ಖಾಸಗಿ ಶಾಲಾ ಶಿಕ್ಷಕರಿಗೆ ಮಲಬಾರ್ ಟ್ರಸ್ಟ್ ನಿಂದ ಆಹಾರ ಕಿಟ್ ವಿತರಣೆ
ಬೆಂಗಳೂರು, ಜೂ. 14: ಕೊರೊನಾ ಸೋಂಕಿನಿಂದ ಸಂಕಷ್ಟಕ್ಕೆ ಒಳಗಾಗಿರುವ ಖಾಸಗಿ ಶಾಲಾ ಶಿಕ್ಷಕರಿಗೆ ಖಾಸಗಿ ಶಾಲಾ ಶಿಕ್ಷಕ ಹಾಗೂ ಮಕ್ಕಳ ಹಿತ ರಕ್ಷಣಾ ಸಂಸ್ಥೆ ನೆರವಿಗೆ ನಿಂತಿದೆ. ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಸಂಕಷ್ಟದಲ್ಲಿರುವ ಶಿಕ್ಷಕರಿಗೆ ಮಾ. 20 ರಿಂದ ಆಹಾರ ಕಿಟ್ ವಿತರಣೆ ಮಾಡುತ್ತಿದೆ.
ಕೊರೊನಾ ಸೋಂಕಿನಿಂದ ಖಾಸಗಿ ಶಾಲೆ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ ಆರ್ಥಿಕವಾಗಿ ತೀರಾ ಸಂಕಷ್ಟ ಎದುರಿಸುತ್ತಿದ್ದಾರೆ. ಶಾಲೆಗಳು ಇಲ್ಲದ ಕಾರಣ ಶಿಕ್ಷಕರು ನಿರುದ್ಯೋಗಿಗಳಾಗಿದ್ದರೆ. ಶಿಕ್ಷಕರಿಗೆ ಆರ್ಥಿಕ ನೆರವು ನೀಡುವಂತೆ ಸರ್ಕಾರದ ಮೇಲೆ ಸಾಕಷ್ಟು ಒತ್ತಡ ಹೇರಿದರೂ ಸರ್ಕಾರ ಕೇವಲ 5 ಸಾವಿರ ಪರಿಹಾರ ಘೋಷಣೆ ಮಾಡಿದೆ. ವಾಸ್ತವದಲ್ಲಿ ಈ ಐದು ಸಾವಿರ ರೂಪಾಯಿಯಲ್ಲಿ ಶಿಕ್ಷಕರು ಎಷ್ಟು ತಿಂಗಳು ಜೀವನ ನಿರ್ವಹಣೆ ಮಾಡಲು ಸಾಧ್ಯ ? ಹೀಗಾಗಿ ಹಲವು ಸ್ವಯಂ ಸೇವಾ ಸಂಸ್ಥೆಗಳ ಸಹಾಯ ಪಡೆದು ನೂರಾರು ಶಿಕ್ಷಕರಿಗೆ ಉಚಿತ ಆಹಾರ ಕಿಟ್ ಗಳನ್ನು ವಿತರಿಸುವ ತೀರ್ಮಾನ ತೆಗೆದುಕೊಂಡೆವು. ಅದರಂತೆ ಮಾರ್ಚ್ 20 ರಿಂದಲೂ ಖಾಸಗಿ ಶಾಲಾ ಶಿಕ್ಷಕರಿಗೆ ಉಚಿತ ಆಹಾರ ಕಿಟ್ ವಿತರಣೆ ಮಾಡುತ್ತಿದ್ದೇವೆ ಎಂದು ಖಾಸಗಿ ಶಾಲಾ ಹಾಗೂ ಮಕ್ಕಳ ಕಲ್ಯಾಣ ಸಂಸ್ಥೆಯ ರಾಜ್ಯ ಕಾರ್ಯದರ್ಶಿ ಬೀಬಿ ಆಯಿಷಾ ಶೇಖ್ ತಿಳಿಸಿದ್ದಾರೆ.
ಕೊರೊನಾ ಸೋಂಕಿನಿಂದ ಹಲವು ಶಿಕ್ಷಕರು ಜೀವ ಕಳೆದುಕಕೊಂಡಿದ್ದಾರೆ. ಶಿಕ್ಷಕರ ಮಕ್ಕಳು ಅನಾಥರಾಗಿದ್ದಾರೆ. ಇನ್ನು ಉದ್ಯೋಗ ವಿಲ್ಲದೇ ಶಿಕ್ಷಕರು ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ. ಇಂತಹ ಸಂಕಷ್ಟ ಸ್ಥಿತಿಯಲ್ಲಿ ಜೀವ ಉಳಿಸಿಕೊಳ್ಳುವುದೇ ದೊಡ್ಡ ಸವಾಲು ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಸ್ವಯಂ ಸೇವಾ ಸಂಸ್ಥೆಗಳನ್ನು ಭೇಟಿ ಮಾಡಿ ಶಿಕ್ಷಕರ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಾಗ ಆರ್ಥಿಕ ನೆರವು ನೀಡಿ ಸ್ಪಂದಿಸಿದ್ದಾರೆ. ನಟ ನಿಖಲ ಶೆಟ್ಟಿ ಸೇರಿದಂತೆ ಹಲವಾರು ಸಂಸ್ಥೆಗಳು ಶಿಕ್ಷಕರ ನೆರವಿಗೆ ಬಂದಿವೆ. ನೆರವು ಟ್ರಸ್ಟ್ ಹಾಗೂ ಮಲಬಾರ್ ಚಾರಿಟಬಲ್ ಟ್ರಸ್ಟ ವತಿಯಿಂದ ಆಹಾರ ಕಿಟ್ ವಿತರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಸಂಕಷ್ಟ ಎದುರಿಸುತ್ತಿರುವ ಶಿಕ್ಷಕರಿಗೆ ಉಚಿತ ಆಹಾರ ಕಿಟ್ ವಿತರಣೆ ಮಾಡಲಾಗುವುದು ಎಂದು ಆಯೇಷಾ ಶೇಖ್ ಭರವಸೆ ನೀಡಿದರು.