ಕೋವಿಡ್ 3ನೇ ಅಲೆ: 25 ಲಕ್ಷ ಮಕ್ಕಳ ಚಿಕಿತ್ಸೆಗೆ ಬೆಂಗಳೂರಿನಲ್ಲಿ ತಜ್ಞರ ಕೊರತೆ, ಪೂರಕ ಕ್ರಮ
ಬೆಂಗಳೂರು ಜೂನ್ 11: ಕೊರೊನಾವೈರಸ್ನ ಎರಡನೇ ಅಲೆಯ ಪ್ರಮಾಣ ಕಡಿಮೆಯಾಗುತ್ತಿದ್ದು ಈಗ ಮೂರನೇ ಅಲೆ ಎದುರಿಸಲು ರಾಜ್ಯವನ್ನು ಸಜ್ಜುಗೊಳಿಸುವ ಪ್ರಯತ್ನವಾಗುತ್ತಿದೆ. ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಬಹುದಾದ ಸಾಧ್ಯತೆಯ ಹಿನ್ನೆಲೆಯಲ್ಲಿ ಅದಕ್ಕೆ ಪೂರಕ ಸಿದ್ಧತೆಗಳಿಗೆ ಬೆಂಗಳೂರಿನಲ್ಲಿ ಬಿಬಿಎಂಪಿ ಯೋಜನೆ ರೂಪಿಸುತ್ತಿದೆ. ಈ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯಲ್ಲಿ ಮಕ್ಕಳು ವೈರಸ್ಗೆ ತುತ್ತಾದಲ್ಲಿ ಮಕ್ಕಳ ತಜ್ಞರ ಕೊರತೆ ಬೆಂಗಳೂರಿನಲ್ಲಿ ಕಾಡುವ ಆತಂಕವೂ ಇದೆ.
ಈ ವಿಚಾರವನ್ನು ಕಂದಾಯ ಸಚಿವ ಆರ್ ಅಶೋಕ್ ಕೂಡ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ನಗರದಲ್ಲಿರುವ 25 ಲಕ್ಷ ಮಕ್ಕಳಿಗೆ ಚಿಕಿತ್ಸೆಯನ್ನು ನೀಡಲು ಅಗತ್ಯವಾದ ಮಕ್ಕಳ ತಜ್ಞರ ಕೊರತೆಯಾಗುವ ವಿಚಾರವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಹೀಗಾಗಿ ಮಕ್ಕಳ ತಜ್ಞರಲ್ಲದ ಇತರ ತಜ್ಞ ವೈದ್ಯರ ಸೇವೆಯನ್ನು ಬಳಸಿಕೊಂಡು ಮಕ್ಕಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ವೈದ್ಯರ ಜೊತೆಗೆ ಖಾಸಗಿ ಆಸ್ಪತ್ರೆಯ ವೈದ್ಯರಿಗೂ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ.
ಸೋಂಕಿನಿಂದ ಗುಣಮುಖರಾದವರಿಗೆ ಸದ್ಯಕ್ಕೆ ಲಸಿಕೆ ಏಕೆ ಅಗತ್ಯವಿಲ್ಲ; ತಜ್ಞರು ಹೇಳುವುದಿದು...
ಮಕ್ಕಳ ತಜ್ಞರಲ್ಲದ ವೈದ್ಯರನ್ನು ಮಕ್ಕಳ ಚಿಕಿತ್ಸೆಗೆ ಬಳಸಿಕೊಳ್ಳಲು ಬಿಬಿಎಂಪಿ ಯೋಜನೆ ರೂಪಿಸುತ್ತಿದೆ. ಇದಕ್ಕೆ ಪೂರಕವಾಗಿ ಬಿಬಿಎಂಪಿ ನಿಮ್ಹಾನ್ಸ್ ಕನ್ವೆಕ್ಷನ್ ಸೆಂಟರ್ನಲ್ಲಿ 'ಮಕ್ಕಳಲ್ಲಿ ಕೋವಿಡ್ 19 ಸೋಂಕಿನ ನಿರ್ವಹಣೆ' ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಗಾರದಲ್ಲಿ ಪಾಲ್ಗೊಂಡ ಬಳಿಕ ಸಚಿವ ಆರ್ ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಮಕ್ಕಳಿಗೆ ಚಿಕಿತ್ಸೆಯನ್ನು ನೀಡುವುದು ಸವಾಲಿನ ಕೆಲಸ. ಆದರೆ ಈ ರೀತಿಯ ಪೂರ್ವಭಾವಿ ಕಾರ್ಯಗಾರಗಳನ್ನು ಮಾಡಿದರೆ ವೈದ್ಯರಿಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದಿದ್ದಾರೆ. "5 ವರ್ಷಕ್ಕಿಂತ ಕೆಳಗಿನ ಮಕ್ಕಳು ತಾಯಿಯಿಂದ ದೂರವಿರುವುದು ಅಸಾಧ್ಯ. ಅಂಥಾ ಸಂದರ್ಭಗಳಲ್ಲಿ ನಾವು ತಾಯಿಗೆ ವೈರಸ್ನಿಂದ ರಕ್ಷಣೆ ನೀಡುವುದನ್ನು ಖಚಿತಪಡಿಸಿಕೊಳ್ಳಬೇಕಿದೆ. ಪೋಷಕರು ಎಲ್ಲಾ ಸಂದರ್ಭಗಳಲ್ಲಿಯೂ ಮಕ್ಕಳೊಂದಿಗೆ ಇರಲು ಪೂರಕವಾಗಿ ವಾರ್ಡ್ಗಳಲ್ಲಿ ಸೌಲಭ್ಯಗಳನ್ನು ನೀಡಬೇಕಿದೆ" ಎಂದು ಆರ್ ಅಶೋಕ್ ಹೇಳಿದ್ದಾರೆ
ಈ ವಿಚಾರವಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಪ್ರತಿಕ್ರಿಯಿಸಿದ್ದು ಆರೋಗ್ಯ ಮೂಲಸೌಕರ್ಯಗಳನ್ನು ಬಲಿಷ್ಠಗೊಳಿಸಲು ಹಾಗೂ ಸೌಲಭ್ಯಗಳನ್ನು ಹೆಚ್ಚಿಸಲು ಮತ್ತು ವೈದ್ಯರಿಗೆ ತರಬೇತಿ ನೀಡಲು ಬಿಬಿಎಂಪಿ ಪೂರಕವಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದೆ. ತಜ್ಞರ ಅಭಿಪ್ರಾಯದ ಪ್ರಕಾರ ಕೋವಿಡ್ನ ಅಪಾಯವನ್ನು ಮುಂದಿನ ದಿನಗಳಲ್ಲಿ ಮಕ್ಕಳು ಎದುರಿಸುವ ಸಾಧ್ಯತೆಗಳು ಇದೆ. ಹೀಗಾಗಿ ನಗರ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿರುವಂತೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದಿದ್ದಾರೆ.
Recommended Video