ಚಿಂದಿ ಆಯುವ ಬಾಂಗ್ಲಾದೇಶಿಯರ ಬ್ಯಾಗಲ್ಲಿ 90 ಲಕ್ಷ ರೂ. ಸಿಕ್ಕ ರೋಚಕ ಸ್ಟೋರಿ !
ಬೆಂಗಳೂರು, ಜೂ. 08: ಅವರು ಚಿಂದಿ ಆಯುವ ಯುವಕರು. ಬರೋಬ್ಬರಿ 40 ಸಾವಿರ ಬಾಡಿಗೆ ಕೊಟ್ಟು ಕಾರಿನಲ್ಲಿ ಕೋಲ್ಕತಾಗೆ ಪ್ರಯಾಣ ಬೆಳೆಸಿದ್ದರು. ಚಿತ್ತೂರಿನ ಲಾಕ್ ಡೌನ್ ಚೆಕ್ ಪೋಸ್ಟ್ ನಲ್ಲಿ ಸಿಕ್ಕಿಬಿದ್ದ ಚಿಂದಿ ಆಯುವರ ಬಳಿ ಸಿಕ್ಕಿದ್ದು ಬರೋಬ್ಬರಿ 90 ಲಕ್ಷ ರೂಪಾಯಿ ! ಅಷ್ಟು ದುಡ್ಡಲ್ಲಿ ಅವರು ಕರ್ಚು ಮಾಡಿದ್ದು ಕೇವಲ 1600 ರೂ. ಮಾತ್ರ. ದುಡ್ಡು ಖರ್ಚು ಮಾಡುವುದು ಗೊತ್ತಾಗದೇ ಪೊಲೀಸರಿಗೆ ಸಿಕ್ಕಿಬಿದ್ದ ಚಿಂದಿ ಆಯುವರ ಕಳ್ಳತನ ಕಹಾನಿಯ ರೋಚಕ ಸ್ಟೋರಿ ಇಲ್ಲಿದೆ ಓದಿ.
ಮೊದಲ ಕಳ್ಳತನ
ಕಳ್ಳ ಜೋಡಿಯ ಹೆಸರು ಸಂಜೀವ್ ಸಾಹ, ಹಾಗೂ ಶಿಭಂಕರ್ ಸಿಲ್. ಮೂಲತಃ ಬಾಂಗ್ಲಾದೇಶಿಯರು. ಬೆಂಗಳೂರಿಗೆ ಬಂದಿದ್ದ ಇವರು ಚಿಂದಿ ಆಯುವ ಕೆಲಸ ಮಾಡುತ್ತಿದ್ದರು. ಪೀಣ್ಯ ಸಮೀಪದ ಬಾಗಲಗುಂಟೆ ಅಕ್ಕ ಪಕ್ಕದಲ್ಲಿ ಚಿಂದಿ ಆಯುವ ಮೂಲಕ ದಿನಕ್ಕೆ ಐದು ನೂರು ರೂಪಾಯಿ ದುಡಿದು ಜೀವನ ಸಾಗಿಸುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಕಳ್ಳತನ ಮಾಡಿ ಶ್ರೀಮಂತರಾಗುವ ಕನಸು ಕಂಡರು. ಲಾಕ್ ಡೌನ್ ಸಮಯದಲ್ಲಿ ಯಾರೂ ಇಲ್ಲದ ಮನೆಗಳನ್ನು ಟಾರ್ಗೆಟ್ ಮಾಡಿದರು. ಅಂದುಕೊಂಡಂತೆ ಬಾಗಲಗುಂಟೆಯ ಎಂಎಚ್ಎಆರ್ ಬಡಾವಣೆಯ ಮನೆಯೊಂದಕ್ಕೆ ಕನ್ನ ಹಾಕಿದ್ದರು. ಅಂದುಕೊಂಡಂತೆ ಮೊದಲ ಪ್ರಯತ್ನದಲ್ಲಿಯೇ ಒಂದು ಕೋಟಿ ಹಣ ಸಿಕ್ಕಿತ್ತು.
ನೆರೆ ಮನೆಯವರಿಂದ ಮಾಹಿತಿ
ಮನೆಯ ಬೀಗ ಮುರಿದಿದ್ದನ್ನು ಗಮನಿಸಿದ ಪಕ್ಕದ ಮನೆಯವರು ವೈದ್ಯ ವಿದ್ಯಾರ್ಥಿಯ ತಾತ ಈರಪ್ಪ ಅವರಿಗೆ ವಿಚಾರ ತಿಳಿಸಿದ್ದರು. ಬಾಗಲಗುಂಟೆ ಸಿದ್ದೇನಹಳ್ಳಿಯ ಮನೆಗೆ ಬಂದು ನೋಡಿದಾಗ ವೈದ್ಯಕೀಯ ಸ್ನಾತಕೋತ್ತರ ಪದವಿಗೆ ತಂದಿಟ್ಟಿದ್ದ ಹಣ ಇರಲಿಲ್ಲ. ಗಾಬರಿಗೊಂಡು ಕೂಡಲೇ ಸಮೀಪದ ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳ ಪತ್ತೆಗಾಗಿ ಬಾಗಲಗುಂಟೆ ಪೊಲೀಸರು ಪ್ರಯತ್ನಿಸಿದ್ದರು. ಆದರೆ, ಚಿಂದಿ ಆಯುವರ ಸುಳಿವು ಸಿಕ್ಕಿರಲಿಲ್ಲ.
ಹೊಸಕೋಟೆಗೆ ನಡೆದಕೊಂಡೇ ಎಸ್ಕೇಪ್
ಚಿಂತಾಮಣಿ ಮೂಲದ ವೈದ್ಯಕೀಯ ವಿದ್ಯಾರ್ಥಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಮನೆಗೆ ಬೀಗ ಹಾಕಿಕೊಂಡು ಊರಿಗೆ ಹೋಗಿದ್ದ. ಇದನ್ನು ಗಮನಿಸಿದ್ದ ಚಿಂದಿ ಆಯುವರು ಮನೆ ಬೀಗ ಮುರಿದು ಒಳಗೆ ನುಗ್ಗಿದ್ದಾರೆ. ಶುಲ್ಕ ಪಾವತಿಸಲೆಂದು ವೈದ್ಯ ವಿದ್ಯಾರ್ಥಿ ಇಟ್ಟಿದ್ದ 90 ಲಕ್ಷ ರೂ. ಹಣವನ್ನು ಎಗರಿಸಿದ್ದಾರೆ. ಇಲ್ಲಿ ವಾಹನದಲ್ಲಿ ಹೋದರೆ ಪೊಲೀಸರು ಹಿಡಿದು ಬಿಡುತ್ತಾರೆ ಎಂದು ಪೀಣ್ಯಾ ದಿಂದ ಹೊಸಕೋಟೆ ವರೆಗೂ ನಡೆದುಕೊಂಡೇ ಹೋಗಿದ್ದಾರೆ. ಅಲ್ಲಿಂದ ಆಂಧ್ರ ಪ್ರದೇಶದ ಮೂಲಕ ಪಶ್ಚಿಮ ಬಂಗಾಳ ತಲುಪಲು ಯೋಜನೆ ರೂಪಿಸಿದ್ದಾರೆ. ಅದಕ್ಕಾಗಿ ಹೊಸಕೋಟೆಯಿಂದ 40 ಸಾವಿರ ರೂ. ಬಾಡಿಗೆಗೆ ಕಾರು ತೆಗೆದುಕೊಂಡಿದ್ದಾರೆ. ಕರ್ನಾಟಕ ಗಡಿ ದಾಟಿ ಮುಳಬಾಗಿಲು ಮೂಲಕ ಚಿತ್ತೂರು ತಲುಪಿದ್ದಾರೆ.
ಚಿತ್ತೂರಿನಲ್ಲಿ ಲಾಕ್
ಲಾಕ್ ಡೌನ್ ಹಿನ್ನೆಲೆಯಲ್ಲಿ ಕಾರನ್ನು ಪಲಮನೇರು ಸಮೀಪ ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಚಿಂದಿ ಆಯುವರ ಬಳಿಯಿದ್ದ 90 ಲಕ್ಷ ರೂ. ನಗದು ಹಣ ಪತ್ತೆಯಾಗಿದೆ. ವಿಚಾರಣೆ ನಡೆಸಿದಾಗ ವೈದ್ಯ ವಿದ್ಯಾರ್ಥಿಯ ಮನೆ ಬಾಗಿಲು ಮುರಿದು ಕಳ್ಳತನ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಈ ಕುರಿತು ಹೆಚ್ಚಿನ ವಿಚಾರಣೆ ನಡೆಸಿದ ಆಂಧ್ರ ಪೊಲೀಸರು ಬೆಂಗಳೂರಿನ ಪೊಲೀಸ್ ಆಯುಕ್ತರ ಕಚೇರಿಗೆ ಮಾಹಿತಿ ನೀಡಿದ್ದಾರೆ. ಆಂಧ್ರ ಪೊಲೀಸರ ಮಾಹಿತಿ ಮೇರೆಗೆ ಬಾಂಗ್ಲಾ ಮೂಲದ ಇಬ್ಬರು ಆರೋಪಿಗಳನ್ನು ವಿಚಾರಣೆ ನಡೆಸಿ ಅಷ್ಟೂ ಹಣವನ್ನು ಸಂಗ್ರಹಿಸಿದ್ದಾರೆ.
Recommended Video
ಬರೀ 1600 ರೂ. ವೆಚ್ಚ
ಒಂದು ಕೋಟಿ ರೂ. ಕದ್ದರೂ ಚಿಂದಿ ಆಯುವರಿಗೆ ಅದನ್ನು ಯಾವ ರೀತಿ ಖರ್ಚು ಮಾಡಬೇಕು ಎಂಬುದು ಗೊತ್ತಾಗಿಲ್ಲ. ಹೀಗಾಗಿ ಬರೀ 1600 ರೂ. ವೆಚ್ಚ ಮಾಡಿ ಉಳಿದ ಹಣವನ್ನು ಹಾಗೇ ಇಟ್ಟುಕೊಂಡಿದ್ದರು. ಅಷ್ಟೂ ಹಣವನ್ನು ಬಾಗಲಗುಂಟೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜೀವವೇ ಕಳೆದುಕೊಂಡಂತಾಗಿದ್ದ ವೈದ್ಯ ವಿದ್ಯಾರ್ಥಿ ಮರು ಜೀವ ಪಡೆದಂತಾಗಿದೆ. ಇನ್ನು ಲಾಕ್ ಡೌನ್ ಹಿನ್ನೆಲೆಯಲ್ಲಿ ಬೀಗ ಮುರಿದು ಕಳ್ಳತನ ಮಾಡಿರುವ ಬಗ್ಗೆ ಸಂಜೀವ್ ಹಾಗೂ ಶಿಭಂಕರ್ ನನ್ನು ಬಾಗಲಗುಂಟೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸ್ನಾತಕೋತ್ತರ ವೈದ್ಯಕೀಯ ಪದವಿಗಾಗಿ ಸಂಗ್ರಹಿಸಿಟ್ಟಿದ್ದ ದುಡ್ಡು ಸಿಕ್ಕಿ ಬಗ್ಗೆ ವೈದ್ಯ ವಿದ್ಯಾರ್ಥಿ ಕುಟುಂಬ ಸಂತಸದಲ್ಲಿ ತೇಲಾಡುತ್ತಿದೆ.