ಕ್ರೈಂ ರೌಂಡಪ್: ಐಎಎಸ್ ಅಧಿಕಾರಿ ಅಂತ ಹೇಳಿಕೊಂಡು ಸಿಕ್ಕ ಸಿಕ್ಕವರಿಗೆ ಟೋಪಿ
ಬೆಂಗಳೂರು, ಅಕ್ಟೋಬರ್ 14: ಐಎಎಸ್ ಅಧಿಕಾರಿ ಸೋಗಿನಲ್ಲಿ 25 ಕ್ಕೂ ಹೆಚ್ಚು ಮಂದಿಗೆ ವಂಚಿಸಿದ ನಕಲಿ ಐಎಎಸ್ ಅಧಿಕಾರಿ ಅಂದರ್. ಕ್ಷುಲಕ ಕಾರಣಕ್ಕೆ ಜಗಳ ತೆಗೆದು ಪಬ್ಲಿಕ್ ನಲ್ಲಿ ಫೈರಿಂಗ್. ಸಂಚಾರ ಪೊಲೀಸರಿಗೆ ಅಶ್ಲೀಲವಾಗಿ ನಿಂದನೆ ಮಾಡಿದ್ದ ಆರೋಪಿಗೆ ದಂಡ.
ತಾನೊಬ್ಬ ಐಎಎಸ್ ಅಧಿಕಾರಿ ಎಂದು ಪೋಸ್ ಕೊಟ್ಟು 25 ಕ್ಕೂ ಹೆಚ್ಚು ಮಂದಿಯನ್ನು ವಂಚಿಸಿದ್ದ ನಕಲಿ ಐಎಎಸ್ ಅಧಿಕಾರಿಯನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಮೂಲದ ಸಂದೀಪ್ ಬಂಧಿತ ಆರೋಪಿ. ಈತನನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಈತ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ 25 ಕ್ಕೂ ಹೆಚ್ಚು ಮಂದಿಯನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ.
ಥೇಟ್ ಐಎಎಸ್ ಅಧಿಕಾರಿ ತರನೇ ಫೋಸ್ ಕೊಡುತ್ತಿದ್ದ ಸಂದೀಪ್ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವ ಗುತ್ತಿಗೆ ನೌಕರರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ನಾನು ಐಎಎಸ್ ಅಧಿಕಾರಿ. ಆರೋಗ್ಯ ಇಲಾಖೆಯಲ್ಲಿರುವ ಎಲ್ಲಾ ಅಧಿಕಾರಿಗಳು ನನಗೆ ಗೊತ್ತು. ಈ ಮೊದಲು ನಾನು ಅದೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೆ ಎಂದು ಸುಳ್ಳು ಹೇಳಿ ಮುಗ್ಧರನ್ನು ನಂಬಿಸುತ್ತಿದ್ದ. ನಂಬಿಕೆ ಬರುವಂತೆ ಮಾಡಿ ಐಷಾರಾಮಿ ಹೋಟೆಲ್ಗಳಿಗೆ ಕರೆಸಿಕೊಂಡು ಡೀಲ್ ಕುದುರಿಸುತ್ತಿದ್ದ. ಗುತ್ತಿಗೆ ನೌಕರರ ಕೆಲಸ ಖಾಯಂ ಮಾಡಿಸುವುದಾಗಿ ಭರವಸೆ ನೀಡಿ ಲಕ್ಷ ಲಕ್ಷ ರೂ. ಪೀಕುತ್ತಿದ್ದ.
ಈತನಿಗೆ ಹಣ ಕೊಟ್ಟು ಮೋಸ ಹೋಗಿದ್ದ ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಮಂಡ್ಯ ಮೂಲದ ಸಂದೀಪ್ನನ್ನು ಬಂಧಿಸಿದ್ದು ವಿಚಾರಣೆ ನಡೆಸಿದಾಗ ನಕಲಿ ಐಎಎಸ್ ಮುಖವಾಡ ಗೊತ್ತಾಗಿದೆ. ತೀವ್ರ ವಿಚಾರಣೆಗೆ ಒಳಪಡಿಸಿದ್ದು 25 ಕ್ಕೂ ಹೆಚ್ಚು ಮಂದಿ ಬಳಿ ಹಣ ಪಡೆದು ನಾಮ ಹಾಕಿರುವ ಸಂಗತಿ ಗೊತ್ತಾಗಿದೆ. ಆದರೆ, ಬಹುತೇಕರು ದೂರು ನೀಡಲು ಮುಂದೆ ಬಂದಿಲ್ಲ. ಈ ಸಂಬಂಧ ವಿಧಾನಸೌಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಫೈರಿಂಗ್:
ಕ್ಷುಲಕ ಕಾರಣಕ್ಕೆ ಆಡಿ (Audi) ಕಾರ್ ಮತ್ತು ಬೈಕ್ ಸವಾರನ ನಡುವೆ ನಡೆದ ಮಾತಿನ ಚಕಮಕಿ ತಾರಕಕ್ಕೇರಿ ಗುಂಡು ಹಾರಿಸಿರುವ ಪ್ರಸಂಗ ಬೆಂಗಳೂರಿನ ಯಶವಂತಪುರದಲ್ಲಿ ನಡೆದಿದೆ. ಬೈಕ್ ಸವಾರ ಯಶವಂತಪುರ ಮಾರ್ಗವಾಗಿ ಚಲಿಸುತ್ತಿದ್ದ. ಈ ವೇಳೆ ಎದುರಿನಿಂದ ಬಂದ ಅಡಿ ಕಾರ್ನಲ್ಲಿದ್ದ ವ್ಯಕ್ತಿ ಬೈಕ್ ಸವಾರ ಅನಿಲ್ನನ್ನು ಕೈನಿಂದ ದೂರ ತಳ್ಳಿದ್ದ. ಇದರಿಂದ ಕುಪಿತಗೊಂಡಿದ್ದ ಅನಿಲ್ ಬೈಕ್ ನಿಲ್ಲಿಸಿ ಅಡಿ ಕಾರ್ಗೆ ಅಡ್ಡ ಹಾಕಿ ಪ್ರಶ್ನಿಸಿದ್ದ. ಕಾರ್ನಿಂದ ಹೊರಗೆ ಬಾ ಎಂದು ಅಡಿ ಕಾರ್ನಲ್ಲಿದ್ದ ವ್ಯಕ್ತಿಯನ್ನು ಹೊರಗೆ ಎಳೆಯಲು ಬೈಕ್ ಸವಾರ ಯತ್ನಿಸಿದ್ದ. ಈ ವೇಳೆ ಕಾರಿನಲ್ಲಿದ್ದ ಚಾಲಕ ಎರಡು ಸುತ್ತು ಗುಂಡು ಹಾರಿಸಿದ್ದಾನೆ. ಇದರಿಂದ ಜನರು ಗಾಬರಿಯಾಗಿ ಸ್ಥಳಕ್ಕೆ ಆಗಮಿಸುವ ವೇಳೆಗೆ ಆಡಿ ಕಾರ್ ಎಸ್ಕೇಪ್ ಆಗಿದೆ. ಈ ಕುರಿತು ಯಶವಂತಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಶ್ಲೀಲ ನಿಂದನೆ ಮಾಡಿದ ಯುವಕನಿಗೆ ದಂಡ:
Recommended Video
ಬುದ್ಧಿವಾದ ಹೇಳಿದ ಸಂಚಾರ ಪೊಲೀಸರ ಬಗ್ಗೆ ಅಶ್ಲೀಲವಾಗಿ ನಿಂದನೆ ಮಾಡಿದ್ದ ಯುವಕನಿಗೆ ಬಾಣಸವಾಡಿ ಸಂಚಾರ ಪೊಲೀಸರು 1500 ರೂ. ದಂಡ ವಿಧಿಸಿದ್ದಾರೆ. ಹೆಲ್ಮೆಟ್ ಧರಿಸದೇ ಬೈಕ್ ಚಾಲನೆ ಮಾಡುತ್ತಿದ್ದ ಯುವಕನನ್ನು ಕಮ್ಮನಹಳ್ಳಿ ಮುಖ್ಯ ರಸ್ತೆಯಲ್ಲಿ ತಡೆದು ಟ್ರಾಫಿಕ್ ವಾರ್ಡನ್ ಬುದ್ಧಿವಾದ ಹೇಳಿದ್ದರು. ಇದನ್ನು ಫೋಟೋ ತೆಗೆದುಕೊಂಡಿದ್ದ ಯುವಕ ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ್ದ. ಅಲ್ಲದೇ ಸಂಚಾರ ಪೊಲೀಸರು ಫೋಟೋ ಕ್ಲಿಕ್ಕಿಸುವುದನ್ನು ಸೆರೆ ಹಿಡಿದು ಕುಚೇಷ್ಟೆ ಮಾಡಿದ್ದ. ಈ ಕುರಿತು ಮಾಹಿತಿ ಸಂಗ್ರಹಿಸಿದ ಬಾಣಸವಾಡಿ ಸಂಚಾರ ಪೊಲೀಸರು ಯುವಕನ್ನು ಪತ್ತೆ ಮಾಡಿದ್ದಾರೆ. ಮಾತ್ರವಲ್ಲದೇ ಅಶ್ಲೀಲವಾಗಿ ನಿಂದನೆ ಮಾಡಿದ್ದಕ್ಕೆ 1500 ರೂ. ದಂಡ ವಿಧಿಸಿ ಬುದ್ಧಿವಾದ ಹೇಳಿ ಕಳಿಸಿದ್ದಾರೆ.