ಬೆಡ್, ಐಸಿಯು ಇಲ್ಲ ಎಂದು ಚಿಕಿತ್ಸೆ ಕೊಡದ ಆಸ್ಪತ್ರೆ ಲೈಸನ್ಸ್ ರದ್ದು!
ಬೆಂಗಳೂರು, ಜುಲೈ 14: ಕೋವಿಡ್ 19 ಎದುರಿಸಲು ಸಜ್ಜಾಗದ ಖಾಸಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಅನುಮತಿ ರದ್ದು ಪಡಿಸಲು ಸರ್ಕಾರ ನಿರ್ಧರಿಸಿದೆ, ನಾಲ್ಕು ತಿಂಗಳ ಹಿಂದೆಯೇ ಎಲ್ಲಾ ಆಸ್ಪತ್ರೆಗಳಿಗೂ ಈ ಬಗ್ಗೆ ಸೂಚನೆ ನೀಡಲಾಗಿತ್ತು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಸಿದ್ದಾರೆ.
ಬೆಂಗಳೂರಿನಲ್ಲಿಂದು ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇದುವರೆಗೆ ಕೋವಿಡ್ ಲ್ಯಾಬ್ ಸ್ಥಾಪಿಸದ, ಹಾಸಿಗೆಗಳನ್ನು ಮೀಸಲಿಡದ, ಚಿಕಿತ್ಸೆ ನಿರಾಕರಿಸುತ್ತಿರುವ ಮತ್ತು ಅಗತ್ಯ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸದ ಖಾಸಗಿ ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಆದೇಶಿಸಿದ್ದಾರೆ ಎಂದು ತಿಳಿಸಿದರು.
ಹಾಸಿಗೆಗಳ ಹಂಚಿಕೆಗೆ ಕೇಂದ್ರೀಕೃತ ವ್ಯವಸ್ಥೆ : ಸಚಿವ ಡಾ.ಕೆ.ಸುಧಾಕರ್
ಸಾರ್ವಜನಿಕರ ರಕ್ಷಣೆಯ ವಿಚಾರದಲ್ಲಿ ಇಂತಹ ವೈಫಲ್ಯಗಳನ್ನು ಸಹಿಸಲಾಗುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಸಾರ್ವಜನಿಕ ಆರೋಗ್ಯ ತಜ್ಞ ಡಾ.ಎಂ.ಕೆ.ಸುದರ್ಶನ್ ಮತ್ತು ಆರೋಗ್ಯ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಅವರು ಉಪಸ್ಥಿತರಿದ್ದರು.
ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ನಡೆಸಿದ ಸುದೀರ್ಘವಾದ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿದ ಸಚಿವ ಸುಧಾಕರ್ ಸಭೆಯ ಮುಖ್ಯಾಂಶಗಳನ್ನು ಮಾಧ್ಯಮಗಳಿಗೆ ತಿಳಿಸಿದರು. 1 ವಾರ ಸಂಪೂರ್ಣ ಲಾಕ್ಡೌನ್ ಇರಲಿದ್ದು ಅಗತ್ಯ ಸೇವೆಗಳಿಗೆ ಮಾತ್ರ ಬೆಳಗ್ಗೆ 6 ಗಂಟೆಯಿಂದ ಮದ್ಯಾಹ್ನ 12 ಗಂಟೆಯವರೆಗೆ ರಿಯಾಯಿತಿ ಇರಲಿದೆ ಎಂದು ಹೇಳಿದರು. ಈ ಕುರಿತಾದ ವಿವರವಾದ ಮಾರ್ಗಸೂಚಿ ಇಂದು ರಾತ್ರಿ ಬಿಡುಗಡೆಯಾಗಲಿದೆ, ಇದು ಬೆಂಗಳೂರಿನ ಜನರ ಜೀವ ರಕ್ಷಣೆಗಾಗಿ ತೆಗೆದುಕೊಂಡಿರುವ ಸ್ಪಷ್ಟ ನಿರ್ಧಾರ ಎಂದು ಸಚಿವರು ಹೇಳಿದರು.
ಕರ್ನಾಟಕದಲ್ಲಿ ಕೊರೊನಾವೈರಸ್ ನಿಯಂತ್ರಣಕ್ಕೆ ಇಲ್ಲಿವೆ ಶಿಸ್ತುಕ್ರಮಗಳು
ಬೂತ್ ಮಟ್ಟದ ಕಾರ್ಯಪಡೆಗಳಿಗೆ ಮಾರ್ಗಸೂಚಿ
ಬೂತ್ ಮಟ್ಟದ ಕಾರ್ಯಪಡೆಗಳಿಗೆ ನೀಡಬೇಕಾಗಿರುವ ಮಾರ್ಗಸೂಚಿಗಳ ಕುರಿತು ವಿವರಿಸಿದ ಸಚಿವರು, ಕಾರ್ಯಪಡೆಯ ಸದಸ್ಯರು ಪ್ರತಿ ಮನೆಗಳಿಗೂ ಭೇಟಿ ನೀಡಲಿದ್ದು ರಿವರ್ಸ್ ಐಸೊಲೇಶನ್ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಇದರಿಂದ ಸೋಂಕು ಇಲ್ಲದವರನ್ನು ರಕ್ಷಿಸಲು ಸಾಧ್ಯವಾಗುವುದಲ್ಲದೆ, ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರ ಪತ್ತೆ ಹಚ್ಚಲು ನೆರವಾಗಿವುದು. ಅಲ್ಲದೆ ಐಎಲ್ಐ ಮತ್ತು ಎಸ್ಎಆರ್ಐ ಲಕ್ಷಣ ಇರುವ ವ್ಯಕ್ತಿಗಳನ್ನು ಪತ್ತೆಹಚ್ಚಿ ಪರೀಕ್ಷೆ ಮಾಡಿಸುವುದು ಮತ್ತು ಕ್ವಾರಂಟೈನ್ ಮಾಡಿಸುವ ನಿಟ್ಟಿನಲ್ಲಿ ನೆರವಾಗಲಿದ್ದಾರೆ. ಸೋಂಕಿನ ಲಕ್ಷಣ ಇರುವವರಿಗೆ ಆಂಬುಲೆನ್ಸ್, ಆಸ್ಪತ್ರೆಗೆ ದಾಖಲು ಮಾಡುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಕಾರ್ಯಪಡೆ ನಿರ್ವಹಿಸಲಿದೆ ಎಂದು ಸಚಿವರು ತಿಳಿಸಿದರು.