ಸರ್ಕಾರ ಅನುಮತಿ ಕೊಟ್ಟರೂ ಖಾಸಗಿ ಬಸ್ ಸೇವೆ ಆರಂಭವಿಲ್ಲವೇಕೆ?
ಬೆಂಗಳೂರು, ಜೂನ್.20: ಕೊರೊನಾ ಸೋಂಕು ಕಡಿಮೆ ಹಿನ್ನೆಲೆಯಲ್ಲಿ ಸಾರಿಗೆ ಮೇಲೆ ವಿಧಿಸಿದ್ದ ಷರತ್ತುಗಳನ್ನು ರಾಜ್ಯ ಸರ್ಕಾರ ಸಡಿಲಿಸಿದೆ. ಸೋಮವಾರದಿಂದ ಶೇ. 50 ರಷ್ಟು ಪ್ರಯಾಣಿಕರೊಂದಿಗೆ ಬಸ್ ಸೇವೆ ಆರಂಭಿಸಲು ಅವಕಾಶ ನೀಡಿದೆ. ಆದರೆ, ಖಾಸಗಿ ಬಸ್ ಮಾಲೀಕರು ಬಸ್ ಸಂಚಾರ ಪ್ರಾರಂಭ ಮಾಡದಿರಲು ತೀರ್ಮಾನಿಸಿದ್ದಾರೆ. ಹೀಗಾಗಿ ಸರ್ಕಾರಿ ಸಾರಿಗೆ ಸೇವೆ ಆರಂಭವಾದರೂ ಖಾಸಗಿ ಬಸ್ಗಳು ಸಂಚಾರ ಆರಂಭಿಸುವುದು ಅನುಮಾನ.
ಡೀಸೆಲ್ ದರಕ್ಕೆ ಬೆಚ್ಚಿ ಬಿದ್ದ ಸಾರಿಗೆ ಉದ್ಯಮ: ರಾಜ್ಯದಲ್ಲಿ ಸ್ಟೇಜ್ ಕ್ಯಾರೇಜ್ ಹಾಗೂ ಕಾಂಟ್ರಾಕ್ಟ್ ಕ್ಯಾರೇಜ್ ಪರವಾನಗಿಯಲ್ಲಿ ಸಾವಿರಾರು ಖಾಸಗಿ ಬಸ್ ಗಳು ಸಾರಿಗೆ ಸೇವೆ ಒದಗಿಸುತ್ತಿವೆ. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಿದ್ದ ಬಸ್ ಸೇವೆಗೆ ಇದೀಗ ಸರ್ಕಾರ ಷರತ್ತು ಬದ್ಧ ಅನುಮತಿ ನೀಡಿದೆ. ಆದರೆ, ದೇಶದಲ್ಲಿ ಸತತವಾಗಿ ಡೀಸೆಲ್ ದರ ಹೆಚ್ಚಳವಾಗಿ 100 ರೂ. ಆಗಿದೆ. ಇಷ್ಟು ದುಬಾರಿ ವೆಚ್ಚದ ಡೀಸೆಲ್ ತುಂಬಿ ಅರ್ಧ ಮಂದಿಯ ಪ್ರಯಾಣಕ್ಕೆ ಅವಕಾಶ ನೀಡಿದರೆ ಒಂದು ತಿಂಗಳಲ್ಲಿ ಬಸ್ ಮಾಲೀಕರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಖಾಸಗಿ ಬಸ್ ಮಾಲೀಕರು ಬಸ್ ಪ್ರಯಾಣ ಆರಂಭಿಸುತ್ತಿಲ್ಲ ಎಂದು ಖಾಸಗಿ ಬಸ್ ಗಳ ಮಾಲೀಕರು ತಿಳಿಸಿದ್ದಾರೆ.
ಕೊರೊನಾ ಅನ್ ಲಾಕ್ 2.0: ರಾಜ್ಯದಲ್ಲಿ ಷರತ್ತು ಬದ್ಧ ಬಸ್ ಸಂಚಾರಕ್ಕೆ ಅವಕಾಶ!
ದುಬಾರಿ ತೆರಿಗೆಗೂ ವಿನಾಯ್ತಿ ಇಲ್ಲ: ರಾಜ್ಯದಲ್ಲಿ ಸ್ಟೇಜ್ ಕ್ಯಾರೇಜ್ ಖಾಸಗಿ ವಾಹನಗಳು ಮೂರು ತಿಂಗಳಿಗೊಮ್ಮೆ 60 ಸಾವಿರ ತೆರಿಗೆ ಪಾವತಿಸಬೇಕು. ಕಾಂಟ್ರಾಕ್ಟ್ ಕ್ಯಾರೇಜ್ ಖಾಸಗಿ ಬಸ್ ಗಳು ತ್ರೈಮಾಸಿಕ 90 ಸಾವಿರ ರೂ. ತೆರಿಗೆಯನ್ನು ಸಾರಿಗೆ ಇಲಾಖೆಗೆ ಪಾವತಿಸಬೇಕು. ಸದ್ಯದ ಡೀಸಲ್ ದರ ಹೆಚ್ಚಳ ಹಾಗೂ ತೆರಿಗೆ ಪಾವತಿಸಲು ಸಾಧ್ಯವಿಲ್ಲ. ಹೀಗಾಗಿ ನನ್ನ ಹನ್ನೆರಡು ಬಸ್ಗಳನ್ನು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದೇನೆ. ಖಾಸಗಿ ಬಸ್ಗಳನ್ನು ಓಡಿಸದೇ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ವಹಿಸಿದರೆ ತೆರಿಗೆ ವಿಧಿಸುವುದಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಖಾಸಗಿ ಬಸ್ ಸೇವೆ ಒದಗಿಸುವುದು ಕಷ್ಟವಾಗಿದೆ. ಒಂದೆಡೆ ತೆರಿಗೆ ಬರೆ, ಮತ್ತೊಂದಡೆ ದುಬಾರಿ ಡೀಸೆಲ್ ದರ. ಹೀಗಾಗಿ ಸರ್ಕಾರ ವಾಹನ ಸಂಚಾರಕ್ಕೆ ಅವಕಾಶ ನೀಡಿದರೂ ಯಾರೂ ಸಹ ಸೇವೆ ಆರಂಭಿಸುವುದಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಒಂದು ತಿಂಗಳ ಮಟ್ಟಿಗೆ ತೆರಿಗೆ ವಿನಾಯ್ತಿ ನೀಡಿದ್ದಾರೆ. ಹೀಗಾಗಿ ಈಗೇನಾದರೂ ಬಸ್ ಸಂಚಾರ ಆರಂಭಿಸಿದರೆ ತಿಂಗಳಿಗೆ 30 ಸಾವಿರ ರೂ. ದಂತೆ ತೆರಿಗೆ ಪಾವತಿಸಬೇಕು ಎಂದು ಖಾಸಗಿ ಬಸ್ ಟ್ರಾವೆಲ್ ಮಾಲೀಕರು ತಿಳಿಸಿದ್ದಾರೆ.
Recommended Video
ಸಾವಿರಾರು ಬಸ್ ಸಾರಿಗೆ ಅಧಿಕಾರಿಗಳ ತೆಕ್ಕೆಗೆ: ರಾಜ್ಯದಲ್ಲಿ ರಸ್ತೆ ತೆರಿಗೆ ಪಾವತಿಸಲಾಗದೇ ಸಾವಿರಾರು ಖಾಸಗಿ ಬಸ್ ಗಳನ್ನು ಪ್ರಾದೇಶಿಕ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ. ಈ ಮೂಲಕ ತೆರಿಗೆ ಕಟ್ಟುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾರೆ. ಆದರೆ, ಈ ಬಸ್ಗಳನ್ನು ನಂಬಿ ಸಾಲ ಕೊಟ್ಟಿದ್ದ ಬ್ಯಾಂಕ್ ಗಳು ಮಾತ್ರ ಪರದಾಡುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ನಿಂತು ಹೋಗಿರುವ ಬಸ್ ಗಳನ್ನು ವಶಕ್ಕೆ ಪಡೆದು ನಿಲ್ಲಿಸಿಕೊಳ್ಳಲು ಜಗವಿಲ್ಲ. ನಷ್ಟದಲ್ಲಿರುವ ಮಾಲೀಕರು ಸಾಲ ಮರು ಪಾವತಿ ಮಾಡುತ್ತಿಲ್ಲ. ಹೀಗಾಗಿ ಸಾಲ ವಸೂಲಿ ಮಾರ್ಗ ತಿಳಿಯದೇ ಬ್ಯಾಂಕ್ ಗಳು ಕೂಡ ಪರದಾಡುವಂತಾಗಿದೆ.