ರಾಜ್ಯ ಪೊಲೀಸ್ ವರಿಷ್ಠರ ಕಚೇರಿಯಲ್ಲಿ ಕೊರೊನಾಗೆ ಮೂರನೇ ಬಲಿ!
ಬೆಂಗಳೂರು, ಏಪ್ರಿಲ್ 25: ಕೊರೊನಾ ರಣಕೇಕೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಮೂರನೇ ಬಲಿ ಪಡೆದಿದೆ. ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿಗೆ ಡಿಜಿ ಕಚೇರಿಯ ಮುಖ್ಯ ಲೆಕ್ಕಾಧಿಕಾರಿ ಸಾವನ್ನಪ್ಪಿದ್ದರು. ಆನಂತರ ದಲಾಯಿತ್ನನ್ನು ಕೊರೊನಾ ಸೋಂಕು ಬಲಿ ಪಡೆದಿತ್ತು. ಇದೀಗ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಲಿಫ್ಟ್ನಲ್ಲಿ ಮಾಡುತ್ತಿದ್ದ ಡಿ ದರ್ಜೆ ನೌಕರ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಲಿಫ್ಟ್ ನಿರ್ವಹಣೆ ಮಾಡುತ್ತಿದ್ದ ಶಿವು ಎಂಬುವರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ ಎಂಬುದು ಪೊಲೀಸ್ ಮಹಾ ನಿರ್ದೇಶಕರ ಕಚೇರಿ ಮೂಲಗಳು ಸ್ಪಷ್ಟಪಡಿಸಿವೆ. ಎರಡು ದಿನದ ಹಿಂದಷ್ಟೇ ದಲಾಯಿತ್ ಅನೀಲ್ ಎಂಬುವರು ಕೊರೊನಾ ಸೋಂಕಿಗೆ ಬಲಿಯಾಗಿದ್ದರು.
ಇದಕ್ಕೂ ಮೊದಲು ಮುಖ್ಯ ಲೆಕ್ಕಾಧಿಕಾರಿ ಮಂಜುನಾಥ್ ಸಾವಿಗೀಡಾಗಿದ್ದರು. ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಕೊರೊನಾ ಸರಣಿ ಸಾವು ಅಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಬೆಚ್ಚಿ ಬೀಳಿಸಿದೆ. ಇಷ್ಟೆಲ್ಲಾ ಅವಘಡ ನಡೆದರೂ ಸಿಬ್ಬಂದಿಗೆ ರಜೆ ನೀಡಿಲ್ಲ. ಮಧ್ಯ ವಯಸ್ಕ ಸಿಬ್ಬಂದಿ ಕೆಲಸ ಮಾಡಲು ಭಯ ಪಡುತ್ತಿದ್ದಾರೆ.
Recommended Video
ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ಪ್ರವೀಣ್ ಸೂದ್ ಈಗಾಗಲೇ ಅನೇಕ ಸಲ ಡಿಜಿ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಕಾಲ ಕಾಲಕ್ಕೆ ಕೋವಿಡ್ ಪರೀಕ್ಷೆ ನಡೆಸುತ್ತಿದ್ದಾರೆ. ಇಷ್ಟೆಲ್ಲಾ ಎಚ್ಚರಿಕೆ ನಡುವೆಯೂ ಕೊರೊನಾ ಬಲಿ ಪಡೆಯುತ್ತಿದೆ. ಈಗಾಗಲೇ ಅನೇಕ ಸಿಬ್ಬಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಕೆಲವರು ಚೇತರಿಸಿಕೊಂಡಿದ್ದಾರೆ. ಇದರ ನಡುವೆಯೂ ಅನಿರೀಕ್ಷಿತವಾಗಿ ಸಾವು ಸಂಭವಿಸುತ್ತಿರುವುದು ಡಿಜಿ ಕಚೇರಿಗೆ ಕೆಲಸಕ್ಕೆ ಹೋಗಲು ಭಯದ ವಾತಾವರಣ ಉಂಟು ಮಾಡಿದೆ. ಈ ಕುರಿತು ಸೋಮವಾರ ಪೊಲೀಸ್ ಮಹಾ ನಿರ್ದೇಶಕರು ಯಾವ ತೀರ್ಮಾನ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ.