ಕೊರೊನಾ ಬೆಡ್ ಬ್ಲಾಕಿಂಗ್ ದಂಧೆ: ಬೆಡ್ ಬ್ಲಾಕಿಂಗ್ ಮಾಡ್ತಿದ್ದ ಇಬ್ಬರು ಬಂಧನ
ಬೆಂಗಳೂರು, ಮೇ. 05: ಕೋವಿಡ್ ರೋಗಿಗಳು ಬೆಡ್ ಸಿಗದೆ ಬೀದಿಯಲ್ಲಿ ಜೀವ ಬಿಡುತ್ತಿದ್ದಾರೆ. ಸರ್ಕಾರದ ಕೋಟಾದಡಿ ಮೀಸಲಿಟ್ಟಿರುವ ಬೆಡ್ಗಳನ್ನು ಬ್ಲಾಕಿಂಗ್ ಮಾಡುವ ಮೂಲಕ ದಂಧೆ ಇದೀಗ ಬೆಂಗಳೂರಿನಲ್ಲಿ ಬಯಲಾಗಿದೆ. ಬೆಡ್ ಬ್ಲಾಕಿಂಗ್ ಮಾಡುವ ದಂಧೆ ಸಂಬಂಧ ಜಯನಗರ ಪೊಲೀಸರು ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿ ಇಬ್ಬರನ್ನು ಬಂಧಿಸಿದ್ದಾರೆ.
Recommended Video
ವಿವಿಧ ರಾಜಕೀಯ ನಾಯಕರೊಂದಿಗೆ ಗುರುತಿಸಿಕೊಂಡಿರುವ ನೇತ್ರಾವತಿ ಮತ್ತು ರೋಹಿತ್ ಬಂಧಿತ ಆರೋಪಿಗಳು. ಎರಡು ಬೆಡ್ಗೆ ತಲಾ 40 ಸಾವಿರ ರೂ ನಂತೆ ಪಡೆದಿದ್ದರು. ಮತ್ತೊಬ್ಬ ರೋಗಿಯಿಂದ 67 ಸಾವಿರ ರೂ. ವಸೂಲಿ ಮಾಡಿದ್ದರು. ಮೂವರಿಗೆ ಬೆಡ್ ಕೊಡಿಸಿದ್ದು, ಒಟ್ಟು ಐದು ಬೆಡ್ ಡೀಲ್ ಮಾಡಿದ್ದರು ಎಂಬುದು ಪ್ರಾಥಮಿಕ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಸದ ತೇಜಸ್ವಿ ಸೂರ್ಯ ನೀಡಿರುವ ದೂರಿನ ಮೇರೆಗೆ ಮತ್ತೊಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬಿಬಿಎಂಪಿ ಬೆಡ್ ಬ್ಲಾಕಿಂಗ್ ಹಗರಣ ಸಿಸಿಬಿ ತನಿಖೆಗೆ: ಕಮಲ್ ಪಂತ್
ವಾಟ್ಸಪ್ ಗ್ರೂಪ್ಗಳ ಮೂಲಕ ಡೀಲ್ : ಇನ್ನು ಕೋವಿಡ್ ರೋಗಿಗಳನ್ನು ಟಾರ್ಗೆಟ್ ಮಾಡಿ ವಾಟ್ಸಪ್ನಲ್ಲಿ ನಂಬರ್ ಕೊಡುತ್ತಿದ್ದರು. ಇವರನ್ನು ಸಂಪರ್ಕಿಸಿದವರಿಗೆ ಮುಂಗಡವಾಗಿ ಸಾವಿರಾರು ರೂಪಾಯಿ ಪಡೆದು ಸೀಟು ಕೊಡುತ್ತಿದ್ದ ಅಂಶ ಬೆಳಕಿಗೆ ಬಂದಿದೆ. ಇನ್ನು ಇವರೊಂದಿಗೆ ಸಂಪರ್ಕ ಇರುವ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಕೋವಿಡ್ ವಾರ್ ರೂಮ್ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲು ಪೊಲೀಸರು ಮುಂದಾಗಿದ್ದಾರೆ.
ತೇಜಸ್ವಿ ಪ್ರಕರಣ: ಸಂಸದ ತೇಜಸ್ವಿ ಸೂರ್ಯ ದಾಖಲಿಸಿರುವ ಪ್ರಕರಣದಲ್ಲಿ ಬಿಬಿಎಂಪಿ ಕೋವಿಡ್ ವಾರ್ ರೂಮ್ನಲ್ಲಿ ಕೆಲಸ ಮಾಡುತ್ತಿದ್ದ ರೆಹಾನ್ ಶಾಹೆದ್ ಎಂಬಾತನನ್ನು ವಶಕ್ಕೆ ಪಡೆದು ಪೊಲೀಸರು ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.
ಬೆಡ್ ಬ್ಲಾಕಿಂಗ್; ಅರ್ಹರಿಗೆ ಬೆಡ್ ಕೊಡದಿರುವುದು ಅಪಚಾರ ಎಂದ ಗೃಹ ಸಚಿವ
ರಾಜಕಾರಣಿಗಳ ಪರಿಚಯ: ಬಂಧಿತ ನೇತ್ರಾವತಿ ಹಲವು ರಾಜಕಾರಣಿಗಳ ಜತೆ ಗುರುತಿಸಿಕೊಂಡಿದ್ದಾರೆ. ಜಯನಗರದ ಶಾಸಕಿ ಸೌಮ್ಯರೆಡ್ಡಿ ಮತ್ತು ಸಂಸದ ತೇಜಸ್ವಿ ಸೂರ್ಯ, ಶಾಸಕ ಜಮೀರ್ ಅಹಮದ್ ಅವರ ಜತೆ ಕಾಣಿಸಿಕೊಂಡಿದ್ದಾಳೆ. ಸೀಟ್ ಬ್ಲಾಕಿಂಗ್ ದಂಧೆಯಲ್ಲಿ ಸಿಕ್ಕಿ ಬಿದ್ದಿರುವ ನೇತ್ರಾವತಿ ವಿಚಾರ ಮುಂದಿಟ್ಟುಕೊಂಡು ಇಬ್ಬರು ಪಾರ್ಟಿಯವರು ಸಾಮಾಜಿಕ ಜಾಲ ತಾಣದಲ್ಲಿ ಈ ವಿಚಾರ ಮುಂದಿಟ್ಟುಕೊಂಡು ಆರೋಪ ಮತ್ತು ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ.