ಮಾಜಿ ಸಿಎಂ ಎಚ್ಡಿಕೆಗೆ ಸಚಿವ ಸಿ.ಟಿ. ರವಿ ತಿರುಗೇಟು
ಬೆಂಗಳೂರು, ಸೆ. 01: ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಹಾವಳಿಯ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಸ್ಪೋಟಕ ಮಾಹಿತಿಯನ್ನು ಹಂಚಿಕೊಂಡ ಬಳಿಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಉಂಟಾಗಿದೆ. ಇಂದ್ರಜಿತ್ ಲಂಕೇಶ್ ಅವರ ಹೇಳಿಕೆಯ ಬೆನ್ನಲ್ಲೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕೊಟ್ಟಿರುವ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಅಲ್ಲೊಲ ಕಲ್ಲೊಲ ಸೃಷ್ಟಿಸಿದೆ. ರಾಜ್ಯ ಬಿಜೆಪಿ ಸರ್ಕಾರದ ಹಲವು ಸಚಿವರು ಮಾಜಿ ಸಿಎಂ ಎಚ್ಡಿಕೆ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
Recommended Video
ಡ್ರಗ್ ಮಾಫಿಯಾದ ಹಣದಿಂದಲೇ ಸಮ್ಮಿಶ್ರ ಸರ್ಕಾರ ಪತನವಾಗಿದೆ ಎಂದು ಕುಮಾರಸ್ವಾಮಿ ಅವರು ಹೇಳಿಕೆ ಕೊಟ್ಟಿದ್ದರು. ಅದನ್ನು ಇವತ್ತು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರು ತೀವ್ರವಾಗಿ ಖಂಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಒಮ್ಮೆ ಪರೀಕ್ಷೆಗೆ ಒಳಪಡಿಸಬೇಕು ಎಂದು ಲೇವಡಿ ಮಾಡಿದ್ದಾರೆ. ಜೊತೆಗೆ ಅವರು ಸರಿಯಾಗಿದ್ದಾಗ ಹೇಳಿದ್ದಾರೊ? ಅಥವಾ ಮತ್ತಿನಲ್ಲಿದ್ದಾಗ ಹೇಳಿದ್ದಾರೊ ಎಂಬುದನ್ನು ತಿಳಿಯಲು ಅವರನ್ನು ತಪಾಸಣೆಗೆ ಒಳಪಡಿಸಬೇಕು. ಮೈತ್ರಿ ಸರ್ಕಾರ ಯಾಕೆ ಬಿತ್ತು ಅನ್ನೋದು ಎಲ್ಲರಿಗೂ ಗೊತ್ತಿದೆ.
ಡ್ರಗ್ಸ್ ಮಾಫಿಯಾ ಕುರಿತು ಮಾಜಿ ಸಿಎಂ ಎಚ್ಡಿಕೆ ಗಂಭೀರ ಆರೋಪ
ಸ್ವತಃ ಜೆಡಿಎಸ್ ಪಕ್ಷದ ಅಧ್ಯಕ್ಷರೆ ಪಕ್ಷ ಬಿಟ್ಟು ಬಂದರು. ಮಾಜಿ ಸಚಿವ ರೋಷನ್ ಬೇಗ್ ರಾಜೀನಾಮೆ ನೀಡಿದ್ದರು. ಅದಕ್ಕೆಲ್ಲಾ ಅವರೇ ಕಾರಣ ಕೊಟ್ಟಿದ್ದಾರೆ. ನಮ್ಮ ಸರ್ಕಾರ ಏಕಾಏಕಿ ಬಂದಿಲ್ಲ. ಅದಕ್ಕೆ ಮೈತ್ರಿ ಸರ್ಕಾರದ ಒಂದು ವರ್ಷದ ಆಂತರಿಕ ಕಿತ್ತಾಟ ಕಾರಣವಾಗಿದೆ ಎಂದು ರವಿ ಅವರು ಸಮಜಾಯಿಸಿ ಕೊಟ್ಟಿದ್ದಾರೆ.
ಡ್ರಗ್ಸ್ ಆರೋಪ ಮಾಡುತ್ತಿದ್ದಿರಲ್ಲ? ನೀವು ಆಗ ಮುಖ್ಯಮಂತ್ರಿ ಆಗಿದ್ದವರು. ನಿಮ್ಮ ಬಳಿ ಅಧಿಕಾರ ಇತ್ತು, ಗುಪ್ತಚರ ಇಲಾಖೆ ಇತ್ತು. ಹಾಗಾದರೆ ನೀವು ಅಷ್ಟು ದುರ್ಬಲ ಆಗಿದ್ದೀರಾ? ಅಥವಾ ನಿಮಗೆ ಡ್ರಗ್ ಮಾಫಿಯಾದವರ ಒತ್ತಡ ಇತ್ತಾ? ಆಂತರಿಕ ಬಾಂಧವ್ಯ ಇತ್ತಾ? ನೀವು ಸಿಎಂ ಆಗಿದ್ದವರು, ಹೀಗೆಲ್ಲಾ ಮಾತಾಡಿ ನಗೆಪಾಟಲಿಗೆ ಈಡಾಗಬೇಡಿ. ನಮಗೆ ಜೆಡಿಎಸ್ ಪಕ್ಷದ ಮೇಲೆ ಗೌರವ ಇದೆ. ಹೀಗೆಲ್ಲಾ ಮಾತಾಡಬೇಡಿ ಎಂದು ಸಚಿವ ಸಿ.ಟಿ. ರವಿ ಆರೋಪ ಮಾಡಿದ್ದಾರೆ.