ಷಿಕೆ ಮತ್ತು ತರಬೇತಿ ನೀಡುವರು. ಔಷಧಿ ಹಾಗೂ ಬಾಳೆ ಗಿಡಗಳ ಮಾರಾಟ ಇರುತ್ತದೆ. ಅಲ್ಲದೇ ಅಣಬೆ ಬೇಸಾಯದ ಬಗ್ಗೆಯೂ ತಿಳಿಸಿಕೊಡುವರು.
ಲಾಲ್ ಬಾಗ್ ನಲ್ಲಿಯೂ ಪ್ರತಿ ಭಾನುವಾರ ವಿವಿಧ ಕಾರ್ಯಕ್ರಮ ಏರ್ಪಡಿಸಲು ನಿರ್ಧರಿಸಿದ್ದು, ಭಾನುವಾರ (ಜುಲೈ 12) ಬೆಳಿಗ್ಗೆ 7 ರಿಂದ 9 ಗಂಟೆವರೆಗೆ ಎಮ್.ವಿ.ಜಿ. ಪೊಲೀಸ್ ಬ್ಯಾಂಡ್ ವತಿಯಿಂದ ಸಸ್ಯತೋಟದ ಗಾಜಿನಮನೆ ಆವರಣದಲ್ಲಿ ಆಕರ್ಷಕ "ಪೊಲೀಸ್ ಬ್ಯಾಂಡ್" ಸಂಗೀತ ಕಾರ್ಯಕ್ರಮ ಹಾಗೂ ಮಿಲಿಟರಿ ಸುಧಾರಿತ ಶಸ್ತ್ರಾಸ್ತ್ರಗಳ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ.