ಪಕ್ಷದ ಇಮೇಜ್ ಗೆ ಹಾನಿ, ದುಡ್ಡೂ ಪೋಲು: ಬಿಎಸ್ವೈ ಸರಕಾರದ ಬ್ಯಾಡ್ ಡಿಶಿಷನ್
ಮಾನವೀಯತೆಯನ್ನೇ ಮರೆತು ಕೊರೊನಾ ಸೋಂಕಿತರನ್ನು ಭರ್ತಿ ಮಾಡಿಕೊಳ್ಳದೇ, ಖಾಸಗಿ ಆಸ್ಪತ್ರೆಗಳಿಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಂತಹ ಸಮಯವದು. ಆ ಸಮಯದಲ್ಲಿ, ಬೆಂಗಳೂರು ನಗರ ಹೊರವಲಯ ಮಾದಾವರದ ಬಳಿ ತಲೆ ಎತ್ತಿದ ಬಿಐಇಸಿ ಕೋವಿಡ್ ಕೇರ್ ಸೆಂಟರ್ ಜನರಿಗೆ ಆಶಾಕಿರಣವಾಗಿ ಮೂಡಿತ್ತು.
Recommended Video
ದೇಶದಲ್ಲೇ ಅತ್ಯಂತ ದೊಡ್ಡ ಕೋವಿಡ್ ಸೆಂಟರ್ ಎಂದು ಹೆಸರನ್ನೇನೋ ಇದು ಪಡೆಯಿತು. ಯಡಿಯೂರಪ್ಪ ಸರಕಾರ ಇದರ ಮೈಲೇಜ್ ಅನ್ನು ಪಡೆದುಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದರೂ, ಅದಕ್ಕೆ ತಣ್ಣೀರು ಎರಚಿದ್ದು, ಸೆಂಟರ್ ಸ್ಥಾಪನೆಯ ಹಿಂದಿನ, ಭ್ರಷ್ಟಾಚಾರದ ವಾಸನೆ.
ಕೊರೊನಾಗೆ ಹಿಂದಿನ 'ಮರ್ಯಾದೆ' ಈಗಿಲ್ಲ: ಜನರ ಈ ಡೋಂಟ್ ಕೇರ್ ಗೆ 6 ಕಾರಣಗಳು
ದೇಶದ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಗಳಲ್ಲೊಂದು ಎಂದು ಗುರುತಿಸಲಾಗಿದ್ದ ಈ ಸೆಂಟರ್ ಅನ್ನು ಸೆಪ್ಟೆಂಬರ್ 15 ರಿಂದ ಮುಚ್ಚುವುದಾಗಿ ಬಿಬಿಎಂಪಿ ಅಧಿಕೃತವಾಗಿ ತಿಳಿಸಿದೆ. ಆ ಮೂಲಕ, ತರಾತುರಿಯಲ್ಲಿ ಆರಂಭವಾದ ಈ ಸೆಂಟರ್, ಅಷ್ಟೇ ವೇಗದಲ್ಲಿ ಮುಚ್ಚುತ್ತಿರುವುದು ವಿಪರ್ಯಾಸ.
ಕೊರೊನಾ ಪಾಸಿಟೀವ್ ಸುದ್ದಿ: ದಾಖಲೆಯ ಚೇತರಿಕೆ, 30ಲಕ್ಷ ದಾಟಿದ ಗುಣಮುಖರು
ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡಿ ಕೇವಲ ಒಂದೂವರೆ ತಿಂಗಳ ಹಿಂದೆಯಷ್ಟೇ ಉದ್ಘಾಟನೆಗೊಂಡಿದ್ದ ಈ ಸೆಂಟರ್ ಅನ್ನು ಆರಂಭಿಸುವ ವೇಳೆ ಇದ್ದ ಕಾಳಜಿ, ಮುನ್ನಡೆಸುವ ವೇಳೆ, ಯಡಿಯೂರಪ್ಪನವರ ಸರಕಾರ ಅಥವಾ ಬಿಬಿಎಂಪಿಗೆ ಇಲ್ಲದಾಯಿತೇ ಎನ್ನುವುದಿಲ್ಲಿ ಪ್ರಶ್ನೆ.
ಬಿಐಇಸಿಯಲ್ಲಿ ಕೋವಿಡ್ ಸೆಂಟರ್
ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನದಲ್ಲಿ (ಬಿಐಇಸಿ ) ಹತ್ತಾರು ಕೋಟಿ ರೂಪಾಯಿ ಖರ್ಚು ಮಾಡಿ 10 ಸಾವಿರಕ್ಕೂ ಹೆಚ್ಚು ಬೆಡ್ ಗಳ ಕೇಂದ್ರವನ್ನು ಸ್ಥಾಪಿಸಲಾಗಿತ್ತು. ಆರಂಭದ ಹಂತದಲ್ಲಿ, ಈ ಸೆಂಟರ್ ಗೆ ಖರ್ಚು ಮಾಡಲಾಗುತ್ತಿರುವ ಹಣದ ಬಗ್ಗೆ ವ್ಯಾಪಕ ಆರೋಪಗಳು ಕೇಳಿ ಬಂದ ಬೆನ್ನಲ್ಲಿ, ಯಡಿಯೂರಪ್ಪ ಸರಕಾರ ಖರೀದಿ ವಿಚಾರದಲ್ಲಿ ಹಲವು ಬದಲಾವಣೆಗಳನ್ನು ಮಾಡಿದ್ದರು. ಕೊನೆಗೂ, ನಾನಾ ಕಸರತ್ತುಗಳ ಬಳಿಕ ಏಷ್ಯಾದಲ್ಲೇ ದೊಡ್ಡದೆಂದು ಬಿಂಬಿಸಲಾಗಿದ್ದ ಕೋವಿಡ್ ಕೇಂದ್ರ ಕಳೆದ ತಿಂಗಳು ಆರಂಭವಾಯಿತು, ಈಗ ಮುಚ್ಚಲಾಗುತ್ತಿದೆ.
ಭ್ರಷ್ಟಾಚಾರದ ವಾಸನೆ ವಿರೋಧ ಪಕ್ಷದವರಿಗೆ ಬಾಡೂಟವಾಗಿ ಹೋಗಿತ್ತು
ಪ್ರಮುಖವಾಗಿ, ಈ ಕೋವಿಡ್ ಸೆಂಟರ್ ಗೆ ಖರೀದಿಸುವ ಸಾಮಗ್ರಿ/ಉಪಕರಣಗಳನ್ನು ಊಹಿಸಲೂ ಅಸಾಧ್ಯವಾದ ದುಬಾರಿ ಬಾಡಿಗೆಯಲ್ಲಿ ಖರೀದಿಸಲು ಸರಕಾರ ಮುಂದಾಗಿತ್ತು. ಆದರೆ, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ನಂತರ, ಎಲ್ಲಾ ವಸ್ತುಗಳನ್ನು ಖರೀದಿಸಲು ಬಿಎಸ್ವೈ ಸರಕಾರ ನಿರ್ಧರಿಸಿತ್ತು. ಅಷ್ಟು ಹೊತ್ತಿಗೆಲ್ಲಾ, ಭ್ರಷ್ಟಾಚಾರದ ವಾಸನೆ ವಿರೋಧ ಪಕ್ಷದವರಿಗೆ ಬಾಡೂಟವಾಗಿ ಹೋಗಿತ್ತು.
ಬಿಎಸ್ವೈ ತೋರಿದ ರಾಜಕೀಯ ಪ್ರಬುದ್ದತೆ
ಎಲ್ಲಾ ಅಡೆತಡೆಗಳನ್ನು ಮೆಟ್ಟಿ ಬಿಎಸ್ವೈ ತಮ್ಮ ರಾಜಕೀಯ ಪ್ರಬುದ್ದತೆಯನ್ನು ತೋರಿದ್ದರಿಂದ ಶಾಸ್ವತವಾಗಿ ಪಕ್ಷಕ್ಕಾಗುವ ಡ್ಯಾಮೇಜ್ ಅನ್ನು ತಡೆದರು ಎಂದೇ ವ್ಯಾಖಾನಿಸಲಾಗಿತ್ತು. ಹತ್ತು ಸಾವಿರ ಬೆಡ್ ಗೆ, ಸುಮಾರು ಆರು ಸಾವಿರ ಬೆಡ್ ಮೂಲಕ ಆರಂಭವಾದ ಈ ಕೋವಿಡ್ ಸೆಂಟರ್, ಸರಿಯಾದ ಓಪನಿಂಗ್ ಅನ್ನು ಪಡೆದುಕೊಂಡೇ ಇಲ್ಲ. ಇದಕ್ಕೆ ಹತ್ತು ಹಲವಾರು ಕಾರಣಗಳು ಇರಬಹುದು.
ನಗರದಿಂದ ಹೊರಗೆ ಇರುವ ಕೋವಿಡ್ ಕೇರ್ ಸೆಂಟರ್
ಒಂದು ನಗರದಿಂದ ಹೊರಗೆ ಇರುವ ಸೆಂಟರ್ ಇದಾಗಿರುವುದು, ಅಲ್ಲಿನ ನಿರ್ವಹಣೆ ಬಗ್ಗೆ ತಕರಾರು ಎದ್ದಿರುವುದು, ಕಂಟೇನ್ಮೆಂಟ್ ಝೂನ್ ಪಾಲಿಸಿಯನ್ನು ಸರಕಾರ ಬದಲಾಯಿಸಿರುವುದು, ಅದೆಲ್ಲಕ್ಕಿಂತ ಹೆಚ್ಚಾಗಿ, ಕೊರೊನಾಗಿರುವ ಭಯ ಜನರಲ್ಲಿ ಕಮ್ಮಿಯಾಗಿರುವುದು, ಹಲವು ತಜ್ಣರು ಜನಜಾಗೃತಿ ಮೂಡಿಸುತ್ತಿರುವುದು.. ಹೀಗೆ ಹಲವಾರು ಕಾರಣಗಳಿರಬಹುದು.
ಬಿಐಇಸಿ ಕೋವಿಡ್ ಸೆಂಟರ್ ಅನ್ನು ಇಂದಲ್ಲಾ, ನಾಳೆ ಮುಚ್ಚಲೇಬೇಕು
ಆದರೆ, ಸಾರ್ವಜನಿಕರ ತೆರಿಗೆ ಹಣ, ಮುಂದಾಲೋಚನೆ ಇಲ್ಲದೇ ತೆಗೆದುಕೊಂಡ ಇಂತಹ ನಿರ್ಧಾರದಿಂದ ಪೋಲಾಗುತ್ತಿರುವುದು ಬೇಸರದ ವಿಚಾರ. ಮಾದಾವರದ ಬಿಐಇಸಿ ಕೋವಿಡ್ ಸೆಂಟರ್ ಅನ್ನು ಇಂದಲ್ಲಾ, ನಾಳೆ ಮುಚ್ಚಲೇಬೇಕು. ಆದರೆ, ಕೋವಿಡ್ ಗರಿಷ್ಠವಾಗಿ ಏರುತ್ತಿರುವ ಈ ಸಂದರ್ಭದಲ್ಲಿ ಬಿಬಿಎಂಪಿ ಮತ್ತು ಸರಕಾರ ಇದನ್ನು ಸಮರ್ಥವಾಗಿ ಬಳಸಿಕೊಳ್ಳಲು ವಿಫಲವಾಯಿತೇ ಅಥವಾ ಬದ್ದತೆಯಿಲ್ಲವೇ ಎನ್ನುವುದು ಸಾಮಾನ್ಯವಾಗಿ ಕಾಡುವ ಜನಸಾಮಾನ್ಯರ ಪ್ರಶ್ನೆ.