ಆಕ್ಸಿಜನ್ ಅವಾಂತರ: ಬೆಂಗಳೂರು ಕೊರೊನಾ ರೋಗಿಗಳಿಗೆ ನಿತ್ಯ ನರಕಯಾತನೆ!?
ಬೆಂಗಳೂರು, ಏಪ್ರಿಲ್ 21: ದೇಶಾದ್ಯಂತ ಕೊವಿಡ್-19 ಸೋಂಕಿತರ ಸಂಖ್ಯೆಯ ಜೊತೆಗೆ ಆಕ್ಸಿಜನ್ ಕೊರತೆ ಹೆಚ್ಚುತ್ತಿದೆ. ರೋಗಿಗಳನ್ನು ಉಸಿರಾಟ ಸಮಸ್ಯೆಯಿಂದ ರಕ್ಷಿಸುವಲ್ಲಿ ಅತ್ಯವಶ್ಯಕ ಆಗಿರುವ ಆಕ್ಸಿಜನ್ ಕೊರತೆ ಎದುರಿಸುವಲ್ಲಿ ಬೆಂಗಳೂರು ಕೂಡಾ ಹೊರತಾಗಿಲ್ಲ.
ಸಿಲಿಕಾನ್ ಸಿಟಿಯ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಆಮ್ಲಜನಕ ಸಿಲಿಂಡರ್ ಸರಬರಾಜು ಮಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದ್ದರೂ, ವಾಸ್ತವದ ಸ್ಥಿತಿ ಬೇರೆಯೇ ಆಗಿದೆ.
Infographics: ಕೊರೊನಾ ಎರಡನೇ ಅಲೆಗೂ ಮೊದಲೇ ಎಡವಿತಾ ಸರ್ಕಾರ?
ಬೆಂಗಳೂರಿನಲ್ಲಿ ಮೊದಲಿನಂತೆ ಆಕ್ಸಿಜನ್ ಸಿಲಿಂಡರ್ ಪೂರೈಕೆ ಮಾಡಲಾಗುತ್ತಿದೆ. ಆದರೆ ಮೊದಲಿಗಿಂತ ಈಗ ಬೇಡಿಕೆ ಹೆಚ್ಚಾಗಿದ್ದು, ಸರಬರಾಜು ಆಗುತ್ತಿರುವ ಆಕ್ಸಿಜನ್ ಸಾಕಾಗುತ್ತಿಲ್ಲ ಎಂದು ಯುನಿವರ್ಸಲ್ ಏರ್ ಹೆಚ್ಚುವರಿ ನಿರ್ದೇಶಕ ಶಾಸ್ತ್ರಿ ಕೆಎಸ್ಎನ್ ತಿಳಿಸಿದ್ದಾರೆ. ರಾಜ್ಯದ ಕೆಲವೆಡೆ ದ್ರವರೂಪದ ಆಕ್ಸಿಜನ್ ಕೂಡಾ ಉತ್ಪಾದಿಸಲಾಗುತ್ತಿದೆ. ಆದರೆ ಈ ಮೊದಲು 10 ಆಕ್ಸಿಜನ್ ಸಿಲಿಂಡರ್ ಬಳಕೆ ಆಗುತ್ತಿದ್ದ ಆಸ್ಪತ್ರೆಗಳಲ್ಲಿ ಇಂದು 100 ಆಕ್ಸಿಜನ್ ಸಿಲಿಂಡರ್ ಗಳಿಗೆ ಬೇಡಿಕೆ ಬಂದಿದೆ ಎಂದು ಹೇಳಿದ್ದಾರೆ.
ಉತ್ಪಾದನೆಗಿಂತ ಬೇಡಿಕೆ ಹೆಚ್ಚಾಗಿದ್ದಕ್ಕೆ ಆಕ್ಸಿಜನ್ ಕೊರತೆ
ಬೆಂಗಳೂರಿನಂತಾ ನಗರದ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಸೃಷ್ಟಿಯಾಗಿದೆ ಎಂದರೆ ಅದಕ್ಕೆ ಆಕ್ಸಿಜನ್ ಉತ್ಪಾದನೆ ಕಾರಣವಲ್ಲ. ಅದರ ಬದಲಿಗೆ ಉತ್ಪಾದನೆಗಿಂತಲೂ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ದಿನವೊಂದಕ್ಕೆ 150 ರಿಂದ 200 ಮೆಟ್ರಿಕ್ ಟನ್ ಬಳಕೆಯಾಗುತ್ತಿದೆ. ಆದರೆ ಇಷ್ಟೊಂದು ಉತ್ಪಾದನೆ ಆದರೂ ಆಕ್ಸಿಜನ್ ಸಂಗ್ರಹಣೆ ಮತ್ತು ಸರಬರಾಜು ಮಾಡುವುದು ಸವಾಲಾಗುತ್ತದೆ ಎಂದು ಹೇಳಿದ್ದಾರೆ.
ಪ್ರತಿನಿತ್ಯ 25 ರಿಂದ 30 ಮೆಟ್ರಿಕ್ ಟನ್ ಆಕ್ಸಿಜನ್
ರಾಜ್ಯದಲ್ಲಿ ಆಕ್ಸಿಜನ್ ಕೊರತೆ ನಿವಾರಿಸುವುದಕ್ಕೆ ಬಳ್ಳಾರಿಯ ಪ್ರಾಥಮಿಕ ಆಮ್ಲಜನಕ ಉತ್ಪಾದನಾ ಕೇಂದ್ರದಲ್ಲಿ ಪ್ರತಿನಿತ್ಯ 25 ರಿಂದ 30 ಮೆಟ್ರಿಕ್ ಟನ್ ಆಮ್ಲಜನಕವನ್ನು ಹೆಚ್ಚುವರಿಯಾಗಿ ಉತ್ಪಾದಿಸಿ ಪೂರೈಕೆ ಮಾಡಲಾಗುತ್ತಿದೆ. ಮೂಲಗಳ ಪ್ರಕಾರ, ಆಕ್ಸಿಜನ್ ಪ್ರಮಾಣವನ್ನು ಲೆಕ್ಕ ಹಾಕಲಾಗುತ್ತಿಲ್ಲ. ವಿತರಕರು ಮಾತ್ರ ತಮ್ಮ ಆಕ್ಸಿಜನ್ ಟ್ಯಾಂಕರ್ ಗಳು ಇಂದಿಗೂ ಬಳ್ಳಾರಿಯಲ್ಲೇ ಉಳಿದಿದ್ದು, ಇನ್ನೂ ತುಂಬಿಸಿ ಕಳುಹಿಸುವ ಕೆೆಲಸವಾಗಿಲ್ಲ ಎನ್ನುತ್ತಿದ್ದಾರೆ.
ಏಪ್ರಿಲ್ ವೇಳೆಗೆ ಪ್ರತಿನಿತ್ಯ 300 ಮೆಟ್ರಿಕ್ ಟನ್ ಆಕ್ಸಿಜನ್
ಸರ್ಕಾರಿ ಮೂಲಗಳ ಪ್ರಕಾರ, ಬಳ್ಳಾರಿಯ ಜೆಎಸ್ ಡಬ್ಲ್ಯೂ ಸ್ಟೀಲ್ ಕಂಪನಿಯಲ್ಲಿ ಪ್ರತಿನಿತ್ಯ 110 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದನೆ ಮಾಡಿ ರಾಜ್ಯಾದ್ಯಂತ ಪೂರೈಕೆ ಮಾಡಲಾಗುತ್ತಿದೆ. ಏಪ್ರಿಲ್ ಅಥವಾ ಮೇ ತಿಂಗಳಾಂತ್ಯಕ್ಕೆ ಪ್ರತಿದಿನ 300 ರಿಂದ 400 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದನೆ ಮಾಡಿ ಸರಬರಾಜು ಮಾಡುವ ಗುರಿ ಹೊಂದಲಾಗಿದೆ. ಈ ಆಕ್ಸಿಜನ್ ಉತ್ಪಾದನೆ ಕೇಂದ್ರವನ್ನು ವಾಣಿಜ್ಯ ಶ್ರೇಣಿಯಿಂದ ವೈದ್ಯಕೀಯ ಶ್ರೇಣಿಗೆ ಬದಲಾಯಿಸುವುದಕ್ಕೆ ಕೆಲವು ಸಮಯ ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಆಕ್ಸಿಜನ್ ಕೊರತೆಯಿಂದ ಚಿತ್ರಹಿಂಸೆ
ಕೊರೊನಾವೈರಸ್ ಸೋಂಕಿತರಿಗೆ ಅಗತ್ಯವಿರುವ ಆಕ್ಸಿಜನ್ ವ್ಯವಸ್ಥೆ ಇಲ್ಲದೇ ಬೆಂಗಳೂರಿನಲ್ಲಿ ಜನರು ಚಿತ್ರಹಿಂಸೆ ಅನುಭವಿಸುವಂತಾ ಸ್ಥಿತಿ ನಿರ್ಮಾಣವಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಿಂದ ರೋಗಿಗಳನ್ನು ಡಿಸ್ಚಾರ್ಜ್ ಮಾಡಲಾಗುತ್ತಿದ್ದು, ಕೆಲವು ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಕೊನೆಯ ಹಂತದಲ್ಲಿ ಆಕ್ಸಿಜನ್ ಸಿಲಿಂಡರ್ ಬಂದಿದ್ದರ ಹಿನ್ನೆಲೆ ಕೆಲವು ರೋಗಿಗಳನ್ನು ಆಸ್ಪತ್ರೆಯಲ್ಲಿ ಇರಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಮತ್ತಷ್ಟು ಆಕ್ಸಿಜನ್ ಸಿಲಿಂಡರ್ ಗಳು ಆದಷ್ಟು ಬೇಗ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಆಸ್ಪತ್ರೆಯ ನೋಡೆಲ್ ಅಧಿಕಾರಿ ಡಾ. ತನ್ವೀರ್ ಖಾನ್ ಹೇಳಿದ್ದಾರೆ.
Recommended Video