ಕ್ರೈಂಸ್ಟೋರಿ: ನಿರ್ಮಾಪಕನಿಂದ ನಟ ವಿನೋದ್ ಮರ್ಡರ್, ಬೆಚ್ಚಿದ್ದ ಸಿನಿರಂಗ
ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿಗಳು ಸಿನಿಮಾ ಮಾಡಲು ದುಡ್ಡು ಸುರಿಯಲು ಮುಂದಾಗಿದ್ದ ಕಾಲವದು. ನಿರ್ಮಾಪಕರ ಡಾರ್ಲಿಂಗ್ ಎನಿಸಿಕೊಂಡಿರುವ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಮುಖ್ಯ ಭೂಮಿಕೆಯಲ್ಲಿದ್ದ ಚಿತ್ರ ಮಾದೇಶ. ರವಿಶ್ರೀವತ್ಸ ಅವರ ನಿರ್ದೇಶನದಲ್ಲಿ ಬಂದ ಚಿತ್ರಕ್ಕೆ ಹಣ ಹಾಕಿದ್ದವರು ನಿರ್ಮಾಪಕ ಬಿ.ಎಂ ಗೋವರ್ಧನ ರೆಡ್ಡಿ. ಈ ಗೋವರ್ಧನ ರೆಡ್ಡಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ಕನ್ನಡ ಸಿನಿಮಾ ನಿರ್ಮಾಪಕರಾಗಿ ಭೂಗತ ಜಗತ್ತಿನ ಕಥೆಯಿದ್ದ ಮಾದೇಶ ಚಿತ್ರದಿಂದ ಲಾಭ ಗಳಿಸಿದ್ದರು. ಚಿತ್ರ ಹಿಟ್ ಆಗಿತ್ತು.
Recommended Video
ಶಿವರಾಜ್ ಕುಮಾರ್ ನಟನೆಯ 'ಮಾದೇಶ' ಚಿತ್ರದಿಂದ ಹಿಟ್ ನಿರ್ಮಾಪಕ ಎನಿಸಿಕೊಂಡಿದ್ದ ಗೋವರ್ಧನ್ ಸಿನಿಮಾ ಫೀಲ್ಡಿನಲ್ಲಿ ಒಂದೆರಡು ಚಿತ್ರಕ್ಕೆ ದುಡ್ಡು ಹಾಕಿದ್ದರು. ಬಹುಶಃ 2008ರ ಅಕ್ಟೋಬರ್ 7ರ ಮಧ್ಯರಾತ್ರಿ ಗಲಾಟೆ ನಂತರ ಕೊಲೆ ನಡೆಯದಿದ್ದರೆ ಇಂದಿಗೆ ಯಶಸ್ವಿ ನಿರ್ಮಾಪಕರಾಗಿ ಚಿತ್ರರಂಗದಲ್ಲಿ ಉಳಿಯುತ್ತಿದ್ದರೋ ಏನೋ, ಆದರೆ, ರಿಯಲ್ ಎಸ್ಟೇಟ್ ದಂಧೆ, ವ್ಯವಹಾರವೇ ಮುಖ್ಯವಾಗಿತ್ತು.
ಅಂದು ಯುವ ನಟ ವಿನೋದ್ ನನ್ನು ಫಾರಂಹೌಸ್ ಗೆ ಕರೆಸಿಕೊಂಡು ಮಾತನಾಡಿದ್ದು ಕೂಡಾ ರಿಯಲ್ ಎಸ್ಟೇಟ್ ದಂಧೆ ವಿಷಯವನ್ನೇ, ಇಬ್ಬರ ನಡುವೆ ಭೂ ವಿವಾದದ ಮಾತಿನ ಚಕಮಕಿ, ಗುಂಡಿನ ಮತ್ತು ಮುಂದಿನ ಕರಾಳ ಬದುಕಿಗೆ ನಾಂದಿ ಹಾಡಿತು.. ವಿನೋದ್ ಗುಂಡೇಟಿನಿಂದ ಮೃತನಾದರೆ, ಗೋವರ್ಧನ್ ಇಂದು ಜೀವಾವಧಿ ಶಿಕ್ಷೆಗೊಳಪಟ್ಟಿದ್ದಾರೆ.
ಇಷ್ಟಕ್ಕೂ ಕೊಲೆ ನಡೆದಿದ್ದು ಏಕೆ?
ನಿರ್ಮಾಪಕ ಗೋವರ್ಧನ್ ಹಾಗೂ ಆತನ ಅಂಗರಕ್ಷಕರು ಅಕ್ಟೋಬರ್ 9, 2008ರ ಮಧ್ಯರಾತ್ರಿ ಬೆಂಗಳೂರಿನ ಹೊರವಲಯದ ಬಾಗಲೂರಿನ ಫಾರಂಹೌಸೊಂದರಲ್ಲಿ ನಟ ವಿನೋದ್ ಕುಮಾರ್ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಘಟನೆ ತಪ್ಪಿಸಿಕೊಂಡಿದ್ದ ಗೋವರ್ಧನ್ ರನ್ನು ಕೊಚ್ಚಿಯಲ್ಲಿ ಬಂಧಿಸಲಾಗಿತ್ತು. 2012ರಲ್ಲಿ ಈ ಕೇಸಿನಿಂದ ಖುಲಾಸೆಗೊಂಡಿದ್ದರು. ನಂತರ ಈ ಕೇಸ್ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಕೊಲೆ ಆರೋಪ ಸಾಬೀತಾಗಿ ಜೈಲು ಪಾಲಾಗಿದ್ದ ನಿರ್ಮಾಪಕ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಗೋವರ್ಧನ್ ಮೂರ್ತಿ ನಂತರ ತಮ್ಮ ಬದುಕಿನ ಕಹಿನೆನಪು ಮರೆತು ಹೊಸ ಬದುಕಿನತ್ತ ಹೆಜ್ಜೆ ಇಟ್ಟಿದ್ದರು.
ಭೂವಿವಾದಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ
ಚಿಕ್ಕಬಳ್ಳಾಪುರದಲ್ಲಿರುವ ಜಮೀನಿನ ರಿಜಿಸ್ಟ್ರೇಷನ್ ಮಾಡಿಸಿಕೊಂಡು ಬೆಂಗಳೂರಿಗೆ ಬರುತ್ತಿದ್ದ ವಿನೋದ್ ಆತನ ಸ್ನೇಹಿತ ಶಂಕರರೆಡ್ಡಿ ಎಂಬಾತನೊಂದಿಗೆ ಬಾಗಲೂರಿನ ಫಾರಂಹೌಸ್ ನಲ್ಲಿ ಪಾರ್ಟಿಗೆ ತೆರಳಿದ್ದಾರೆ. ಅಲ್ಲಿಗೆ ಮಾದೇಶ ಚಿತ್ರ ನಿರ್ಮಾಪಕ ಗೋವರ್ಧನ್ ರೆಡ್ಡಿ ಹಾಗೂ ಅವರ ಅಂಗರಕ್ಷಕರು ಪಾರ್ಟಿಯಲ್ಲಿ ಕೂಡಿಕೊಂಡಿದ್ದಾರೆ
ಭೂವಿವಾದಕ್ಕೆ ಸಂಬಂಧಿಸಿದಂತೆ ಗೋವರ್ಧನರೆಡ್ಡಿ ಹಾಗೂ ಶಂಕರ್ ರೆಡ್ಡಿ ನಡುವೆ ಮಾತಿನ ಚಕಮಕಿ ನಡೆದಿದೆ. ಶಂಕರ್ ರೆಡ್ಡಿ ಅಲ್ಲಿಂದ ತೆರಳಿದ್ದಾರೆ. ನಂತರ ಗುಂಡಿನ ಪಾರ್ಟಿಯಲ್ಲಿ ಗುಂಡು ಹಾರಿದ್ದು ಏಕೆ? ಹಾರಿಸಿದ್ದು ಯಾರು ಎಂಬುದು ಗೊಂದಲವಾಗೇ ಉಳಿದಿತ್ತು.
ನೀನು ಹುಡುಕುವ ಗುಂಡು ಇಲ್ಲಿದೆ ನೋಡು
ಮಧ್ಯರಾತ್ರಿ ಎಲ್ಲರೂ ಪಾನಮತ್ತರಾಗಿದ್ದರು, 7.7 ಎಂಎಂ ಪಿಸ್ತೂಲಿನಿಂದ ಎರಡು ಸುತ್ತು ಗುಂಡು ಹಾರಿಸಲಾಗಿತ್ತು. ವಿನೋದ್ ಎದೆ ಹಾಗೂ ಹೊಟ್ಟೆಗೆ ಗುಂಡು ತಗುಲಿತ್ತು. ಮೊದಲಿಗೆ ಗುಂಡು ಹಾರಿಸಿದ್ದು ಸೆಕ್ಯುರಿಟಿ ಗಾರ್ಡ್ಸ್. ರೆಸಾರ್ಟ್ ನ ನಾಲ್ವರು ಸೆಕ್ಯುರಿಟಿ ಗಾರ್ಡ್ ಸಿಬ್ಬಂದಿ ಕುಡಿದ ಮತ್ತಿನಲ್ಲಿ ತಮ್ಮ ಬಳಿ ಇದ್ದ ಗನ್ ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂದ ವಿನೋದ್ ಕಣ್ಣಿಗೆ ಸಿಟ್ಟಿನಲ್ಲಿ ಪಿಸ್ತೂಲ್ ಹಿಡಿದು ನಿಂತಿದ್ದ ಗೋವರ್ಧನ್ ಕಾಣಿಸಿದ್ದಾರೆ. ಏನದು ಗುಂಡಿನ ಸದ್ದು ಎಂದು ಕೇಳಿದ್ದಾನೆ. ಥೇಟ್ ಸಿನಿಮಾ ಸ್ಟೈಲಿನಲ್ಲಿ ನೀನು ಹುಡುಕುವ ಗುಂಡು ನಿನ್ನ ದೇಹ ಸೇರಿದೆ ನೋಡು ಎಂದು ವಿನೋದ್ ಕಡೆ ಗುಂಡು ಹಾರಿಸಿದ್ದಾರೆ. ರಾತ್ರಿ ಸುಮಾರು 1.30 ಕ್ಕೆ ನಡೆದ ಈ ಘಟನೆಯಿಂದ ನಮಗೆಲ್ಲ ಗಾಬರಿಯಾಗಿತ್ತು ಎಂದು ಪ್ರತ್ಯಕ್ಷದರ್ಶಿ, ರೆಸಾರ್ಟ್ ಸಿಬ್ಬಂದಿ ತ್ರಿಪಾಠಿ ಹೇಳಿಕೆ ನೀಡಿದ್ದ. ಆದರೆ, ಗೋವರ್ಧನ್ ಗುಂಡು ಹಾರಿಸಿದ್ದು ಎಂಬುದಕ್ಕೆ ಸಾಕ್ಷಿ ಇರಲಿಲ್ಲ.
ಗೋವರ್ಧನ್ ವಿರುದ್ಧ ದೂರು ನೀಡಿದ್ದ ಶಂಕರ್ ರೆಡ್ಡಿ
ಅಂದು ರಕ್ತದ ಮಡಲಿನಲ್ಲಿ ಮಲಗಿದ್ದ ವಿನೋದ್ ನೋಡಿದ ನಂತರ ಗಾಬರಿಗೊಂಡ ಗೋವರ್ಧನ್ ತನ್ನ ಅಂಗರಕ್ಷಕರಿಗೆ ಸೇವ್ ಮಿ ಎಂದಿದ್ದಾರೆ. ಅಲ್ಲಿಂದ ತಕ್ಷಣವೆ ಎಲ್ಲರೂ ಕಾರು ಹತ್ತಿ ಕೇರಳ ಕಡೆಗೆ ಪರಾರಿಯಾಗಿದ್ದಾರೆ. ಇತ್ತ ವಿನೋದ್ ಜೊತೆಗೆ ಬಂದಿದ್ದ ಶಂಕರ್ ಅವರು ಮೊದಲಿಗೆ ಸತ್ಯ ಸಾಯಿ ಆಸ್ಪತ್ರೆಗೆ ನಂತರ ಮಣಿಪಾಲ್ ಆಸ್ಪತ್ರೆಗೆ ವಿನೋದ್ ಸೇರಿಸಿ ಉಳಿಸಿಕೊಳ್ಳಲು ಯತ್ನಿಸಿ ವಿಫಲರಾಗಿದ್ದಾರೆ. ವಿನೋದ್ ಸಂಬಂಧಿಕರಾದ ಶ್ರೀನಿವಾಸ್ ಹಾಗೂ ಶಂಕರ್ ಇಬ್ಬರು ನಿರ್ಮಾಪಕ ಗೋವರ್ಧನರೆಡ್ಡಿ ಮೇಲೆ ಅನುಮಾನ ವ್ಯಕ್ತಪಡಿಸಿ, ಬಾಗಲೂರಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಡಿಸಿಪಿ ಮಾಲಗತ್ತಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಕೊಚ್ಚಿಯಲ್ಲಿ ಸಿಕ್ಕಿಬಿದ್ದಿದ್ದ ಗೋವರ್ಧನ್
ಅಂದು ಚಿಕಿತ್ಸೆ ಫಲಕಾರಿಯಾಗದೆ ವಿನೋದ್ ಮೃತಪಟ್ಟಿದ್ದ. ಗುಲಾಮ ಚಿತ್ರದಲ್ಲಿ ನಟಿಸಿದ್ದ ವಿನೋದ್ ಕುಮಾರ್ ಇನ್ನು ಒಂದೆರಡು ಚಿತ್ರಗಳಲ್ಲಿ ಅವಕಾಶ ಪಡೆದುಕೊಂಡಿದ್ದ. ಇತ್ತ ನಿರ್ಮಾಪಕ ಗೋವರ್ಧನ್ ನಾಪತ್ತೆಯಾಗಿದ್ದವ ಕೊಚ್ಚಿಯಲ್ಲಿ ಬೆಂಗಳೂರು ಪೊಲೀಸ್ ವಶಕ್ಕೆ ಸಿಕ್ಕಿಬಿದ್ದಿದ್ದ. ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿದ್ದ. ಆದರೆ, ಸೆಷನ್ಸ್ ನ್ಯಾಯಾಲಯದಲ್ಲಿ ಗುಂಡು ಹಾರಿಸಿದ ಘಟನೆ ಗೊಂದಲದ ಲಾಭ ಪಡೆದು ಜಾಮೀನು ನಂತರ ಪ್ರಕರಣದಿಂದ ಖುಲಾಸೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಕೇಸ್ ಖುಲಾಸೆ ಬೆನ್ನಲ್ಲೇ ಮದುವೆ
2017ರಲ್ಲಿ ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಮಂಜುಳಾ ಹಾಗೂ ಚಿತ್ರ ನಿರ್ಮಾಪಕ ಗೋವರ್ಧನ ಮೂರ್ತಿ ಅವರ ವಿವಾಹ ಸರಳವಾಗಿ ದೇವಸ್ಥಾನವೊಂದರಲ್ಲಿ ನಂತರ ಸಬ್ ರಿಜಿಸ್ಟರ್ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಲಾಯಿತು. ಎಚ್. ಎಂ. ರೇವಣ್ಣ ಅವರ ಆಪ್ತ ಸಂಬಂಧಿಯಾದ ಮಂಜುಳಾ ಅವರು ಕಾಂಗ್ರೆಸ್ಸಿನಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರಬಲ ನಾಯಕಿ ಎಂದೇ ಗುರುತಿಸಿಕೊಂಡಿದ್ದಾರೆ. ಆದರೆ, ಗೋವರ್ಧನ್ ಬದುಕು ಸರಿ ದಾರಿಗೆ ಬರುತ್ತಿದೆ ಎನ್ನುವಾಗಲೇ ವಿನೋದ್ ಮರ್ಡರ್ ಕೇಸ್ ಮತ್ತೆ ಓಪನ್ ಆಗಿತ್ತು.
ಹಿರಿಯ ವಕೀಲರಿಂದ ವಾದ ಈ ಬಾರಿ ಫಲಿಸಲಿಲ್ಲ
ಸೆಷನ್ಸ್ ಕೋರ್ಟ್ ಖುಲಾಸೆಗೊಳ್ಳಲು ಮುಖ್ಯ ಕಾರಣ ಹಿರಿಯ ಕ್ರಿಮಿನಲ್ ಲಾಯರ್ ಎಂಬುದು ಕೇಸ್ ಬಲ್ಲವರಿಗೆ ಗೊತ್ತು. ಆದರೆ, ಈ ಪ್ರಕರಣದ ವಿರುದ್ಧ ಮತ್ತೆ ದೂರು, ರೀ ಓಪನ್ ಮಾಡುವಂತೆ ಒತ್ತಡ ಹೆಚ್ಚಾಗುತ್ತಿದ್ದಂತೆ, ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ಸರ್ಕಾರವು ಮೇಲ್ಮನವಿ ಸಲ್ಲಿಸಿತ್ತು ಎಸ್ ಪಿ. ಪಿ. ವಿ.ಎಂ. ಶೀಲವಂತರ್ ವಾದಿಸಿದ್ದರು. ನ್ಯಾ.ಎಸ್.ಎನ್.ಸತ್ಯನಾರಾಯಣ, ಎಚ್.ಪಿ.ಸಂದೇಶ್ ರವರಿದ್ದ ಹೈಕೋರ್ಟ್ ವಿಭಾಗೀಯ ಪೀಠವು ಅಪರಾಧಿ ಗೋವರ್ಧನ ಮೂರ್ತಿಗೆ ಮಾರ್ಚ್ 20, 2020ರಂದು ಜೀವಾವಧಿ ಶಿಕ್ಷೆ, 5 ಲಕ್ಷ ರು ದಂಡ ವಿಧಿಸಿದ್ದು, ದಂಡದ ಮೊತ್ತದಲ್ಲಿ4.50 ಲಕ್ಷ ರು ವಿನೋದ್ ತಾಯಿಗೆ ಸಂದಾಯ ಮಾಡುವಂತೆ ಸೂಚಿಸಿದೆ.