ಐಸಿಯು ಬೆಡ್ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡುತ್ತಿದ್ದವ ಬಂಧನ
ಬೆಂಗಳೂರು, ಏಪ್ರಿಲ್ 28: ಕೊರೊನಾ ಸೋಂಕಿತರಿಗೆ ಬಿಬಿಎಂಪಿ ಕೋಟಾದಡಿ ಐಸಿಯು ಬೆಡ್ ಕೊಡಿಸುವ ಬಗ್ಗೆ ಸ್ವಯಂ ಸೇವಾ ಸಂಸ್ಥೆಗಳ ಹೆಸರಿನಲ್ಲಿ ಬರುವ ನಂಬರ್ ನಂಬಿಕೊಂಡು ಹೋಗಬೇಡಿ. ಬಿಬಿಎಂಪಿ ಕೋಟಾದಡಿ ಬೆಡ್ ಕೊಡಿಸುವ ಆಸೆ ಹುಟ್ಟಿಸಿ ಹಣ ಪಡೆದು ಮೋಸ ಮಾಡುವ ಜಾಲ ಬೆಂಗಳೂರಿನಲ್ಲಿ ತಲೆಯೆತ್ತಿದೆ. ಕೊರೊನಾ ಕಷ್ಟ ಕಾಲದಲ್ಲಿ ಇರುವ ಕಾಸು ಕಳೆದುಕೊಂಡು ಬೀದಿಗೆ ಬೀಳಬೇಕಾದೀತು. ಬಿಬಿಎಂಪಿ ಕೋಟಾದಡಿ ಐಸಿಯು ಬೆಡ್ ಕೊಡಿಸುವ ನೆಪದಲ್ಲಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ಆರೋಪಿಯೊಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಮನೀಶ್ ಸರ್ಕಾರ್ ಬಂಧಿತ ಆರೋಪಿ. ಪಶ್ಚಿಮ ಬಂಗಾಳ ಮೂಲದವ. ಮಲ್ಲೇಶ್ವರದಲ್ಲಿರುವ ಹೌಸ್ ಕೀಪಿಂಗ್ ಗುತ್ತಿಗೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಬಿಬಿಎಂಪಿ ಕೋಟಾದಡಿ ಕೋವಿಡ್ ರೋಗಿಗಳಿಗೆ ಮಂಜೂರಾಗಿರುವ ಐಸಿಯು ಬೆಡ್ ಕೊಡಿಸುವುದಾಗಿ ಸಂದೇಶ ಟೈಪ್ ಮಾಡಿ ಅದಕ್ಕೆ ಆರೋಪಿ ತನ್ನ ನಂಬರ್ ಹಾಕಿದ್ದ. ಈ ಸಂದೇಶವನ್ನು ಹಲವು ವಾಟ್ಸಪ್ ಗ್ರೂಪ್ಗಳಿಗೆ ಸ್ವಯಂ ಸೇವಾ ಸಂಸ್ಥೆ ಹೆಸರಿನಲ್ಲಿ ಹಾಕಿದ್ದ. ಕೆಲವರು ಈತನಿಗೆ ಕರೆ ಮಾಡಿ ಬಿಬಿಎಂಪಿ ಕೋಟಾದಡಿ ಐಸಿಯು ಬೆಡ್ ಕೊಡಿಸುವಂತೆ ಕೋರಿದ್ದರು. ಅನೇಕರು ಮನೀಶ್ ಮೊಬೈಲ್ ಗೆ ಕರೆ ಮಾಡಿ ಬೆಡ್ ಕೊಡಿಸುವಂತೆ ಗೋಗರಿದಿದ್ದರು.
Recommended Video
ಅದೇ ರೀತಿ ಸ್ಟೀಫನ್ ರಾಜ್ ತನ್ನ ತಾಯಿಗೆ ಐಸಿಯು ಬೆಡ್ ಕೊಡಿಸುವಂತೆ ಮನವಿ ಮಾಡಿದ್ದ. ಬೆಡ್ ರೆಡಿ ಇದೆ ಎಂದು ಹೇಳಿ ಸ್ಟೀಫನ್ ರಾಜ್ ನಿಂದ 25 ಸಾವಿರ ಹಣವನ್ನು ಪಡೆದಿದ್ದ ಮನೀಶ್ ಬೇರೆಯವರಿಗೆ ಗಾಳ ಹಾಕಿದ್ದ. ಆದರೆ ಬೆಡ್ ಸಿಗದೇ ಸ್ಟೀಫನ್ ರಾಜ್ ತಾಯಿ ತೀರಿಕೊಂಡಿದ್ದರು. ತನಗಾದ ಅನ್ಯಾಯದ ಬಗ್ಗೆ ಸ್ಟೀಫನ್ ರಾಜ್ ಜಯನಗರ ಪೊಲೀಸರಿಗೆ ದೂರು ನೀಡಿದ್ದ. ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿದಾಗ ಅಕ್ರಮ ಬಯಲಿಗೆ ಬಂದಿದೆ. ಆರೋಪಿ ಬಳಿಯಿದ್ದ 20 ಸಾವಿರ ರೂ. ಹಣ ವಶಕ್ಕೆ ಪಡೆದಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.