ಬೆಂಗಳೂರಿಗೆ ಮೇ 17ರ ನಂತರ ಕಾದಿದೆ ಗಂಡಾಂತರ: ತಜ್ಞರ ಎಚ್ಚರಿಕೆ
ಬೆಂಗಳೂರು, ಮೇ 10: ಬೆಂಗಳೂರಿಗೆ ಮೇ 17ರ ಬಳಿಕ ದೊಡ್ಡ ಗಂಡಾಂತರ ಕಾದಿದೆ ಎಂದು ತಜ್ಞರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಮಹಾರಾಷ್ಟ್ರ ನಂತರ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು, ದೇಶದಲ್ಲಿ ಸಾಂಕ್ರಾಮಿಕದಿಂದ ಹೆಚ್ಚು ಭಾದಿತ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ರಾಜ್ಯವಾಗಿದೆ.
ದೇಶದ ಶೇ 98ರಷ್ಟು ಜನತೆ ಮೇಲೆ ಲಾಕ್ಡೌನ್ ಹೇರಿಕೆ
ಭಾರತೀಯ ವಿಜ್ಞಾನ ಸಂಸ್ಥೆಯ ಕಂಪ್ಯೂಟೇಶನಲ್ ಮತ್ತು ಡಾಟಾ ಸೈನ್ಸಸ್ ಇಲಾಖೆಯ ಪ್ರಕಾರ, ಮುಂದಿನ ವಾರದ ನಂತರ ಬೆಂಗಳೂರಿನಲ್ಲಿ ಕೋವಿಡ್-19 ಸಕ್ರಿಯ ಪ್ರಕರಣಗಳು ಹೆಚ್ಚಳವಾಗುವುದಾಗಿ ಹೇಳಲಾಗಿದೆ.
ಜೂನ್ 11ರೊಳಗೆ ಬೆಂಗಳೂರಿನಲ್ಲಿ 14 ಸಾವಿರ ಜನರು ಕೋವಿಡ್ ಗೆ ಬಲಿಯಾಗುವ ಸಾಧ್ಯತೆಯಿರುವುದಾಗಿ ಅಂದಾಜಿಸಲಾಗಿದೆ. ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದರೂ ರಾಜಧಾನಿ ಬೆಂಗಳೂರಿನಲ್ಲಿ ಮೇ 17ರ ನಂತರ ಕೋವಿಡ್ ಎರಡನೇ ಅಲೆ ಇನ್ನೂ ಉತ್ತುಂಗಕ್ಕೇರುವ ಸಾಧ್ಯತೆಯಿರುವುದಾಗಿ ತಜ್ಞರು ಹೇಳಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಲಸಿಕೆ ಅಭಿಯಾನ ಹಾಗೂ ರಾಜ್ಯಾದಾದ್ಯಂತ ಹೇರಲಾಗಿರುವ ಲಾಕ್ ಡೌನ್ ನಂತರ ಕಠಿಣ ನಿರ್ಬಂಧಗಳನ್ನು ಗಣನೆಗೆ ತೆಗೆದುಕೊಂಡಿದ್ದು, ಮುಂದೆ ಆಗಲಿರುವ ಗಂಡಾಂತರದ ಬಗ್ಗೆ ಬೆಂಗಳೂರು ಮೂಲದ ಸಂಸ್ಥೆ ಈ ರೀತಿಯ ಮಾಹಿತಿ ನೀಡಿದೆ.
Recommended Video
ರಾಜ್ಯದಲ್ಲಿ ಮೇ 10 ರಿಂದ ಮೇ 24ರವರೆಗೆ ಲಾಕ್ಡೌನ್ ವಿಧಿಸಲಾಗಿದ್ದು, ಅನವಶ್ಯಕವಾಗಿ ಯಾರೂ ಮನೆಯಿಂದ ಹೊರಬರದಂತೆ ಸೂಚಿಸಲಾಗಿದೆ. ಬೆಳಗ್ಗೆ 6 ರಿಂದ 10ಗಂಟೆಯವರೆಗೆ ತರಕಾರಿ, ಹಾಲು ಇನ್ನಿತರೆ ಅಗತ್ಯವಸ್ತುಗಳು ದೊರೆಯಲಿವೆ.