ಶೂ ಖರೀದಿಗೂ ಹಣವಿರಲಿಲ್ಲ: ಹಳೆಯ ದಿನ ನೆನೆದ ಕಿರ್ಮಾನಿ
ಬೆಂಗಳೂರು, ಸೆಪ್ಟೆಂಬರ್. 14: ಬೆಂಗಳೂರು: ಜೀವನದಲ್ಲಿ ನಮಗೆ ನಾವೇ ಮಾದರಿಯಾಗಬೇಕು. ಸಾಧನೆ ಮಾಡಿದವರನ್ನು ಆದರ್ಶವಾಗಿರಿಸಿಕೊಂಡು, ಅವರನ್ನು ಅನುಸರಿಸುವ ಬದಲು ಅವರಿಗಿಂತ ಹೆಚ್ಚಿನ ಸಾಧನೆ ಮಾಡಲು ಮುಂದಾಗಬೇಕು ಎಂದು ಕ್ರಿಕೆಟಿಗ ಸೈಯದ್ ಕಿರ್ಮಾನಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
ಬೆಂಗಳೂರಿನ ಸೇಂಟ್ ಜೋಸೆಫ್ಸ್ ಕಾಲೇಜಿನ 133ನೇ ವಾರ್ಷಿಕ ಅಥ್ಲೆಟಿಕ್ ಕೂಟವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ಇದೀಗ ಇಲ್ಲಿ ಕಾಣುತ್ತಿರುವ ಬ್ಯಾಸ್ಕೆಟ್ಬಾಲ್ ಕೋರ್ಟ್ ಜಾಗ ಹಿಂದೆ ಹಾಕಿ ಮೈದಾನವಾಗಿತ್ತು. ಇದೇ ಮೈದಾನದಲ್ಲಿ ಬಹಳಷ್ಟು ಹಾಕಿ ಪಂದ್ಯಗಳನ್ನು ಆಡಿದ್ದೇನೆ ಎಂದು ಹಳೆಯ ನೆನಪುಗಳನ್ನು ಹಂಚಿಕೊಂಡರು.
ಕ್ರೀಡಾಕೂಟದ ಆರಂಭಕ್ಕೂ ಮುನ್ನ ನಡೆದ ಪಥ ಸಂಚಲನದಲ್ಲಿ ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ವಿಶೇಷ. ಕಾಲೇಜಿನ ರೆಕ್ಟರ್ ರೆವರೆಂಡ್ ಫಾದರ್ ಬ್ರಿಯಾನ್ ಪೆರೆರಾ ಅಧ್ಯಕ್ಷತೆ ವಹಿಸಿದ್ದರು. ಪ್ರಭಾ ಇಂಡಸ್ಟ್ರೀಸ್ ಸಿಇಒ ಶಿವಕುಮಾರ್, ಸಾಮಾಜಿಕ ಕಾರ್ಯಕರ್ತ ಎ ಆರ್ ಹೆಬ್ಬಾರ್ ಮತ್ತು ಕಾಲೇಜಿನ ಆಡಳಿತ ಮಂಡಳಿ ಕಾರ್ಯಕ್ರಮದಲ್ಲಿ ಹಾಜರಿತ್ತು.
ಬರಿ ಕಾಲಲ್ಲೇ ಅಭ್ಯಾಸ ಮಾಡುತ್ತಿದ್ದೆ
ಅಂದು (ಶಾಲಾ ದಿನಗಳಲ್ಲಿ) ನನಗೊಂದು ಜೊತೆ ಶೂ ತೆಗೆದುಕೊಡಲೂ ನಮ್ಮ ತಂದೆಯ ಬಳಿ ಹಣವಿರಲಿಲ್ಲ. ಹೀಗಾಗಿ ನಾನು ಬರಿಗಾಲಿನಲ್ಲೇ ಅಭ್ಯಾಸ ಮಾಡುತ್ತಿದ್ದೆ. ಆಗ ಪಟ್ಟ ಕಷ್ಟವೇ ನನ್ನನ್ನು ಸಾಧನೆಯೆಡೆಗೆ ಕೊಂಡೊಯ್ಯಿತು ಎಂದು ಕಿರ್ಮಾನಿ ಹಳೆಯ ದಿನಗಳನ್ನು ಮೆಲುಕು ಹಾಕಿದರು.
ಶಿಸ್ತು ರೂಢಿಸಿಕೊಳ್ಳಿ
ಜೀವನದಲ್ಲಿ ಶಿಸ್ತು ರೂಢಿಸಿಕೊಂಡು ನಿರ್ದಿಷ್ಟ ಗುರಿಯೆಡೆಗೆ ಸಾಗಬೇಕು. ಅದು ಕ್ರೀಡೆ ಇರಲಿ ಅಥವಾ ಬೇರೆ ಕ್ಷೇತ್ರವಾಗಿರಲಿ. ಆಗ ಯಶಸ್ಸು ನಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಭಾರತ ಕಂಡ ಅತ್ಯುತ್ತಮ ವಿಕೆಟ್ ಕೀಪರ್ ಹೇಳಿದರು.
ಕ್ರೀಡಾ ಕ್ಷೇತ್ರ ಬದಲಾವಣೆ
ಕ್ರೀಡಾ ಕ್ಷೇತ್ರದಲ್ಲಿ ಪ್ರತಿ ದಿನ ಅನೇಕ ಬದಲಾವಣೆಯಾಗುತ್ತಿದೆ. ಅದಕ್ಕೆ ಒಗ್ಗಿಕೊಂಡು ಸಾಗಬೇಕು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಪ್ರತಿದಿನ ಪರಿಶ್ರಮ ಮತ್ತು ತರಬೇತಿ ಅಗತ್ಯ ಎಂದು ತಿಳಿಸಿದರು.
1983ರ ವಿಶ್ವಕಪ್
ಕಿರ್ಮಾನಿ ಅವರ ವೃತ್ತಿ ಜೀವನದಲ್ಲಿ 1983 ರ ವಿಶ್ವಕಪ್ ಮೈಲಿಗಲ್ಲು. ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ತಂಡ ವಿಶ್ವ ಚಾಂಪಿಯನ್ ಆಗಲು ಕಿರ್ಮಾನಿ ಕೊಡುಗೆ ಅಗಾಧವಾಗಿತ್ತು.