ಭಯಬಿಡಿ! ಬೆಂಗಳೂರಿನಲ್ಲಿ ಮರಣ ಪ್ರಮಾಣ ಕಡಿಮೆ: ಸುಧಾಕರ್
ಬೆಂಗಳೂರು, ಜೂನ್ 26: ಬೆಂಗಳೂರು ನಗರದಲ್ಲಿ ಕೋವಿಡ್ 19 ಸೋಂಕಿತರ ಪ್ರಮಾಣ, ಮರಣ ಪ್ರಮಾಣವು ದೇಶದಲ್ಲಿನ ಒಟ್ಟಾರೆ ಸರಾಸರಿಗಿಂತ ಕಡಿಮೆ ಇದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಇತರೆ ರಾಜ್ಯ ಮತ್ತು ನಮ್ಮಲ್ಲಿನ ಮಾಹಿತಿಗಳನ್ನು ಮಾಧ್ಯಮಗಳಿಗೆ ವಿವರಿಸಿ ವಾಸ್ತವ ಸಂಗತಿಗಳ ಮೇಲೆ ಸರಿಯಾಗಿ ಬೆಳಕು ಚೆಲ್ಲುವಲ್ಲಿ ವಿಫಲರಾಗಿದ್ದೇವೆ. ಇದರಿಂದಾಗಿ ಗೊಂದಲಕಾರಿ ವರದಿಗಳು ಬಿತ್ತರವಾಗುತ್ತಿವೆ ಎಂದು ಹಿರಿಯ ಅಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿದ ಸಂದಭ೯ದಲ್ಲಿ ಶುಕ್ರವಾರ ವಿಷಾದಿಸಿದರು.
ಬಿಜೆಪಿ ಹೈಕಮಾಂಡ್ ಡಾ. ಸುಧಾಕರ್ ಅವರಿಗೆ ಕರೆ ಮಾಡಿ ಕೊಟ್ಟ ಭರವಸೆ ಏನು?
ದೇಶದ್ಯಾಂತ ಕೋವಿಡ್ಗೆ ಮೃತಪಟ್ಟವರ ಸಂಖ್ಯೆ 15,306 ಆಗಿದ್ದರೆ ರಾಜ್ಯದಲ್ಲಿ 178 ಮಂದಿ ಅಸುನೀಗಿದ್ದಾರೆ. ಬೆಂಗಳೂರು ನಗರದಲ್ಲಿ ಮೃತಪಟ್ಟವರ ಸಂಖ್ಯೆ 78 ಆಗಿದೆ. ದೇಶದ ಇತರೆ ಮಹಾನಗರಗಳಲ್ಲಿ ಈ ಪ್ರಮಾಣ ಹೆಚ್ಚಿದೆ. ಮುಂಬೈಯಲ್ಲಿ 3,964, ದೆಹಲಿಯಲ್ಲಿ 3,264, ಚೆನ್ನೈ 665 ಮತ್ತು ಕೋಲ್ಕತ್ತಾದಲ್ಲಿ 345 ಮಂದಿ ಸಾವನ್ನಪ್ಪಿದ್ದಾರೆ. ಇತರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಸಾವಿನ ಪ್ರಮಾಣ ಕಡಿಮೆ ಎಂದರು.
ಕಳೆದ ನಾಲ್ಕು ತಿಂಗಳು ಉತ್ತಮವಾಗಿ ನಿವ೯ಹಣೆ ಮಾಡಲಾಗಿದೆ. ಈಗ ಸೋಂಕಿತರ ಸಂಖ್ಯೆ ಹೆಚ್ಚಾಗಿ ಸಾವಿನ ಸಂಖ್ಯೆ ಹೆಚ್ಚಾಗಿದ್ದರಿಂದ ಮಾಧ್ಯಮಗಳು ಅದನ್ನೂ ದೊಡ್ಡದಾಗಿ ಬಿಂಬಿಸುತ್ತಿವೆ. ಏಕಾಏಕಿ ಹೆಚ್ಚಳಕ್ಕೆ ಸುತ್ತಲಿನ ಏಳೆಂಟು ಜಿಲ್ಲೆ ರೋಗಿಗಳು ನಗರಕ್ಕೆ ಬರುತ್ತಿರುವ, ಐಎಲ್ಐ ಪ್ರಕರಣಗಳಲ್ಲಿ ಬಹುತೇಕರು ಪಾಸಿಟಿವ್ ಆಗುತ್ತಿರುವುದು ಮತ್ತು ಇತರೆ ಗಂಭೀರ ರೋಗ ಇರುವ ಹಿರಿಯರಿಗೆ ಸೋಂಕು ಕಾಣಿಸಿಕೊಳ್ಳುತ್ತಿರುವುದು ಕಾರಣ ಎಂದು ವಿಶ್ಲೇಷಿಸಿದರು.
ಈ ಹಿನ್ನೆಲೆಯಲ್ಲಿ ಆರಂಭದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಲು ತಾವು ಅನುಸರಿಸಿದ್ದ ಪಾರದಶ೯ಕ ಪದ್ಧತಿಯನ್ನೇ ಮತ್ತೆ ಅಳವಡಿಸಿಕೊಳ್ಳುವುದು ಸೂಕ್ತ ಎಂದು ಸಚಿವರು ಅಭಿಪ್ರಾಯಪಟ್ಟರು.