Unlock 1.0: ಬೆಂಗಳೂರಲ್ಲಿ ಕಂಟೇನ್ಮೆಂಟ್ ಜೋನ್ 32ಕ್ಕೇರಿಕೆ
ಬೆಂಗಳೂರು, ಜೂನ್ 2: ಬೆಂಗಳೂರಿನಲ್ಲಿ ಲಾಕ್ಡೌನ್ 5.0 ಅಥವಾ ಅನ್ ಲಾಕ್ 1.0 ಜಾರಿಗೆ ಬರುತ್ತಿದ್ದಂತೆ ಕೊರನಾವೈರಸ್ ಸೋಂಕಿತರ ಸಂಖ್ಯೆಯೂ ಏರಿಕೆ ಕಂಡಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯಲ್ಲಿರುವ ಕಂಟೇನ್ಮೆಂಟ್ ಜೋನ್ ಗಳ ಸಂಖ್ಯೆ ಕೂಡಾ ಏರುತ್ತಿರುವುದು ಆತಂಕಕಾರಿಯಾಗಿದೆ. ಮಂಗಳವಾರದಂದು ಬೆಂಗಳೂರಿನಲ್ಲಿ 32 ಕಂಟೇನ್ಮೆಂಟ್ ಜೋನ್ ಗಳನ್ನು ಗುರುತಿಸಲಾಗಿದೆ.
ಲಾಕ್ ಡೌನ್ 5.0; ವಿನಾಯಿತಿ ಇದ್ದರೂ ಇವುಗಳ ಪಾಲನೆ ಕಡ್ಡಾಯ
ಕಳೆದ ಎರಡು ದಿನಗಳಲ್ಲೇ 6 ಹೊಸ ಕಂಟೇನ್ಮೆಂಟ್ ಜೋನ್ ಗಳು ಸೇರ್ಪಡೆಗೊಂಡಿವೆ. ಕಳೆದ ಮೂರು ದಿನಗಳಲ್ಲಿ 67 ಹೊಸ ಕೊವಿಡ್ 19 ಪ್ರಕರಣಗಳು ದಾಖಲಾಗಿದ್ದು, ಎಲ್ಲವೂ ಕಂಟೇನ್ಮೆಂಟ್ ಪ್ರದೇಶಕ್ಕೆ ಹೊಂದಿಕೊಂಡಂತೆ ಬಂದಿವೆ. ಈಗ ಭಾನುವಾರದ ಕರ್ಫ್ಯೂ ಕೂಡಾ ತೆಗೆದು ಹಾಕಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್ ಅನಿಲ್ ಕುಮಾರ್ ಹೇಳಿದ್ದಾರೆ.
ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್
ಜೂನ್ 1ರಿಂದ 30ರ ತನಕ ದೇಶದಲ್ಲಿ ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಜಾರಿಯಲ್ಲಿ ಇರುತ್ತದೆ ಎಂದು ಕೇಂದ್ರ ಗೃಹ ಇಲಾಖೆ ಸೂಚಿಸಿದೆ. ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಿರುವ ಪ್ರದೇಶಕ್ಕೆ ಯಾವುದೇ ವಿನಾಯಿತಿ ಇರುವುದಿಲ್ಲ. ಇಡೀ ದೇಶದಲ್ಲಿ ರಾತ್ರಿ 9ರಿಂದ ಬೆಳಗ್ಗೆ 5 ಗಂಟೆಯ ತನಕ ಕರ್ಫ್ಯೂ ಜಾರಿಯಲ್ಲಿರುತ್ತದೆ.
ಎಲ್ಲಾ ನಿಯಮಗಳು ಜಾರಿ
ಬೆಂಗಳೂರಿನ ಕಂಟೇನ್ಮೆಂಟ್ ಜೋನ್ ನಲ್ಲಿ ಈ ಹಿಂದಿನ ಎಲ್ಲಾ ನಿಯಮಗಳು ಜಾರಿಯಲ್ಲಿರಲಿದ್ದು ಯಾವುದೇ ವಿನಾಯತಿ ಸಿಕ್ಕಿಲ್ಲ. ಇದಲ್ಲದೆ, ಕಂಟೇನ್ಮೆಂಟ್ ಜೋನ್ ಸುತ್ತಮುತ್ತ ಪ್ರದೇಶದಲ್ಲಿ ಜನಸಂದಣಿಯನ್ನು ನಿರ್ಬಂಧಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್ ಅನಿಲ್ ಕುಮಾರ್ ಹೇಳಿದರು.
ಶಿವಾಜಿನಗರ, ಪಾದರಾಯನಪುರದಲ್ಲಿ ಹೆಚ್ಚು ಕೇಸ್
ಒಟ್ಟು ಪ್ರಕರಣಗಳ ಶೇ 41ರಷ್ಟು ಶಿವಾಜಿನಗರದಲ್ಲಿ ಕಂಡು ಬಂದಿದ್ದರೆ, ಶೇ 22ರಷ್ಟು ಪಾದರಾಯನಪುರದಲ್ಲಿವೆ. ಎಷ್ಟೇ ಕಠಿಣ ನಿಯಮಗಳು ಬಂದರೂ ಈ ಎರಡು ಪ್ರದೇಶಗಳಲ್ಲಿ ಪರಿಸ್ಥಿತಿ ಸುಧಾರಣೆ ಕಂಡಿಲ್ಲ ಎಂದು ಪಶ್ಚಿಮ ವಲಯದ ಆರೋಗ್ಯ ಅಧಿಕಾರಿ ಡಾ. ಮನೋರಂಜನ್ ಹೇಳಿದ್ದಾರೆ.
ಕಂಟೇನ್ಮೆಂಟ್ ಪ್ರದೇಶಗಳು
ಪಾದರಾಯನಪುರ, ಬೊಮ್ಮನಹಳ್ಳಿ, ಹೊಂಗಸಂದ್ರ, ಬೇಗೂರು, ಶಿವಾಜಿನಗರ, ಬಿಟಿಎಂ ಲೇಔಟ್, ಮಲ್ಲೇಶ್ವರ, ಎಚ್ ಬಿ ಆರ್ ಲೇಔಟ್, ಹೇರೋಹಳ್ಳಿ, ಮಂಗಮ್ಮನಪಾಳ್ಯ, ಹೂಡಿ, ನಾಗವಾರ, ಜ್ಞಾನಭಾರತಿ ನಗರ, ಕೆ. ಆರ್ ಮಾರುಕಟ್ಟೆ, ಎಸ್ ಕೆ ಗಾರ್ಡನ್(ಡಿ.ಜೆ ಹಳ್ಳಿ), ಲಕ್ಕಸಂದ್ರ, ಥಣಿಸಂದ್ರ, ಅಗರ, ಪುಟ್ಟೇನಹಳ್ಳಿ, ಮಾರಪ್ಪನಪಾಳ್ಯ, ಹಗದೂರು, ವರ್ತೂರು, ರಾಮಮೂರ್ತಿ ನಗರ, ಅಗ್ರಹಾರ ದಾಸರಹಳ್ಳಿ, ಹೊನ್ನಾರುಪೇಟೆ, ಮಾರತ್ ಹಳ್ಳಿ,ಸಿದ್ದಾಪುರ, ಹೊಸ ಹಳ್ಳಿ, ಎಚ್. ಎಸ್ ಆರ್ ಲೇ ಔಟ್, ಕಾಡುಗೋಡಿ, ಚೊಕ್ಕಸಂದ್ರ.