ಕಸಾಯಿಖಾನೆಗಳು ನಾಗರೀಕ ಸಮಾಜಕ್ಕೆ ಕಳಂಕ : ರಾಘವೇಶ್ವರ ಶ್ರೀ
ನರಕ ಎಂಬುದನ್ನು ನೋಡಿದವರಿಲ್ಲ, ಆದರೆ ಕಸಾಯಿಖಾನೆ ಎಂಬುದು ನಮ್ಮ ಮಧ್ಯದಲ್ಲಿ ಇರುವ ನರಕ. ಜೀವಂತ ಗೋವುಗಳನ್ನು ಬೇಯಿಸುವ, ಚರ್ಮ ಸುಲಿಯುವ ಕೃತ್ಯಗಳನ್ನು ಅಲ್ಲಿ ಮಾಡುತ್ತಾರೆ. ಇದು ನಾಗರಿಕ ಸಮಾಜಕ್ಕೆ ದೊಡ್ಡ ಕಳಂಕ ಎಂದು ರಾಘವೇಶ್ವರ ಶ್ರೀ.
ಬೆಂಗಳೂರು, ಸೆ 9: ನರಕ ಎಂಬುದನ್ನು ನೋಡಿದವರಿಲ್ಲ, ಆದರೆ ಕಸಾಯಿಖಾನೆ ಎಂಬುದು ನಮ್ಮ ಮಧ್ಯದಲ್ಲಿ ಇರುವ ನರಕವಾಗಿದೆ. ಜೀವಂತ ಗೋವುಗಳನ್ನು ಬೇಯಿಸುವ, ಚರ್ಮ ಸುಲಿಯುವ ಕೃತ್ಯಗಳನ್ನು ಅಲ್ಲಿ ಮಾಡುತ್ತಾರೆ. ಇದು ನಾಗರಿಕ ಸಮಾಜಕ್ಕೆ ದೊಡ್ಡ ಕಳಂಕ ಎಂದು ರಾಘವೇಶ್ವರ ಶ್ರೀಗಳು ಹೇಳಿದರು.
ನಗರದ ಯಲಹಂಕ ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಆವರಣದಲ್ಲಿ ಶನಿವಾರ (ಸೆ 9) ನಡೆದ 'ಅಭಯಾಕ್ಷರ - ಹಾಲುಹಬ್ಬ ' ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಶ್ರೀಗಳು, ಜೀವಿಗಳಲ್ಲಿ ಶ್ರೇಷ್ಠವಾದದ್ದು ಗೋವು. ಕೆಲವೇ ಕೆಲವು ಅಧಿಕಾರಸ್ಥರ ಕೈಯಲ್ಲಿ ಇದು ನರಳುತ್ತಿದೆ. (ರಾಘವೇಶ್ವರ ಭಾರತಿ ಸ್ವಾಮೀಜಿಯಿಂದ ಕನ್ಯಾ ಸಂಸ್ಕಾರ ದೀಕ್ಷೆ)
ಆದರೆ ಅಂತಹ ಜನಪ್ರತಿನಿಧಿಗಳ ಭವಿಷ್ಯ ಜನಸಾಮಾನ್ಯರ ಕೈಯಲ್ಲಿದ್ದು, ಗೋವನ್ನು ಸಂರಕ್ಷಿಸುವವರಿಗೆ ನಮ್ಮ ಮತ ನೀಡುತ್ತೇವೆ ಎಂದು ಘೋಷಿಸೋಣ. ನಾಡಿನ ಪ್ರತಿಯೊಬ್ಬರೂ 'ಅಭಯಾಕ್ಷರ' ಹಾಕಿ ಗೋಸಂರಕ್ಷಣೆಯ ಕುರಿತಾಗಿ ನಮ್ಮ ಹಕ್ಕೊತ್ತಾಯವನ್ನು ಸಲ್ಲಿಸೋಣ ಎಂದು ಶ್ರೀಗಳು ಕರೆ ನೀಡಿದರು.
ಗೋಸಂರಕ್ಷಣೆಗೆ ಯುದ್ಧವನ್ನು ಮಾಡಬೇಕಾಗಿಲ್ಲ, ಸಮಾಜ ಎಚ್ಚೆತ್ತುಕೊಂಡರೆ ಗೋವುಗಳನ್ನು ಸುಲಭವಾಗಿ ಕಾಪಾಡಿಕೊಳ್ಳಬಹುದು. ಅಭಯಾಕ್ಷರ - ಗೋಸಂಜೀವಿನಿಗಳ ಮೂಲಕ ಗೋವುಗಳನ್ನು ಕಾಪಾಡಿಕೊಳ್ಳೋಣ ಎಂದು ರಾಘವೇಶ್ವರ ಶ್ರೀಗಳು ಈ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.
ಸಭೆಗೆ ಮುನ್ನ ಯಲಹಂಕ ನ್ಯೂಟೌನ್ ಬಸ್ ನಿಲ್ದಾಣದಿಂದ ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ವರೆಗೆ ಭವ್ಯ ಶೋಭಾಯಾತ್ರೆ ನಡೆಯಿತು. ಯಲಹಂಕ ಶಾಸಕರಾದ ಎಸ್ ಆರ್ ವಿಶ್ವನಾಥ್ ಮೆರವಣಿಗೆಯ ಉದ್ದಕ್ಕೂ ಹೆಜ್ಜೆಹಾಕಿ ಗೋಮಾತೆಯ ಮಹತಿಯನ್ನು ಸಾರಿದರು.
ಇದೇ ಸಂದರ್ಭದಲ್ಲಿ ಮಾ ಗೋ ಪ್ರಾಡೆಕ್ಟ್ಸ್ ಹೊರತಂದ ಗವ್ಯೋತ್ಪನ್ನಗಳ ಸಮ್ಮಿಲನದ ಅವೊಕಾಡೋ ಆಯುರ್ವೇದ ಸಾಬೂನು ಲೋಕಾರ್ಪಣೆಗೊಂಡಿತು. ಯಲಹಂಕ ಭಾಗದಲ್ಲಿ ಸಂಗ್ರಹವಾದ 66,000 ಸಹಿಹಾಕಿದ ಅಭಯಾಕ್ಷರ ಅರ್ಜಿಗಳನ್ನು ಶ್ರೀಗಳಿಗೆ ಸಮರ್ಪಿಸಲಾಯಿತು.
ಗವಿ ಮಠದ ಶ್ರೀಗಳು, ಅಭಯಾನಂದ ಜೀ ಮಹರಾಜ್, ಬಳ್ಳಾರಿಯ ಹಾಲ ವೀರಪ್ಪಜ್ಜ ಸ್ವಾಮೀಜಿ, ಶಾಸಕರಾದ ಎಸ್ ಆರ್ ವಿಶ್ವನಾಥ್, ನಿವೃತ್ತ ಇಸ್ರೋ ವಿಜ್ಞಾನಿ ಉನ್ನಿಕೃಷ್ಣನ್, ಥಟ್ ಅಂತ ಹೇಳಿ ಖ್ಯಾತಿಯ ನಾ ಸೋಮೇಶ್ವರ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.