ಕೊರೊನಾ ಚಿಕಿತ್ಸೆಗೆ 15 ಲಕ್ಷ ರೂ ಶುಲ್ಕ: ಪ್ರತಿಷ್ಠಿತ ಆಸ್ಪತ್ರೆ ವಿರುದ್ಧ ಎಫ್ಐಆರ್
ಬೆಂಗಳೂರು, ಜು. 07: ಕೊರೊನಾ ಸೋಂಕಿಗೆ ದುಬಾರಿ ಚಿಕಿತ್ಸೆ ದರ ವಿಧಿಸಿದ ಆರೋಪದ ಮೇಲೆ ಪ್ರತಿಷ್ಠಿತ ಖಾಸಗಿ ಆಸ್ಪತ್ರೆ ವಿರುದ್ಧ ಎಫ್ಐಆರ್ ದಾಖಲಾಗಿದೆ. ಶೇಷಾದ್ರಿಪುರದಲ್ಲಿರುವ ಟ್ರಿನಿಟಿ ಸೆಂಟ್ರಲ್ ಆಸ್ಪತ್ರೆ ವಿರುದ್ಧ ಶೇಷಾದ್ರಿಪುರ ಪೊಲೀಸರು ಕೇಸು ದಾಖಲಿಸಿದ್ದಾರೆ.
ಕೊರೊನಾ ಸೋಂಕು ಹಿನ್ನೆಲೆಯಲ್ಲಿ ನಾರಾಯಣಸ್ವಾಮಿ ಪೂಲಾ ತನ್ನ ಪುತ್ರ ಯಶವಂತ್ ಎಂಬುವರನ್ನು ಟ್ರಿನಿಟಿ ಸೆಂಟ್ರಲ್ ಆಸ್ಪತ್ರೆಗೆ ದಾಖಲಿಸಿದ್ದರು. ಮೇ. 08 ರಂದು ದಾಖಲಾಗಿದ್ದ ಯಶವಂತ್ ಜೂ. 06 ರಂದು ಡಿಸ್ಚಾರ್ಜ್ ಆಗಿದ್ದರು. ಇದಾಗಿ ಜೂ. 17 ರಂದು ಯಶವಂತ್ ಸಾವನ್ನಪ್ಪಿದ್ದಾರೆ. ಚಿಕಿತ್ಸೆ ವೆಚ್ಚ ಹೆಸರಿನಲ್ಲಿ ಸೆಂಟ್ರಲ್ ಟ್ರಿನಿಟಿ ಆಸ್ಪತ್ರೆ 15,39,999 ರೂ. ವಿಧಿಸಿದ್ದು, ಅಷ್ಟೂ ಮೊತ್ತವನ್ನು ನಾರಾಯಣಸ್ವಾಮಿ ಪಾವತಿ ಮಾಡಿದ್ದಾರೆ.
Recommended Video
ಕೊರೊನಾ ಚಿಕಿತ್ಸೆಗೆ ಸರ್ಕಾರ 4.35 ಲಕ್ಷ ರೂ.ನಿಗದಿ ಮಾಡಿದೆ. ಸರ್ಕಾರದ ಲೆಕ್ಕಾಚಾರದ ಪ್ರಕಾರ ಐದು ಲಕ್ಷ ರೂ. ಪಡೆಯಬೇಕಿತ್ತು. ಸರ್ಕಾರದ ನಿಯಮ ಗಾಳಿಗೆ ತೂರಿ 15 ಲಕ್ಷ ರೂ. ಹೆಚ್ಚು ಹಣ ವಸೂಲಿ ಮಾಡಿದ್ದಾರೆ. ಸರ್ಕಾರದ ನಿಯಮ ಉಲ್ಲಂಘನೆ ಮಾಡಿರುವ ಅಸ್ಪತ್ರೆ ವಿರುದ್ಧ ಕ್ರಮ ಜರುಗಿಸುವಂತೆ ಕೋರಿ ನಾರಾಯಣಸ್ವಾಮಿ ಪೊಲೀಸರಿಗೆ ದೂರು ನೀಡಿದ್ದಾರೆ. ಶೇಷಾದ್ರಿಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.