ಕೋವಿಡ್ ನಿಯಮ ಉಲ್ಲಂಘನೆ ಮಾಡಿದ 170 ವಾಹನಗಳು ಜಪ್ತಿ
ಬೆಂಗಳೂರು ಏಪ್ರಿಲ್ 24: ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ 150 ವಾಹನಗಳನ್ನು ಪಶ್ಚಿಮ ವಿಭಾಗದ ಪೊಲೀಸರು ಜಪ್ತಿ ಮಾಡಿದ್ದಾರೆ. ಡಿಸಿಪಿ ಸಂಜೀವ ಎಂ. ಪಾಟೀಲ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಅನಾವಶ್ಯಕವಾಗಿ ಓಡಾಟ ನಡೆಸಿ ಕೋವಿಡ್ ನಿಯಮ ಉಲ್ಲಂಘನೆ ಮಾಡಿದವರ ವಾಹನ ಜಪ್ತಿ ಮಾಡಿ ಶಾಕ್ ನೀಡಿದ್ದಾರೆ.
ಲಾಕ್ ಡೌನ್ ಮತ್ತು ಕರ್ಫ್ಯೂ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಅನಾವಶ್ಯಕವಾಗಿ ಓಡಾಡುವವರ ವಾಹನಗಳನ್ನು ಜಪ್ತಿ ಮಾಡುತ್ತೇವೆ. ಮೊದಲ ಹಂತದಲ್ಲಿ ಈಗಾಗಲೇ 150 ವಾಹನಗಳನ್ನು ಜಪ್ತಿ ಮಾಡಿದ್ದೇವೆ. ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಆಸ್ಪತ್ರೆಗಳ ಮೇಲೂ ನಿಗಾ ವಹಿಸಲಾಗಿದೆ. ಆಸ್ಪತ್ರೆ ಸಿಬ್ಬಂದಿ ಕೂಡ ಸ್ಪಂದಿಸುತ್ತಿದ್ದಾರೆ. ಬಿಡ್ ಸಿಗದೇ ರೋಗಿಗಳು ಕಂಗಾಲಾಗುವ ಅಗತ್ಯವಿಲ್ಲ. ಬೆಡ್ ಒದಗಿಸುವ ಸಂಬಂಧ ಎಲ್ಲಾ ಡಿಸಿಪಿಗಳಿಗೆ ಜವಾಬ್ಧಾರಿ ವಹಿಸಲಾಗಿದೆ. ಬೆಡ್ ಇದ್ದೂ ರೋಗಿಗಳಿಗೆ ನೀಡದೆ ನಿರಾಕರಿಸಿದರೆ ಅಂಥ ಆಸ್ಪತ್ರೆ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸುವುದಾಗಿ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಎಂ. ಪಾಟೀಲ್ ತಿಳಿಸಿದ್ದಾರೆ.
ಕೆ.ಆರ್. ಮಾರ್ಕೆಟ್ ಸ್ಥಗಿತ: ಪಶ್ಚಿಮ ವಿಭಾಗದ ಪೊಲೀಸರ ವ್ಯಾಪ್ತಿಗೆ ಬರುವ ಕೆ.ಆರ್. ಮಾರ್ಕೆಟ್ ನಲ್ಲಿ ಜನ ಸಂದಣಿ ಇತ್ತು. ಮಾರ್ಕೆಟ್ ಬಂದ್ ಮಾಡಲಿಕ್ಕೆ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಇದರ ಜತೆಗೆ ಕಾರ್ಯ ನಿರ್ವಹಿಸುತ್ತಿದ್ದ ಬಾಳೆಹಣ್ಣು ಮಂಡಿಗಳನ್ನು ಕೆ.ಆರ್. ಮಾರ್ಕೆಟ್ ಠಾಣೆ ಪೊಲೀಸರು ಬಂದ್ ಮಾಡಿದ್ದಾರೆ. ಚಿಕ್ಕಪೇಟೆಯಲ್ಲಿ ಕೂಡ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಲಾಗಿದೆ.
Recommended Video
ಕೇಂದ್ರ ವಿಭಾಗದಲ್ಲಿ 20 ವಾಹನ ಜಪ್ತಿ : ಡಿಸಿಪಿ ಎಂ.ಎನ್. ಅನುಚೇತ್ ಮಾರ್ಗದರ್ಶನದಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ 20 ವಾಹನಗಳನ್ನು ಕೇಂದ್ರ ವಿಭಾಗದ ಪೊಲೀಸರು ಜಪ್ತಿ ಮಾಡಿದ್ದಾರೆ. ಇನ್ನು ಪೊಲೀಸ್ ಸಿಬ್ಬಂದಿ ಕಾರ್ಯ ನಿರ್ವಹಣೆಯನ್ನು ಪರಿಶೀಲಿಸಲು ಡಿಸಿಪಿ ಸ್ವತಃ ರೌಂಡ್ಸ್ ಮಾಡಿದರು. ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿದವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಜರುಗಿಸುವಂತೆ ಪೊಲೀಸ್ ಸಿಬ್ಬಂದಿಗೂ ಸೂಚಿಸಲಾಗಿದೆ. ಪೊಲೀಸರ ಕಾರ್ಯಶೈಲಿ ಮತ್ತು ಸಾರ್ವಜನಿಕರು ನಿಯಮ ಉಲ್ಲಂಘನೆ ಪತ್ತೆ ಮಾಡಲಿಕ್ಕೆ ಪ್ರತ್ಯೇಕ ಪೆಟ್ರೋಲಿಂಗ್ ವಾಹನ ಸೌಲಭ್ಯ ಕೂಡ ಕೇಂದ್ರ ವಿಭಾಗದಲ್ಲಿ ಕಲ್ಪಿಸಲಾಗಿದೆ.