ಅತ್ತಿಬೆಲೆ ನಿರ್ಜನ ಪ್ರದೇಶದಲ್ಲಿ ಜೋಡಿ ಕೊಲೆ: ಪೊಲೀಸರ ಬಲೆಗೆ ಬಿದ್ದ ಜೈನ ಟೆಂಪಲ್ ಕಳ್ಳಿ!
ಬೆಂಗಳೂರು, ಅ. 22: ತಮಿಳುನಾಡು ಮೂಲದ ಇಬ್ಬರು ವ್ಯಕ್ತಿಗಳನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ನಿರ್ಜನ ಪ್ರದೇಶದಲ್ಲಿ ಬರ್ಬರ ಹತ್ಯೆ. ಕಳೆದ ಹದಿಮೂರು ವರ್ಷದಿಂದ ಜೈನ ದೇಗುಲಗಳಲ್ಲಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳಿಯ ಬಂಧನ. ಎರಡು ಅಪರಾಧ ಪ್ರಕರಣಗಳ ಸಮಗ್ರ ವರದಿ ಇಲ್ಲಿದೆ ನೋಡಿ.
ಬೈಕ್ ಅಡಮಾನ ವಿಚಾರಕ್ಕೆ ಉಂಟಾದ ವಿವಾದ ಎರಡು ಜೀವಗಳನ್ನು ಬಲಿ ಪಡೆದಿದೆ. ಇಬ್ಬರು ವ್ಯಕ್ತಿಗಳನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಅತ್ತಿಬೆಲೆ ಪೊಲೀಸ್ ಠಾಣಾ ಸಮೀಪ ನಡೆದಿದೆ.
ದೀಪಕ್ ಹಾಗೂ ಭಾಸ್ಕರ್ ಕೊಲೆಯಾದವರು. ಅತ್ತಿಬೆಲೆ ಟಿವಿಎಸ್ ರಸ್ತೆಯ ನಿರ್ಜನ ಪ್ರದೇಶದಲ್ಲಿ ಗುರುವಾರ ರಾತ್ರಿ 9 ಗಂಟೆ ಸುಮಾರಿನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಅರೆಹಳ್ಳಿಯ ವಿಲಾರ ಇನ್ ಬಡಾವಣೆ ಎದುರಿನ ಖಾಲಿ ನಿವೇಶನದಲ್ಲಿ ಕೊಲೆ ಮಾಡಲಾಗಿದ್ದು, ಘಟನಾ ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಲೆಯಾದ ಭಾಸ್ಕರ್ ಮತ್ತು ದೀಪಕ್ ತಮಿಳುನಾಡಿನ ಹೊಸೂರು ತಾಲೂಕಿನ ಬೇಗನಹಳ್ಳಿ ನಿವಾಸಿಗಳು. ಹದಿನೈದು ಸಾವಿರ ಪಡೆದು ಬೈಕ್ ಅಡಮಾನ ಇಟ್ಟಿದ್ದ ವಿಚಾರವಾಗಿ ಜಗಳ ಉಂಟಾಗಿ ಕೊಲೆಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಹಣದ ವಿಚಾರವಾಗಿ ದೊರೆ ಎಂಬಾತನ ಜತೆ ಜಗಳ ತೆಗದಿದ್ದ ದೀಪಕ್ ಹೀರೋ ಹೋಂಡಾ ಎಕ್ಸ್ಸ್ಟ್ರೀಮ್ ಬೈಕ್ ತೆಗೆದುಕೊಂಡು ಬಂದಿದ್ದ. ಅತ್ತಿಬೆಲೆ ಗಡಿ ಸಮೀಪದ ಹಳ್ಳಿಯೊಂದಕ್ಕೆ ಹಣದ ಸಮೇತ ಹೋಗಿದ್ದ ದೀಪಕ್ ಮತ್ತು ಭಾಸ್ಕರ್ ಕೊಲೆಯಾಗಿದ್ದಾರೆ. ದೊರೆ ಹಾಗೂ ಅರುಣ್ ಎಂಬುವರ ಭೇಟಿಗೆ ಬಂದಿದ್ದ ದೀಪಕ್ ಮತ್ತು ಭಾಸ್ಕರ್ ಕೊಲೆಯಾಗಿದ್ದು, ನಾನಾ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇಸ್ಪೀಟ್ ಜೂಜು ವಿಚಾರದಲ್ಲಿ ಬಂಧನಕ್ಕೆ ಒಳಗಾಗಿದ್ದ ಭಾಸ್ಕರ್ ವಾರದ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಅಕ್ಟೋಬರ್ 9 ರಂದು ಭಾಸ್ಕರ್ನನ್ನು ತಮಿಳುನಾಡಿನ ಸಿಪ್ಕಾಟ್ ಠಾಣೆ ಪೊಲೀಸರು ಬಂಧಿಸಿದ್ದರು. ಭಾಸ್ಕರ್ ಸೇರಿ ಹದಿನಾರು ಮಂದಿ ಜೂಜು ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದರು. ಒಂದು ವಾರದ ಹಿಂದಷ್ಟೇ ಬಿಡುಗಡೆಯಾಗಿದ್ದ ಭಾಸ್ಕರ್ ಕೊಲೆಯಾಗಿದ್ದು, ಜೂಜು ವಿಚಾರದಲ್ಲಿ ಹಣ ಕೊಟ್ಟು ಬೈಕ್ ಅಡವಿಟ್ಟುಕೊಂಡಿದ್ದು ಅದೇ ವಿಚಾರದಲ್ಲಿ ಕೊಲೆಯಾಗಿರಬಹುದೇ ಎಂದು ಪೊಲೀಸರು ಶಂಕಿಸಿದ್ದಾರೆ.
ಜಾಮೀನು ಮೇಲೆ ಬಿಡುಗಡೆಯಾಗಿದ್ದ ಭಾಸ್ಕರ್ ನಿನ್ನೆ ಸಿಪ್ಕಾಟ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಸಹಿ ಹಾಕಿದ್ದ. ಬಳಿಕ ಮಾಯಸಂದ್ರದಿಂದ ಅತ್ತಿಬೆಲೆಗೆ ಬಂದು ದೀಪಕ್ನನ್ನು ಭೇಟಿ ಮಡಿದ್ದ. ದೀಪಕ್ ದೊರೆ ಎಂಬಾತನಿಗೆ ಹಣ ನೀಡಿದ್ದ. ಹಣ ನೀಡದ ಹಿನ್ನೆಲೆಯಲ್ಲಿ ದೊರೆಗೆ ಸೇರಿದ ಬೈಕ್ನ್ನು ತೆಗೆದುಕೊಂಡು ಬಂದಿದ್ದರು ಎನ್ನಲಾಗಿದೆ. ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ಪಡೆಯಲು ಅತ್ತಿಬೆಲೆ ಪೊಲೀಸರು ಸಿಪ್ಕಾಟ್ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ವಂಶಿ ಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜೈನ್ ಟೆಂಪಲ್ ಟಾರ್ಗೆಟ್ ಮಾಡುವ ಕಳ್ಳಿ ಸೆರೆ: ಪೂಜೆ ನೆಪದಲ್ಲಿ ಜೈನ ದೇವಾಲಯಗಳಿಗೆ ಹೋಗಿ ಬೆಳ್ಳಿ ಪೂಜಾ ಸಾಮಾಗ್ರಿ ಕದಿಯುತ್ತಿದ್ದ ಕಳ್ಳಿಯನ್ನು ಕೆ.ಪಿ. ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮುನಿಬಾನು ಅಲಿಯಾಸ್ ಮಂಜು, ಬಂಧನಕ್ಕೆ ಒಳಗಾದ ಕಳ್ಳಿ. ಈಕೆಯ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮುನಿಭಾನು ಕಳೆದ ಹತ್ತು ವರ್ಷದಿಂದಲೂ ಜೈನ ದೇಗುಲಗಳಿಗೆ ಭೇಟಿ ನೀಡಿ ಕಳ್ಳತನ ಮಾಡುವುದನ್ನೇ ಕರಗತ ಮಾಡಿಕೊಂಡಿದ್ದಾಳೆ. 2019 ರಲ್ಲಿ ಜೈನ್ ದೇವಾಲಯದಲ್ಲಿ ಕಳ್ಳತನ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಳು. ಪೂಜೆಗೆಂದು ತಂದಿದ್ದ ಬೆಳ್ಳಿ ತಟ್ಟೆ ಮತ್ತು ಆರತಿ ತಟ್ಟೆ ಮತ್ತಿತರ ವಸ್ತುಗಳನ್ನು ಕದ್ದು ಸಿಕ್ಕಿಬಿದ್ದಿದ್ದಳು. ಪೂಜೆಗೆ ಬರುವ ಭಕ್ತಾದಿಗಳನ್ನ ಯಾಮಾರಿಸಿ ಕಳುವು ಮಾಡುತ್ತಿದ್ದ ಮುನಿ ಭಾನು ಮೂಲತಃ ಜೈನ ಸಮುದಾಯಕ್ಕೆ ಸೇರಿದ್ದಳು. ಮುಸ್ಲಿಂ ಸಮುದಾಯದ ವ್ಯಕ್ತಿಯನ್ನು ಮದುವೆಯಾಗಿ ಕಳ್ಳಿಯಾಗಿ ಮತಾಂತರಗೊಂಡಿದ್ದಳು. ಗಂಡ ಕುಡಿತಕ್ಕೆ ಒಳಗಾಗಿ, ಮಾರ್ಕೆಟ್ನಲ್ಲಿ ವ್ಯಾಪಾರ ಮಾಡುತ್ತಿದ್ದ. ಹೀಗಾಗಿ ಜೀವನ ನಡೆಸಲು ಕಳ್ಳತನಕ್ಕೆ ಇಳಿದಿದ್ದಳು. ಹಲವು ಕಡೆ ಕದ್ದರೂ ಈಕೆಯ ವಿರುದ್ಧ ಯಾರೂ ದೂರು ನೀಡಿರಲಿಲ್ಲ. ಇದೀಗ ಹನ್ನೊಂದಕ್ಕೂ ಹೆಚ್ಚು ಕಡೆ ಕದ್ದಿರುವುದು ಬೆಳಕಿಗೆ ಬಂದಿದ್ದು, ಕೆ.ಪಿ. ಅಗ್ರಹಾರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.