ಕ್ರೈಂ ರೌಂಡಪ್: ಅಂಗೂರ್ ಆಸ್ತಿ ಜಪ್ತಿ; ವಿಲ್ಸನ್ ಗಾರ್ಡನ್ ನಾಗ ವಿಚಾರಣೆ
ಬೆಂಗಳೂರು, ಸೆ. 28: ಅಲಯನ್ಸ್ ಯೂನಿವರ್ಸಿಟಿ ಮಾಜಿ ಕುಲ ಸಚಿವ ಮಧುಕರ್ ಅಂಗೂರ್ಗೆ ಸೇರಿದ 19.43 ಕೋಟಿ ರೂ. ಮೌಲ್ಯದ ಆಸ್ತಿ ಜಾರಿ ನಿರ್ದೇಶನಾಲಯದಿಂದ ಜಪ್ತಿಯಾಗಿದೆ. ಜೈಲಿನಲ್ಲಿ ಕರ್ಣನ ಸಾಂಗು ಕೇಳುತ್ತಿದ್ದ ವಿಲ್ಸನ್ ಗಾರ್ಡನ್ ನಾಗ ಕೊಲೆ ಪ್ರಕರಣದಲ್ಲಿ ಪೊಲೀಸರ ವಿಚಾರಣೆ. ರೈಲ್ವೇ ಹಳಿ ದಾಟುವಾಗ ರೈಲಿಗೆ ಸಿಕ್ಕಿ ಇಬ್ಬರ ಸಾವು. ಬೆಂಗಳೂರಿನಲ್ಲಿ ಮಂಗಳವಾರ ನಡೆದ ಅಪರಾಧ ಸುದ್ದಿಗಳ ವಿವರವಿದು.
ಮಧುಕರ್ ಹಂಗೂರ್ ಆಸ್ತಿ ಇಡಿಯಿಂದ ಜಪ್ತಿ:
ವಿದ್ಯಾರ್ಥಿಗಳಿಂದ ವಸೂಲಿ ಮಾಡಿದ ಶುಲ್ಕವನ್ನು ಅಕ್ರಮವಾಗಿ ಬೇರೊಂದು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿ ದುರುಪಯೋಗ ಪಡಿಸಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ಅಲಯನ್ಸ್ ಯೂನಿವರ್ಸಿಟಿಯ ಮಾಜಿ ಕುಲಪತಿ ಮಧುಕರ್ ಅಂಗೂರ್ ಅವರಿಗೆ ಸೇರಿದ 19.43 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.
ಶ್ರೀವಾರಿ ಎಜುಕೇಷನ್ ಸರ್ವೀಸ್ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದಿದ್ದ ಅಲೆಯನ್ಸ್ ಯೂನಿವರ್ಸಿಟಿ ಮಾಜಿ ಕುಲ ಸಚಿವ ಮಧುಕರ್ ಅಂಗೂರ್ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳಿಂದ ವಿವಿಧ ಶುಲ್ಕದ ಹೆಸರಿನಲ್ಲಿ ವಸೂಲಿ ಮಾಡಿದ್ದ 107 ಕೋಟಿ ರೂ. ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದ. ಸುಮಾರು 4500 ವಿದ್ಯಾರ್ಥಿಗಳು ಪಾವತಿಸಿದ್ದ ಹಣವನ್ನು ಖಾಸಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದ. 2016 - 2017 ರಲ್ಲಿ ವಹಿವಾಟು ನಡೆಸಿದ್ದ ಮಧುಕರ್ ಅಂಗೂರ್, ತನ್ನ ಆಪ್ತರಾದ ರವಿಕುಮಾರ್, ಶೃತಿ, ಪ್ರಿಯಾಂಕ ಅಂಗೂರ್ ಅವರ ವೈಯಕ್ತಿಕ ಖಾತೆಗಳಿಗೆ ವರ್ಗಾವಣೆ ಮಾಡಿದ್ದ. ಮಾತ್ರವಲ್ಲ ನಾನಾ ಕಡೆ ಆಸ್ತಿಯನ್ನು ಸಂಪಾದನೆ ಮಾಡಿ ಸ್ವಂತಕ್ಕೆ ಬಳಿಸಿದ್ದ.
ಈ ಕುರಿತು ಮಾಹಿತಿ ಆಧರಿಸಿ ಪ್ರಕರಣ ದಾಖಲಿಸಿದ್ದ ಇಡಿ ಅಧಿಕಾರಿಗಳು ಮಧುಕರ್ ಅಂಗೂರ್ ಮತ್ತು ಅಲಯನ್ಸ್ ವಿವಿ ಮೇಲೆ ದಾಳಿ ಮಾಡಿದ್ದರು. ಮಧುಕರ್ ಅಂಗೂರ್ನನ್ನು ಹಲವು ಸಲ ವಿಚಾರಣೆಗೆ ಒಳಪಡಿಸಿದ್ದರು. ಇದೀಗ ತನಿಖೆ ಪೂರ್ಣಗೊಳಿಸಿರುವ ಇಡಿ ಅಧಿಕಾರಿಗಳು 19.43 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಈ ಕುರಿತು ಜಾರಿ ನಿರ್ದೇಶನಾಲದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದೆ.
ಬೆಂಗಳೂರು ಕೋರ್ಟ್ಗೆ ಭದ್ರತೆ ಒದಗಿಸಲು ವಕೀಲರ ಮನವಿ:
ದೆಹಲಿಯ ಕೋರ್ಟ್ ಆವರಣದಲ್ಲಿ ಗ್ಯಾಂಗ್ ಸ್ಟಾರ್ ಮೇಲೆ ವಕೀಲರ ಸೋಗಿನಲ್ಲಿ ದಾಳಿ ನಡೆಸಿದ ಪ್ರಕರಣದ ಬೆನ್ನಲ್ಲೇ ಬೆಂಗಳೂರು ಕೋರ್ಟ್ಗೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸುವಂತೆ ವಕೀಲರ ಸಂಘ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದೆ. ದೆಹಲಿಯ ಕೋರ್ಟ್ ಆವರಣದಲ್ಲಿ ವಕೀಲರ ಸೋಗಿನಲ್ಲಿ ಆಗುಂತಕರು ನುಗ್ಗಿ ದಾಳಿ ಮಾಡಿರುವುದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಇಂತಹ ಅವಘಡಗಳು ನ್ಯಾಯಾಲಯದ ಆವರಣದಲ್ಲಿ ನಡೆದಿರುವುದು ಕಳವಳಕಾರಿ ಸಂಗತಿ. ಬೆಂಗಳೂರಿನಲ್ಲಿರುವ ಹೈಕೋರ್ಟ್ ಸೇರಿದಂತೆ ಎಲ್ಲಾ ನ್ಯಾಯಾಲಯಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಸಲ್ಲಿಸಿರುವ ಮನವಿಯಲ್ಲಿ ಕೋರಿದ್ದಾರೆ.
ಕೋರಮಂಗಲ ಬಬ್ಲಿ ಕೊಲೆ ಪ್ರಕರಣದಲ್ಲಿ ವಿಲ್ಸನ್ ಗಾರ್ಡನ್ ನಾಗ ವಶಕ್ಕೆ:
ಬೆಂಗಳೂರಿನ ಪಾತಕ ಲೋಕದಲ್ಲಿ ಡಾನ್ ಪಟ್ಟಕ್ಕೇರುವ ತವಕದಲ್ಲಿರುವ ವಿಲ್ಸನ್ ಗಾರ್ಡನ್ ನಾಗನ್ನು ಕೋರಮಂಗಲ ಪೊಲೀಸರು ಕೊಲೆ ಪ್ರಕರಣವೊಂದರಲ್ಲಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಇತ್ತೀಚೆಗೆ ಜೈಲಿನಲ್ಲಿ ಕರ್ಣನ್ ಹಾಡು ಕೇಳುವ ಮೂಲಕ ಸುದ್ದಿಯಾಗಿದ್ದ ವಿಲ್ಸನ್ ಗಾರ್ಡನ್ ನಾಗ ಸೇರಿದಂತೆ ಹಲವು ರೌಡಿಗಳನ್ನು ರಾಜ್ಯದ ಬೇರೆ ಜೈಲುಗಳಿಗೆ ವರ್ಗಾವಣೆ ಮಾಡಲಾಗಿತ್ತು.
ಜು. 19 ರಂದು ಕೋರಮಂಗಲದ ನ್ಯಾಷನಲ್ ಬ್ಯಾಂಕ್ನಲ್ಲಿ ಹಾಡ ಹಗಲೇ ರೌಡಿ ಶೀಟರ್ ಬಬ್ಲಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಕೆಲಸದ ನಿಮಿತ್ತ ಬೈಕ್ನಲ್ಲಿ ಬ್ಯಾಂಕಿಗೆ ಹೋಗಿದ್ದ ಆಡುಗೋಡಿ ನಿವಾಸಿ ಬಬ್ಲಿ ಅಲಿಯಾಸ್ ಜೋಸೆಫ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಪ್ರಕರಣ ಬೇಧಿಸಿದ್ದ ಕೋರಮಂಗಲ ಪೊಲೀಸರು ನಾಗನ ಸಚಹರರು ಎನ್ನಲಾದ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಜೈಲಿನಲ್ಲಿದ್ದುಕೊಂಡೇ ವಿಲ್ಸನ್ ಗಾರ್ಡನ್ ನಾಗ ಕೊಲೆ ಮಾಡಿಸಿದ್ದಾನೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಆತನನ್ನು ವಿಚಾರಣೆಗೆ ಕರೆ ತರಲಾಗಿದೆ.
ರೈಲ್ವೇ ಹಳಿ ದಾಟುವಾಗ ಇಬ್ಬರು ಸಾವು:
Recommended Video
ಯಲಹಂಕದ ಜಕ್ಕೂರು ರೈಲ್ವೇ ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದು ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಸುಮಾರು 25 ವರ್ಷ ವಯಸ್ಸಿನ ಇಬ್ಬರು ಯುವಕರ ವಿವರ ಗೊತ್ತಾಗಿಲ್ಲ. ಉತ್ತರ ಭಾರತ ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ವ್ಯಕ್ತಿಗಳು ರೈಲು ಗಮನಿಸದೇ ಹಳಿ ದಾಟುವ ವೇಳೆ ಅತಿ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ ಎಂದು ರೈಲ್ವೇ ಪೊಲೀಸರು ತಿಳಿಸಿದ್ದಾರೆ. ಮೃತರ ಗುರುತು ಪತ್ತೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.