ಕೊರೊನಾ ನಾಗಾಲೋಟದ ನಡುವೆ ನಿಟ್ಟುಸಿರು ಬಿಡುವ ವಿಚಾರ
ಕೊರೊನಾ ಮತ್ತು ಅದರ ರೂಪಾಂತರಿ ಕೇಸುಗಳು ದೇಶದಲ್ಲಿ ಮತ್ತು ರಾಜ್ಯದಲ್ಲಿ ನಾಗಲೋಟದಲ್ಲಿ ಏರುತ್ತಿದೆ. ಮಂಗಳವಾರ (ಜ 11) ಒಂದೇ ದಿನ ಮತ್ತೆ 14,473 ಕೇಸು ರಾಜ್ಯದಲ್ಲಿ ದಾಖಲಾಗಿದೆ. ಇದರಲ್ಲಿ ರಾಜಧಾನಿ ಬೆಂಗಳೂರು ಪಾಲು 10,800. ಅಂದರೆ ಒಟ್ಟು ವರದಿಯಾಗುತ್ತಿರುವ ಕೇಸುಗಳಲ್ಲಿ ಬೆಂಗಳೂರು ಒಂದರಲ್ಲೇ ಸುಮಾರು ಶೇ. 80.
ರಾಜ್ಯ ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ಪ್ರಕಾರ, ಓಮಿಕ್ರಾನ್ 479, ಡೆಲ್ಟಾ 2,937, ಡೆಲ್ಟಾದ ಇನ್ನೊಂದು ರೂಪಾಂತರಿ 1,350 ಕೇಸುಗಳಿವೆ. ರಾಜ್ಯದ ಸದ್ಯದ ಪಾಸಿಟಿವಿಟಿ ರೇಟ್ ಶೇ. 10.30. ಇದರ ಜೊತೆಗೆ, ಆಂಟಿಜೆನ್ ಮತ್ತು ಆರ್ಟಿಪಿಸಿಆರ್ ಟೆಸ್ಟ್ ಗಳ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ.
ಸಚಿವರಾದ ಜೆ.ಸಿ. ಮಾಧುಸ್ವಾಮಿ, ಎಸ್.ಟಿ. ಸೋಮಶೇಖರ್ಗೆ ಕೋವಿಡ್ ಸೋಂಕು
ಕೇಸುಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮತ್ತು ಮುಂಬರುವ ವೈಕುಂಠ ಏಕಾದಶಿ ಮತ್ತು ಮಕರ ಸಂಕ್ರಾಂತಿ ಹಬ್ಬವನ್ನು ಗಮನದಲ್ಲಿ ಇಟ್ಟುಕೊಂಡು, ಸರಕಾರ ಮಾರ್ಗಸೂಚಿಯಲ್ಲಿ ಕೆಲವೊಂದು ಬದಲಾವಣೆಯನ್ನು ಮಾಡಿ ಆದೇಶ ಹೊರಡಿಸಿದೆ.
ಖಾಸಗಿ ಆಸ್ಪತ್ರೆಗಳಿಗೆ ದರ ನಿಗದಿ ಪಡಿಸಿ ಸರ್ಕ್ಯೂಲರ್ ಅನ್ನು ಸರಕಾರ ಹೊರಡಿಸಿದೆ. ರಾಜ್ಯದ ಪಾಸಿಟಿವಿಟಿ ರೇಟು ಏರುತ್ತಿದ್ದರೂ, ನೆಮ್ಮದಿ ಪಡುವಂತಹ ವಿಚಾರ ಮೃತ ಪಡುತ್ತಿರುವವರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗುತ್ತಿರುವುದು.
ಹೊಸ ಕೇಸುಗಳು ಹತ್ತು ಸಾವಿರ ದಾಟಿದ್ದರೂ, ರಾಜ್ಯದಲ್ಲಿ ಮೃತ ಪಟ್ಟವರ ಸಂಖ್ಯೆ ಐದು
ಕೊರೊನಾ ಮೂರನೇ ಅಲೆಯ ವಿಚಾರದಲ್ಲಿ ಸಾರ್ವಜನಿಕರು ಭಯ ಪಡುವ ಅವಶ್ಯಕತೆಯಿಲ್ಲ ಎಂದು ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಪದೇಪದೇ ಜನರಿಗೆ ಮನದಟ್ಟು ಮಾಡುವ ಕೆಲಸವನ್ನು ಮಾಡುತ್ತಿದೆ. ಜನವರಿ ಹನ್ನೊಂದರ ಬುಲೆಟಿನ್ ಪ್ರಕಾರ, ಹೊಸ ಕೇಸುಗಳು ಹತ್ತು ಸಾವಿರ ಗಡಿ ದಾಟಿದ್ದರೂ, ರಾಜ್ಯದಲ್ಲಿ ಮೃತ ಪಟ್ಟವರ ಸಂಖ್ಯೆ ಐದು. ಇನ್ನು, ಹೊರ ರೋಗಿ ವಿಭಾಗದ ಮೂಲಕವೇ ಸೋಂಕಿತರು (ಇತರ ಗಂಭೀರ ಕಾಯಿಲೆ ಇದ್ದರೆ ಇದರಿಂದ ಹೊರತು ಪಡಿಸಿ) ಗುಣಮುಖರಾಗಿ ಡಿಸ್ಚಾರ್ಜ್ ಆಗಬಹುದು ಎಂದು ಬಿಬಿಎಂಪಿ ಆಯುಕ್ತರು ಹೇಳಿದ್ದಾರೆ.
ಬಿಬಿಎಂಪಿ ಆಯುಕ್ತರಾದ ಗೌರವ್ ಗುಪ್ತ ಹೇಳಿಕೆ
"ರಾಜಧಾನಿಯಲ್ಲಿ ಹೊಸ ಕೇಸುಗಳು ಹೆಚ್ಚಾಗುತ್ತಿರುವುದು ಹೌದಾದರೂ, ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ನೂರರ ಗಡಿಯನ್ನೂ ಮೀರಿಲ್ಲ. ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ದೈನಂದಿನ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಏನೂ ತೊಂದರೆಯಿಲ್ಲ. ಆದರೆ, ಇನ್ನೂ ಲಸಿಕೆ ಹಾಕಿಸಿಕೊಳ್ಳದವರು ಇದ್ದರೆ, ರಿಸ್ಕ್ ತೆಗೆದುಕೊಳ್ಳಲು ಹೋಗಬೇಡಿ, ಜೊತೆಗೆ, ಎರಡನೇ ಡೋಸ್ ಹಾಕಿಸಿಕೊಳ್ಳುವವರೂ ನಿಗದಿತ ಸಮಯದೊಳಗೆ ಹಾಕಿಸಿಕೊಳ್ಳಿ"ಎಂದು ಬಿಬಿಎಂಪಿ ಆಯುಕ್ತರಾದ ಗೌರವ್ ಗುಪ್ತ ಹೇಳಿದ್ದಾರೆ.
ಬಿಬಿಎಂಪಿ ಕಾನ್ಸನ್ ಟ್ರೇಟರ್, ಆಕ್ಸಿಜನ್ ಪ್ಲಾಂಟ್, ವಾರ್ ರೂಂ
"ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಆದರೆ, ಇದೇ ಪ್ರಮಾಣದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯಲ್ಲಿ ಏರಿಕೆಯಾಗದೇ ಇರುವುದು ನೆಮ್ಮದಿ ಪಡುವಂತಹ ವಿಚಾರ. ಮೂರನೇ ಅಲೆ ಆರೋಗ್ಯದ ಮೇಲೆ ಪ್ರಭಾವ ಬೀರುದೇ ಇರುವುದು ಇದರಿಂದ ಗಮನಿಸಬಹುದಾಗಿದೆ. ಆದರೂ, ಬಿಬಿಎಂಪಿ ಕಾನ್ಸನ್ ಟ್ರೇಟರ್, ಆಕ್ಸಿಜನ್ ಪ್ಲಾಂಟ್, ವಾರ್ ರೂಂ ಸೇರಿದಂತೆ ಸಿದ್ದತೆಯನ್ನು ಮಾಡಿಕೊಂಡಿದ್ದೇವೆ"ಎಂದು ಗೌರವ್ ಗುಪ್ತ ಸ್ಪಷ್ಟ ಪಡಿಸಿದ್ದಾರೆ.
ವೀಕೆಂಡ್, ನೈಟ್ ಕರ್ಫ್ಯೂವನ್ನು ತಿಂಗಳಾಂತ್ಯದವರೆಗೆ ಮುಂದುವರಿಸುವ ನಿರ್ಧಾರ
ಜನವರಿ ಹನ್ನೊಂದರ ಹೆಲ್ತ್ ಬುಲೆಟಿನ್ ಪ್ರಕಾರ ಸಿಎಫ್ಆರ್ (ಸಾವಿನ ಪ್ರಮಾಣ) ಶೇ. 0.03. ಹೊಸ ಕೇಸುಗಳಿಗೆ ಹೋಲಿಸಿದರೆ, ಇದು ತೀರಾ ಕಡಿಮೆ ಎಂದು ಸಲಹಾ ಸಮಿತಿಯೂ ಅಭಿಪ್ರಾಯ ಪಡುತ್ತಿದೆ. ಹೊಸ ಕೇಸುಗಳು ಹೆಚ್ಚಾದರೂ, ಸಂಪೂರ್ಣ ಲಾಕ್ಡೌನ್ ಮಾಡುವ ಇರಾದೆ ಸರಕಾರಕ್ಕೆ ಇಲ್ಲ, ಬದಲಿಗೆ ವೀಕೆಂಡ್, ನೈಟ್ ಕರ್ಫ್ಯೂವನ್ನು ತಿಂಗಳಾಂತ್ಯದವರೆಗೆ ಮುಂದುವರಿಸುವ ನಿರ್ಧಾರಕ್ಕೆ ಬರಲಾಗಿದೆ.