ಓದಿ ತಿಳಿಯಿರಿ: ಎಚ್ಎಎಲ್ಗೆ ಹೊಡೆತ ಕೊಟ್ಟ ಕೊರೊನಾವೈರಸ್!
ಬೆಂಗಳೂರು, ಜೂನ್ 09: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನೀಡಿರುವ ಹೊಡೆತಕ್ಕೆ ಇಡೀ ಜಗತ್ತು ತತ್ತರಿಸಿ ಹೋಗಿದೆ. ಭಾರತದಲ್ಲಿ ಪ್ರತಿನಿತ್ಯ ಸಾವಿರಾರು ಜನರ ಪ್ರಾಣ ತೆಗೆಯುವ ಮಹಾಮಾರಿ ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ ಲಿಮಿಟೆಡ್ಗೂ ಭಾರಿ ಪೆಟ್ಟು ಕೊಟ್ಟಿದೆ.
ಎಚ್ಎಎಲ್ ಕಂಪನಿಯ 4,000 ಉದ್ಯೋಗಿಗಳಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದಲ್ಲದೇ ಕಂಪನಿಯ 100 ಉದ್ಯೋಗಿಗಳು ಮಹಾಮಾರಿ ಸುಳಿಗೆ ಸಿಲುಕಿ ಪ್ರಾಣ ಬಿಟ್ಟಿದ್ದಾರೆ. ಇದರಿಂದಾಗಿ ಹೆಚ್ಎಎಲ್ ಕಂಪನಿಯ ಮಹತ್ವದ ರಕ್ಷಣಾ ಯೋಜನೆಗಳಿಗೆ ಹಿನ್ನಡೆಯಾಗಿದೆ.
Explained: ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆಯೇ ಸವಾಲು!
ಬೆಂಗಳೂರು ಹೆಚ್ಎಎಲ್ ಸಂಸ್ಥೆಯ ಲೈಟ್ ಕೊಂಬಟ್ ಏರ್ ಕ್ರಾಫ್ಟ್(LCA) ತೇಜಸ್ ಮತ್ತು ಲೈಟ್ ಕೊಂಬಟ್ ಹೆಲಿಕಾಪ್ಟರ್(LCH) ರೀತಿಯ ಮಹತ್ವದ ಯೋಜನೆಗಳನ್ನು ಅನುಷ್ಠಾನಗೊಳಿಸುವುದಕ್ಕೆ ತೀವ್ರ ಹಿನ್ನಡೆ ಉಂಟಾಗುತ್ತಿದೆ.
ರಕ್ಷಣಾ ಯೋಜನೆಗಳಿಗೆ ಹೊಡೆತ ಕೊಟ್ಟ ಸಾಂಕ್ರಾಮಿಕ ಪಿಡುಗು
ಲೈಟ್ ಕೊಂಬಟ್ ಏರ್ ಕ್ರಾಫ್ಟ್(LCA) ತೇಜಸ್ ಯೋಜನೆಯಲ್ಲಿ 450ಕ್ಕೂ ಹೆಚ್ಚು ಮಾರಾಟಗಾರರು ಭಾಗಿಯಾಗಿದ್ದು, ಇದರ ಕಾರ್ಯವ್ಯಾಪ್ತಿ ಹೊರಭಾಗಕ್ಕೂ ಹರಡಿದ್ದಲ್ಲಿ ಖಾಸಗಿ ವಲಯದ ಮೇಲೂ ಭಾರಿ ಹೊಡೆತ ಬೀಳಲಿದೆ. 2020-21ನೇ ಆರ್ಥಿಕ ಸಾಲಿನಲ್ಲಿ ಭಾರತೀಯ ಕಂಪನಿಗಳ ಜೊತೆಗೆ ಹೆಚ್ಎಎಲ್ ಬಹುದೊಡ್ಡ ಒಪ್ಪಂದ ಮಾಡಿಕೊಂಡಿದ್ದು, 83 LCA MK-IA ಉತ್ಪಾದಿಸುವುದಾಗಿ ಹೇಳಿತ್ತು. 2021-22ರ ಮೊದಲ ತ್ರೈಮಾಸಿಕದ ಮೊದಲ ಎರಡು ತಿಂಗಳ ಅವಧಿಯಲ್ಲಿ, ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಎದುರಾದ ಅಡೆತಡೆಯಿಂದಾಗಿ ಖಾಸಗಿ ವಲಯದಲ್ಲಿ ಯೋಜಿಸಿದಂತೆ ಉತ್ಪನ್ನಗಳನ್ನು ತಲುಪಿಸಲು ಸಾಧ್ಯವಾಗಲಿಲ್ಲ. ಈ ಕಾರಣಕ್ಕೆ ಸುಮಾರು 1,200 ಕೋಟಿ ರೂಪಾಯಿ ಆದಾಯವನ್ನು ಕಳೆದುಕೊಳ್ಳುವಂತಾಗಿದೆ.
ಹೆಚ್ಎಎಲ್ ದೀರ್ಘಾವಧಿ ಯೋಜನೆಗೆ ಸಮಸ್ಯೆಯಿಲ್ಲ
ಒಂದು ಬಾರಿ ಸರಬರಾಜು ಪ್ರಕ್ರಿಯೆ ಆರಂಭವಾದರೆ, ಮಾರಾಟದಲ್ಲಿ ಚೇತರಿಕೆ ಕಂಡು ಬರಲಿದೆ. ನಮ್ಮ ಉದ್ಯೋಗಿಗಳಿಗೆ ಕೊರೊನಾವೈರಸ್ ಸೋಂಕು ತಗುಲಿರುವುದರಿಂದ ಸಂಸ್ಥೆಯ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರಿದೆ. ಹೆಚ್ಚುವರಿ ಪರಿಶ್ರಮದ ಮೂಲಕ ಎಲ್ಲವನ್ನೂ ಸರಿದೂಗಿಸುವ ಕಾರ್ಯ ನಡೆಯುತ್ತಿದೆ. ಆದರೆ ಲೈಟ್ ಕೊಂಬಟ್ ಏರ್ ಕ್ರಾಫ್ಟ್ ರೀತಿಯ ದೀರ್ಘಾವಧಿ ಯೋಜನೆಗೆ ಈ ಸಾಂಕ್ರಾಮಿಕ ಪಿಡುಗಿನಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೆಚ್ಎಎಲ್ ಚೇರ್ ಮನ್ ಹಾಗೂ ನಿರ್ದೇಶಕ ಆರ್ ಮಾಧವನ್ ತಿಳಿಸಿದ್ದಾರೆ.
ಎರಡು ತಿಂಗಳಿನಲ್ಲಿ ಎಲ್ಲ ಸಮಸ್ಯೆಗಳಿಗೆ ಪರಿಹಾರ
"ಹೆಚ್ಎಎಲ್ ಸಂಸ್ಥೆಯಲ್ಲಿ ದೀರ್ಘಾವಧಿ ಯೋಜನೆಗಳನ್ನು ಪೂರ್ಣಗೊಳಿಸುವುದಕ್ಕೆ ಈಗಿರುವ ಸಮಯಾವಧಿ ಸಾಕಾಗುತ್ತದೆ. ಈ ಅವಧಿಯಲ್ಲೇ ಎಲ್ಲ ವಲಯ ಚೇತರಿಸಿಕೊಂಡು ನಿಗದಿತ ಸಮಯದಲ್ಲಿ ನಿಗದಿತ ಗುರಿಯನ್ನು ತಲುಪುವುದಕ್ಕೆ ಸಾಧ್ಯವಿದೆ. ಆದರೆ ದೇಶೀಯ ಹಾಗೂ ವಿದೇಶಗಳಿಗೆ ಈ ಮೊದಲಿದ್ದ ಸರಬರಾಜು ಸರಪಳಿಯಲ್ಲಿ ಸಾಕಷ್ಟು ಅಡೆತಡೆಗಳು ಸೃಷ್ಟಿಯಾಗಿವೆ. ಕ್ಷಿಪ್ರಗತಿಯಲ್ಲಿ ಈ ಸರಬರಾಜು ಹಾದಿಯಲ್ಲಿನ ತೊಡಕುಗಳನ್ನು ನಿವಾರಿಸಿಕೊಳ್ಳಬೇಕಿದೆ. ವಿದೇಶಗಳಿಂದ ಮೂಲ ವಸ್ತುಗಳ ತಯಾರಿಕೆಗೆ ಅಗತ್ಯವಿರುವ ಕಚ್ಚಾವಸ್ತುಗಳ ಆಮದು ದಾರಿಯನ್ನು ಸುಲಲಿತಗೊಳಿಸಬೇಕಿದೆ. ಈ ಎರಡು ಕಾರ್ಯ ಸಾಧಿಸಿದ್ದೇ ಆದಲ್ಲಿ ನಿಗದಿತ ಸಮಯಕ್ಕೆ ಸರಿಯಾಗಿ ನಾವು ನಮ್ಮ ಗುರಿಯನ್ನು ತಲುಪುವುದಕ್ಕೆ ಸಾಧ್ಯವಾಗುತ್ತದೆ. ಜುಲೈ ತಿಂಗಳಾಂತ್ಯದ ವೇಳೆಗೆ ಎಲ್ಲ ತೊಡಕುಗಳು ನಿವಾರಣೆಯಾಗಿರುತ್ತವೆ" ಎಂದು ಹೆಚ್ಎಎಲ್ ನಿರ್ದೇಶಕ ಆರ್ ಮಾಧವನ್ ಹೇಳಿದ್ದಾರೆ.
ಎಚ್ಎಎಲ್ನಲ್ಲಿ ಇಳಿಮುಖವಾದ ಉತ್ಪಾದನೆ
"ಕಳೆದ ಎರಡು ತಿಂಗಳಿನಲ್ಲಿ ಉತ್ಪಾದನಾ ಚಟುವಟಿಕೆಗಳು ಕುಂಠಿತಗೊಂಡಿವೆ. ಉದ್ಯೋಗಿಗಳು ಮೊದಲಿನಂತೆ ಕೆಲಸವನ್ನೇನೋ ಮಾಡುತ್ತಿದ್ದಾರೆ. ಆದರೆ ಮಾರಾಟಗಾರರು ಕಳುಹಿಸುವ ಕಚ್ಚಾವಸ್ತುಗಳ ಮೇಲೆ ಅವಲಂಬಿತರಾಗಿದ್ದೇವೆ. ಅಂತಾರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿರುವುದರಿಂದ ವಿದೇಶಗಳಲ್ಲಿ ಇರುವ ಮೂಲ ವಸ್ತುಗಳ ಉತ್ಪಾದಕ ಕಂಪನಿಗಳಿಂದ ಸರಕುಗಳನ್ನು ಆಮದು ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಸದ್ಯದಲ್ಲೇ ನಿವಾರಣೆಯಾಗುತ್ತೆ ಎಂದು ಹೆಚ್ಎಎಲ್ ನಿರ್ದೇಶಕ ಆರ್ ಮಾಧವನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಚ್ಎಎಲ್ನಲ್ಲಿ ಯಾವ ಹಂತದಲ್ಲಿವೆ ಯೋಜನೆ?
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಹಲವು ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಈ ಪೈಕಿ ಪ್ರಮುಖ ನಾಲ್ಕು ಯೋಜನೆಗಳ ವಸ್ತುಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಉಲ್ಲೇಖಿಸಲಾಗಿದೆ. ನಾಲ್ಕು ಎಲ್ ಸಿಎಗಳು ಸಿದ್ಧವಾಗಿದ್ದು ಇನ್ನೇನು ಭಾರತೀಯ ವಾಯು ಸೇನೆಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯಬೇಕಿದೆ. ಲೈನ್ ರಿಪ್ಲೇಸ್ ಮೆಂಟ್ ಯೂನಿಟ್ ನಿಂದ ಉಪಕರಣಗಳು ಬಾರದ ಹಿನ್ನೆಲೆ ಡಾರ್ನಿಯರ್ ಏರ್ ಕ್ರಾಫ್ಟ್ ಯೋಜನೆಯಲ್ಲಿ ವಿಳಂಬವಾಗಿದೆ. ಕೇಂದ್ರ ಸರ್ಕಾರದ ಎಲ್ ಸಿಹೆಚ್ ಯೋಜನೆಗಳು ವಿಳಂಬವಾಗಿದೆ.
ಎರಡು ವಾರ ಉತ್ಪಾದನಾ ಕಾರ್ಯ ಚಟುವಟಿಕೆ ಬಂದ್
ಹೆಲಿಕಾಪ್ಟರ್ ಅಂತಿಮ ನಿರ್ಮಾಣ ಕೇಂದ್ರದ ಉದ್ಯೋಗಿಗಳಲ್ಲಿ ಕೊರೊನಾವೈರಸ್ ಸೋಂಕು ತಗುಲಿದ್ದ ಹಿನ್ನೆಲೆ ವಿಮಾನ ತರಬೇತಿಯನ್ನು ನಿಲ್ಲಿಸಲಾಗಿದೆ. ಬೆಂಗಳೂರು, ನಾಸಿಕ್, ಕಾನ್ಪುರ್ ಮತ್ತು ಲಕ್ನೋ ಕೇಂದ್ರಗಳಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಮೇ ತಿಂಗಳಿನಲ್ಲಿ ಎರಡು ವಾರ ಕಾರ್ಯಾಚರಣೆಯನ್ನು ಬಂದ್ ಮಾಡಲಾಗಿದೆ. "ಆರ್ಥಿಕ ವರ್ಷದ ಮೊದಲ ತ್ರೈಮಾಸಿಕವು ನಿರಾಶಾದಾಯಕವಾಗಿದೆ. ಮುಂದಿನ ವಾರದ ವೇಳೆಗೆ ಪರಿಸ್ಥಿತಿ ಸುಧಾರಿಸಿಕೊಳ್ಳಲಿದ್ದು, ಕಳೆದ ಬಾರಿಯಂತೆ ಚೇತರಿಕೆ ಕಂಡು ಬರಲಿದೆ" ಎಂದು ಹೆಚ್ಎಎಲ್ ನಿರ್ದೇಶಕ ಆರ್ ಮಾಧವನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.