ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಕೊರೋನಾ ಸೋಂಕು?
ಬೆಂಗಳೂರು, ಏಪ್ರಿಲ್ 16: ಕೊರೋನಾ ಸೋಂಕು ಹರಡದಂತೆ ಇಡೀ ರಾಜ್ಯ ಪೊಲೀಸರೇ ಜೀವ ಪಣಕ್ಕೆ ಇಟ್ಟು ಜನ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ವಿಪರ್ಯಾಸವೆಂದರೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಕೊರೋನಾ ಸೋಂಕು ರುದ್ರ ತಾಂಡವ ಆರಂಭಿಸಿದೆ. ಡಿ.ಜಿ ಕಚೇರಿಯಲ್ಲಿ ಮುಖ್ಯ ಲೆಕ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಇದರ ಬೆನ್ನಲ್ಲೇ ಪ್ರಥಮ ದರ್ಜೆ ಹಂತದ ಸುಮಾರು 6 ಕ್ಕೂ ಹೆಚ್ಚು ಅಧಿಕಾರಿಗಳು ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ಗೊತ್ತಾಗಿದೆ.
ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಕೊರೋನಾ ಸೋಂಕು ತಾಂಡವಾಡುತ್ತಿದೆ. ಡಿಜಿ ಕಚೇರಿಯ ಲೆಕ್ಕ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮುಖ್ಯ ಲೆಕ್ಕಾಧಿಕಾರಿ ವಿ. ಮಂಜುನಾಥ್ ಕೊರೋನಾ ಬಲಿಯಾಗಿದ್ದಾರೆ. ಕಳೆದ ಹದಿನೈದು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಮಂಜುನಾಥ್ ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಕೊರೋನಾ ಇರುವುದು ದೃಢಪಟ್ಟಿತ್ತು. ಆನಂತರ ಸೌತ್ ಎಂಡ್ ವೃತ್ತದಲ್ಲಿರುವ ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಾಲೂರಿನ ಚಿಕ್ಕ ತಿರುಪತಿ ನಿವಾಸಿಯಾದ ಮಂಜುನಾಥ್ ಮೊದಲಿನಿಂದಲೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಗುರುವಾರ ರಾತ್ರಿ ಮೃತದೇಹವನ್ನು ಕಾನೂನು ಬದ್ಧವಾಗಿ ವಿಲೇವಾರಿ ಮಾಡಲಾಗಿದ್ದು, ಮೃತನ ಕುಟುಂಬದಲ್ಲಿ ಆತಂಕ ಮನೆ ಮಾಡಿದೆ.
ಕೆಲ ದಿನಗಳ ಹಿಂದೆ ಪರೀಕ್ಷೆ: ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಕಚೇರಿಯ ಸಿಬ್ಬಂದಿ ಸುರಕ್ಷತೆಗಾಗಿ ಯುಗಾದಿ ಹಬ್ಬದ ಮುನ್ನ ದಿನ ಎಲ್ಲಾ ಸಿಬ್ಬಂದಿಯನ್ನೂ ಪರೀಕ್ಷೆಗೆ ಒಳಪಡಿಸಿದ್ದಾರೆ. ಮಿಗಿಲಾಗಿ ಮುಂದೆ ನಿಂತು ಎಲ್ಲಾ ಸಿಬ್ಬಂದಿಗೂ ವಾಕ್ಸಿನ್ ಕೊಡಿಸಿದ್ದು, ಕೆಲವರು ಪಡೆದುಕೊಂಡಿದ್ದಾರೆ. ಇನ್ನೂ ಕೆಲವರು ಪಡೆದುಕೊಳ್ಳಲು ಉತ್ಸುಕತೆ ತೋರಿಲ್ಲ. ಇದರ ನಡುವೆ ಇದೀಗ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರು ಪ್ರಥಮ ದರ್ಜೆ ಸಹಾಯಕರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಕೊರೋನಾ ಕಾಣಿಸಿಕೊಂಡಿರುವುದು ಇಡೀ ಪೊಲೀಸ್ ಇಲಾಖೆಯಲ್ಲಿ ಚರ್ಚೆಗೆ ಕಾರಣವಾಗಿದೆ.