ಕೋವಿಡ್ 19: ಈ ಕಾರಣಕ್ಕಾಗಿ ಬೆಂಗಳೂರಿನಲ್ಲಿ ಮತ್ತೆ ಹೊಸ ಕೇಸ್ ಹೆಚ್ಚಳ ಸಾಧ್ಯತೆ
ಬೆಂಗಳೂರು, ಮೇ 23: ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡುವ ಹೆಲ್ತ್ ಬುಲೆಟಿನ್ ಪ್ರಕಾರ, ರಾಜಧಾನಿ ಬೆಂಗಳೂರು ಮತ್ತು ರಾಜ್ಯದಲ್ಲಿ ಹೊಸ ಸೋಂಕಿತರ ಸಂಖ್ಯೆ ಸತತವಾಗಿ ಇಳಿಮುಖವಾಗುತ್ತಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿರುವವರ ಸಂಖ್ಯೆಯೂ ಏರುತ್ತಿದೆ.
ಹಾಗಾಗಿ, ಮೇ ತಿಂಗಳ ಆರಂಭದಲ್ಲಿ ಇದ್ದ ಸಕ್ರಿಯ ಪ್ರಕರಣ 6ಲಕ್ಷದಿಂದ ಈಗ 4.83 ಲಕ್ಷಕ್ಕೆ, ಇನ್ನು ಬೆಂಗಳೂರಿನಲ್ಲಿ 3.61ಲಕ್ಷ ಇದ್ದ ಸಂಖ್ಯೆ 2.7ಲಕ್ಷಕ್ಕೆ ಇಳಿದಿದೆ. ಆದರೆ, ವಿರೋಧ ಪಕ್ಷಗಳೂ ಸೇರಿದಂತೆ, ಜನಸಾಮಾನ್ಯರು ಈ ಡೇಟಾದ ಮೇಲೆ ಹೆಚ್ಚಿನ ನಂಬಿಕೆಯನ್ನು ಇಟ್ಟಿಲ್ಲ.
ಭಾರತದಲ್ಲಿ 19.49 ಕೋಟಿ ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ
ಇದಕ್ಕೆ ಕಾರಣ, ಲಾಕ್ ಡೌನ್ ಹೇರಿಕೆಯ ನಂತರ ಗಣನೀಯ ಪ್ರಮಾಣದಲ್ಲಿ ಇಳಿಕೆಯಾದ ಟೆಸ್ಟಿಂಗ್ ಸಂಖ್ಯೆ. ಇದಕ್ಕೆ ಪೂರಕ ಎನ್ನುವಂತೆ, ಟೆಸ್ಟಿಂಗ್ನಲ್ಲಿ ಕಮ್ಮಿಯಾಗಿರುವುದು ಹೌದು ಎಂದು ಬಿಬಿಎಂಪಿ ಆಯುಕ್ತರೂ ಒಪ್ಪಿಕೊಂಡಿದ್ದರು.
ಆರೋಗ್ಯ ಎಮರ್ಜೆನ್ಸಿಯ ವೇಳೆ ರಾಜಕಾರಣಿಗಳು ದೇವೇಗೌಡರಿಂದ ಕಲಿಯಬೇಕಾದ ಪಾಠ
ಮೇ ಮೊದಲನೇ ವಾರದಲ್ಲಿ 1,53,707 ಇದ್ದ ದೈನಂದಿನ ಟೆಸ್ಟಿಂಗ್ ಸಂಖ್ಯೆ ಮೂರನೇ ವಾರದಲ್ಲಿ 1,13,219ರಷ್ಟು ಇಳಿದಿತ್ತು. ಇದು ವ್ಯಾಪಕ ಆಕ್ರೋಶಕ್ಕೆ ಒಳಗಾದ ಹಿನ್ನಲೆಯಲ್ಲಿ ಶನಿವಾರದಿಂದ (ಮೇ 22) ಟೆಸ್ಟಿಂಗ್ ಸಂಖ್ಯೆಯನ್ನು ಬಿಬಿಎಂಪಿ ಹೆಚ್ಚಿಸಿದೆ.
ಬೆಂಗಳೂರು ಒಂದರಲ್ಲೇ ಸರಾಸರಿ 89ಸಾವಿರ ರ್ಯಾಪಿಡ್ ಆಂಟಿಜೆನ್ ಮತ್ತು ಆರ್ಟಿಪಿಸಿಆರ್
ರಾಜಧಾನಿ ಬೆಂಗಳೂರು ಒಂದರಲ್ಲೇ ಸರಾಸರಿ 89ಸಾವಿರ ರ್ಯಾಪಿಡ್ ಆಂಟಿಜೆನ್ ಮತ್ತು ಆರ್ಟಿಪಿಸಿಆರ್ ಕೋವಿಡ್ ಪರೀಕ್ಷೆಯನ್ನು ಮಾಡಲಾಗುತ್ತಿತ್ತು. ಪ್ರಮುಖವಾಗಿ, ಸಾರ್ವಜನಿಕ ನಿಲ್ದಾಣಗಳಲ್ಲಿ ಈ ಪರೀಕ್ಷೆಯನ್ನು ಮಾಡಲಾಗುತ್ತಿತ್ತು. ಈ ಸಂಖ್ಯೆ, ಮೂರನೇ ವಾರದ ಹೊತ್ತಿಗೆ ಸುಮಾರು ನಲವತ್ತು ಸಾವಿರಕ್ಕೆ ಇಳಿದಿತ್ತು. ಹಾಗಾಗಿ, ಹೊಸ ಸೋಂಕಿತರ ಸಂಖ್ಯೆಯೂ ಇಳಿಮುಖಗೊಂಡಿತ್ತು.
ಸಿಎಂ ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಡಾ.ಸುಧಾಕರ್
ರಾಜ್ಯದಲ್ಲಿ ಸೋಂಕು ಕಮ್ಮಿಯಾಗಿಲ್ಲ, ಟೆಸ್ಟಿಂಗ್ ಸಂಖ್ಯೆ ಕಮ್ಮಿಯಾಗಿರುವುದು ಎಂದು ವಿರೋಧ ಪಕ್ಷಗಳು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದವು. ಇನ್ನು, ಸಾವಿನ ಸಂಖ್ಯೆ ಇಳಿಮುಖವಾಗುತ್ತಿಲ್ಲ ಎಂದು ಸಿಎಂ ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಟೆಸ್ಟಿಂಗ್ ಹೆಚ್ಚಿಸಿ, ಕೊರೊನಾ ನಿಯಂತ್ರಣಕ್ಕೆ ತರಲಾಗುವುದು, ಗೌರವ್ ಗುಪ್ತ
ಹೀಗಾಗಿ, ಮತ್ತೆ ರ್ಯಾಂಡಮ್ ಟೆಸ್ಟಿಂಗ್ ಅನ್ನು ಹೆಚ್ಚಿಸಲು ಬಿಬಿಎಂಪಿ ನಿರ್ಧರಿಸಿದೆ. ಶನಿವಾರದಿಂದ ಕೆಲವು ಅಪಾರ್ಟ್ಮೆಂಟ್, ಕಲಾಸಿಪಾಳ್ಯ, ಕೊಳೆಗೇರಿ ಪ್ರದೇಶಗಳಲ್ಲಿ ಕೋವಿಡ್ ಪರೀಕ್ಷೆಯನ್ನು ಬಿಬಿಎಂಪಿ ಆರಂಭಿಸಿದೆ. "ಖಾಸಗಿ ಸಂಘಟನೆಗಳ ನೆರವಿನಿಂದ ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಟೆಸ್ಟಿಂಗ್ ಹೆಚ್ಚಿಸಿ, ಕೊರೊನಾ ನಿಯಂತ್ರಣಕ್ಕೆ ತರಲಾಗುವುದು"ಎಂದು ಗೌರವ್ ಗುಪ್ತ ಹೇಳಿದ್ದಾರೆ.
Recommended Video
ಬೆಂಗಳೂರಿನಲ್ಲಿ ಮುಂದಿನ ಕೆಲವು ದಿನ ಸೋಂಕಿತರ ಸಂಖ್ಯೆಯಲ್ಲಿ ಏರಿಳಿತ
ಒಂದು ವಾರದ ಹಿಂದೆಯಿಂದ ರ್ಯಾಂಡಮ್ ಟೆಸ್ಟಿಂಗ್ನಲ್ಲಿ ಸ್ವಲ್ಪ ಮಟ್ಟಿನ ಏರಿಕೆ ಕಾಣುತ್ತಿದೆ. ಈಗ, ಬಿಬಿಎಂಪಿ ಹಿಂದಿನಂತೆಯೇ ಟೆಸ್ಟಿಂಗ್ ಹೆಚ್ಚಿಸಲು ನಿರ್ಧರಿಸಿರುವುದರಿಂದ, ಹೊಸ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿಲ್ಲದಿಲ್ಲ. ಹಾಗಾಗಿ, ಬೆಂಗಳೂರಿನಲ್ಲಿ ಮುಂದಿನ ಕೆಲವು ದಿನ ಸೋಂಕಿತರ ಸಂಖ್ಯೆಯಲ್ಲಿ ಏರಿಳಿತವಾಗಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.