ಕೊರೊನಾ ನಿಯಂತ್ರಣದಲ್ಲಿ ವೈಫಲ್ಯ, ಕರ್ನಾಟಕ ಸರ್ಕಾರಕ್ಕೆ ಎಎಪಿ ಸಲಹೆ
ಬೆಂಗಳೂರು, ಜೂನ್ 30: ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರುಗಳ ಅಪವಿತ್ರ ಮೈತ್ರಿಯಿಂದಾಗಿ ಕೋವಿಡ್ 18 ದಾರುಣ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರವು ಸಂಪೂರ್ಣ ವೈಫಲ್ಯವನ್ನು ಹೊಂದಿ, ಅಪಾಯ ಮಟ್ಟಕ್ಕೆ ತಲುಪಿರುವುದು ರಾಜ್ಯದ ದುರಂತ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ಕೊರೊನಾ ಸೋಂಕು ನಿವಾರಣೆಗೆ ಹೆಚ್ಚೆಚ್ಚು ಸಂಖ್ಯೆಯ ಪರೀಕ್ಷೆಗಳನ್ನು ನಡೆಸದೆ, ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಸುಳ್ಳು ಸುಳ್ಳು ಹೇಳಿ ಮಾದರಿ ರಾಜ್ಯ ಎಂದೆನಿಸಿಕೊಂಡಿದ್ದ ಈಗ ಹೇಡಿಯಂತೆ ಅವಿತುಕೊಂಡು ಕೊರೊನಾ ಸೋಂಕಿನ ಕುರಿತು ತಪ್ಪು ಮಾಹಿತಿಗಳನ್ನು ರಾಜ್ಯದ ಜನರಿಗೆ ನೀಡುವ ಮೂಲಕ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದೆ. ಆಮ್ ಆದ್ಮಿ ಪಕ್ಷವು ಸರಕಾರದ ಈ ನೀತಿಯನ್ನು ಕಟು ಶಬ್ದಗಳಿಂದ ಖಂಡಿಸುತ್ತದೆ.
ಬೆಂಗಳೂರಿನಲ್ಲಿ 495 ಕೋವಿಡ್ 19 ಸೋಂಕಿತ ವಲಯಗಳಿವೆ!
ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಈ ವೇಳೆಯಲ್ಲೇ ಕೇವಲ ನಾಮಕಾವಸ್ಥೆಗೆ ಒಂದಷ್ಟು ಜನರ ಸಲಹೆ ಪಡೆಯುವ ನಾಟಕವಾಡಿ ಮುಗ್ಧ ಜನರ ಜೀವದ ಜತೆ ಚೆಲ್ಲಾಟವಾಡುತ್ತಿರುವ ರಾಜ್ಯ ಸರ್ಕಾರವನ್ನು ಜನರು ಎಂದಿಗೂ ಕ್ಷಮಿಸುವುದಿಲ್ಲ.
ಇಂತಹ ಸಂಕಷ್ಟದ ಕಾಲದಲ್ಲೂ ನೀರಿನ ಪೈಪ್ ಅಳವಡಿಕೆ, ರಸ್ತೆ ರಿಪೇರಿ, ವೈಟ್ ಟ್ಯಾಪಿಂಗ್, ಬ್ಲಾಕ್ ಟ್ಯಾಪಿಂಗ್ ಹಾಗೂ ಇತರೆ ಕಾಮಗಾರಿಗಳನ್ನು ಮಂಜೂರು ಮಾಡುತ್ತಾ ಹಣ ಕೊಳ್ಳೆ ಹೊಡೆಯುತ್ತಿರುವ ರಾಜ್ಯ ಸರ್ಕಾರಕ್ಕೆ ಕಿಂಚಿತ್ತಾದರೂ ಮಾನ ಮರ್ಯಾದೆ ಇದೆಯೇ ಎಂಬುದು ಪ್ರಶ್ನೆಯಾಗಿದೆ.
ಹಾಸಿಗೆಗಳು ಲಭ್ಯವಿಲ್ಲ, ಪಿಪಿಇ ಕಿಟ್ ಎಲ್ಲಾ ನಕಲಿ
ಸರ್ಕಾರಿ ಆಸ್ಪತ್ರೆಗಳಲ್ಲಿ 1 ಲಕ್ಷ ಹಾಸಿಗೆಗಳು ಹಾಗೂ ಖಾಸಗಿ ವಲಯಗಳಲ್ಲಿ 50 ಸಾವಿರ ಹಾಸಿಗೆಗಳು ಲಭ್ಯವಿದೆ ಎಂದು ಕಳೆದ ಇಪ್ಪತ್ತು ದಿವಸಗಳ ಹಿಂದೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಮಾಧ್ಯಮದ ನೇರ ಪ್ರಸಾರದಲ್ಲಿ ಸುಳ್ಳು ಹೇಳಿ ಜನರನ್ನು ಸಾವಿನ ಕೂಪಕ್ಕೆ ತಳ್ಳಿದ್ದಾರೆ. ನಕಲಿ ಪಿಪಿಇ ಕಿಟ್, ನಕಲಿ ಪರೀಕ್ಷಾ ಕಿಟ್ ಗಳನ್ನು ಪೂರೈಸಿ ಇಂದು ವೈದ್ಯರುಗಳು, ವೈದ್ಯಕೀಯ ಸಿಬ್ಬಂದಿಗಳಿಗೆ, ಪೊಲೀಸರು ಗಳಿಗೆ ಸೋಂಕು ಹರಡುತ್ತಿರುವುದರಲ್ಲಿ ಸರ್ಕಾರವೇ ನೇರ ಹೊಣೆಯನ್ನು ಹೊರಬೇಕಾಗಿದೆ. ಆರೋಗ್ಯ ಇಲಾಖೆಯು 3000.ಕೋಟಿ ರೂ.ಗಳಷ್ಟು ಖರೀದಿ ಮಾಡಿರುವುದಕ್ಕೆ ಲೆಕ್ಕ ಪತ್ರಗಳೇ ಸಿಗುತ್ತಿಲ್ಲವೆಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ
ಖಾಸಗಿ ಆಸ್ಪತ್ರೆಗಳ ಅಡಿಯಾಳುಗಳಾಗಿದ್ದಾರೆ
ಸರ್ಕಾರ ಸೂಚಿಸಿರುವ ದರ ಪಟ್ಟಿಯನ್ನು ಖಾಸಗಿ ಆಸ್ಪತ್ರೆಗಳು ಎಡಗಾಲಲ್ಲಿ ಒದ್ದಿವೆ ಇಷ್ಟಾದರೂ ತಮ್ಮ ಸ್ವಾಭಿಮಾನ ಮಾರಿಕೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಆರೋಗ್ಯ ಸಚಿವರಾದ ಶ್ರೀರಾಮುಲು ಅವರು ಖಾಸಗಿ ಆಸ್ಪತ್ರೆಗಳ ಅಡಿಯಾಳುಗಳಂತೆ ವರ್ತಿಸುತ್ತಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲಿ ₹ 350ಕ್ಕೆ ಗಂಟಲು ದ್ರವ ಪರೀಕ್ಷೆಯನ್ನು ಯಾರೂ ಮಾಡುತ್ತಿಲ್ಲ. ಪಿಪಿಇ ಕಿಟ್, ಕನ್ಸಲ್ಟೇಷನ್ ಶುಲ್ಕ ಇತ್ಯಾದಿಗಳನ್ನು ಪ್ರತ್ಯೇಕವಾಗಿ ವಸೂಲಿ ಮಾಡುತ್ತಿವೆ. ಸರ್ಕಾರ ನಿಗದಿ ಪಡಿಸಿರುವ 65 ಖಾಸಗಿ ಫೀವರ್ ಕ್ಲಿನಿಕ್ಗಳು ಸರ್ಕಾರದ ದರಪಟ್ಟಿಯನ್ನು ಉಲ್ಲಂಘಿಸುತ್ತಿವೆ. ಹಣ ಮಾಡುವ ದಂಧೆಯಲ್ಲಿ ತೊಡಗಿವೆ.
ಸೋಂಕಿನ ನಿಯಂತ್ರಣ ಹಾಗೂ ಚಿಕಿತ್ಸೆ ಬಗ್ಗೆ ಸಲಹೆ
* ತಪಾಸಣಾ, ಚಿಕಿತ್ಸಾ ಕೇಂದ್ರಗಳನ್ನು ಹೆಚ್ಚಳ ಮಾಡಬೇಕು. ದೆಹಲಿಯಲ್ಲಿ ಒಂದೇ ದಿನ ಸುಮಾರು 25 ಸಾವಿರ ಟೆಸ್ಟ್ ಮಾಡಲಾಗಿದೆ. ಅದೇ ರೀತಿ Randam ಟೆಸ್ಟ್ ಸಾಮರ್ಥ್ಯ ಹೆಚ್ಚಿಸಬೇಕು.
* ಹೆಚ್ಚಿನ ಜನರನ್ನು ತಪಾಸಣೆಗೆ ಒಳಪಡಿಸಬೇಕು.
* ಕ್ವಾರಂಟೈನ್ ನಲ್ಲಿರುವ ಪ್ರತಿಯೊಬ್ಬ ಸೋಂಕಿತರಿಗೂ ಪಲ್ಸ್ ಆಕ್ಸಿ ಮೀಟರ್ ಗಳನ್ನು ಒದಗಿಸಬೇಕು.
* ರಾಜ್ಯದ ಪ್ರತಿಯೊಂದು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೆಎಎಸ್ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಬೇಕು.
* ಸರಕಾರ ನಿಗದಿಗೊಳಿಸಿರುವ ದರಪಟ್ಟಿಯನ್ನು ಒಪ್ಪಿಕೊಳ್ಳದ ಖಾಸಗಿ ಆಸ್ಪತ್ರೆಗಳ ಲೈಸೆನ್ಸ್ ಮುಟ್ಟುಗೋಲು ಹಾಕಿಕೊಂಡು ಸರ್ಕಾರ ವಶಪಡಿಸಿಕೊಳ್ಳಬೇಕು ಹಾಗೂ ಸರ್ಕಾರಿ ವೈದ್ಯರುಗಳನ್ನು ಅಲ್ಲಿ ನೇಮಿಸಬೇಕು
ಪ್ರತ್ಯೇಕ ಸಹಾಯವಾಣಿ ಪ್ರಾರಂಭಿಸಬೇಕು
* ಈ ಬಗ್ಗೆ ವಿಚಕ್ಷಣಾ ದಳವನ್ನು ನೇಮಿಸಿ ಅತ್ಯಂತ ಕಟ್ಟುನಿಟ್ಟಾಗಿ ರಾಜ್ಯದಲ್ಲಿನ ಎಲ್ಲ ಖಾಸಗಿ ಆಸ್ಪತ್ರೆಗಳ ಮೇಲೆ ನಿಗಾ ಇಡುವಂತಹ ಪೊಲೀಸ್ ವ್ಯವಸ್ಥೆ ಆಗಬೇಕು.
* ಖಾಸಗಿ ಆಸ್ಪತ್ರೆಗಳು ರೋಗಿಗಳ ಪಡಿಪಾಟಲುಗಳನ್ನು ಆಲಿಸಲು ಪ್ರತ್ಯೇಕ ಸಹಾಯವಾಣಿ ಪ್ರಾರಂಭಿಸಬೇಕು.
* ದೆಹಲಿ ಸರ್ಕಾರದ ಮಾದರಿಯಲ್ಲಿ 10 ಸಾವಿರ ಹಾಸಿಗೆಗಳನ್ನು ಒಂದೇ ಸೂರಿನಡಿ ಸಿದ್ಧಗೊಳಿಸಿರುವ ರೀತಿ, ಬೆಂಗಳೂರಿನಲ್ಲಿಯೂ ಸಹ ಸಮರೋಪಾದಿಯಲ್ಲಿ ಸಿದ್ಧಪಡಿಸಬೇಕು. ಇನ್ನು ಹದಿನೈದು ದಿವಸಗಳ ಕಾಲದಲ್ಲಿ ಸಮರೋಪಾದಿಯಲ್ಲಿ ಪ್ರತಿ ದಿವಸ ಹತ್ತು ಸಾವಿರ ಬೆಡ್ಗಳ ವ್ಯವಸ್ಥೆಯನ್ನು ಸರ್ಕಾರವು ಮಾಡಬೇಕಿದೆ.ಕನಿಷ್ಠ ಒಂದೂವರೆ ಲಕ್ಷಕ್ಕೂ ಹೆಚ್ಚು ಬೆಡ್ಗಳನ್ನು ಹದಿನೈದು ದಿವಸಗಳಲ್ಲಿ ತಯಾರಿಸಬೇಕಿದೆ .
ಬಿಬಿಎಂಪಿಯ ಕಾಮಗಾರಿಗಳನ್ನು ಕೂಡಲೇ ನಿಲ್ಲಿಸಿ
ಬಿಬಿಎಂಪಿಯ ಕಾಮಗಾರಿಗಳನ್ನು ಕೂಡಲೇ ನಿಲ್ಲಿಸಿ ಎಲ್ಲಾ ಅಧಿಕಾರಿಗಳನ್ನು ತುರ್ತು ಈ ಸಂದರ್ಭದಲ್ಲಿ ಬಳಸಿಕೊಳ್ಳಬೇಕು. ಪ್ರಮುಖವಾಗಿ ಬಿಬಿಎಂಪಿಯ ಆಯುಕ್ತರು, ಜಂಟಿ ಆಯುಕ್ತರುಗಳು ಇನ್ನಿತರ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಂಡು ವಜಾಗೊಳಿಸಬೇಕು. ಈ ಸ್ಥಳಗಳಲ್ಲಿ ಕ್ಷಮತೆಯ ವೃತ್ತಿ ಇತಿಹಾಸ ಹೊಂದಿರುವ ಬೇರೆ ಯಾವುದೇ ಇಲಾಖೆಯ ಅಧಿಕಾರಿಗಳನ್ನು ನೇಮಿಸಬೇಕು. ಬಿಬಿಎಂಪಿಯು ಅನುಮೋದನೆ ಗೊಳಿಸಿರುವ ನಕಲಿ ಕಾಮಗಾರಿಗಳಿಗಾಗಿ ನಗರಾಭಿವೃದ್ಧಿ ಇಲಾಖೆಯಿಂದ 560 ಕೋಟಿ ರೂಗಳನ್ನು ಬಿಡುಗಡೆ ಆಗಿರುವ ಮೊತ್ತವನ್ನು ಕೂಡಲೇ ಹಿಂಪಡೆದುಕೊಂಡು ಅಗತ್ಯ ಆರೋಗ್ಯ ಸೇವೆಗಳಿಗೆ ಈ ಹಣವನ್ನು ಬಳಸಿಕೊಳ್ಳಬೇಕಿದೆ
ಉತ್ತಮ ಗುಣಮಟ್ಟದ ಊಟದ ವ್ಯವಸ್ಥೆ ನೀಡಿ
* ಆಸ್ಪತ್ರೆಗಳಲ್ಲಿ ಹಾಗೂ ಸೀಲ್ ಡೌನ್ ಮಾಡಿರುವ ಪ್ರದೇಶಗಳಲ್ಲಿ ಅತ್ಯುತ್ತಮ ಗುಣಮಟ್ಟದ ಆಹಾರವನ್ನು ಪೂರೈಸಲು ಇಂದಿರಾ ಕ್ಯಾಂಟೀನ್ಗಳ ಕೇಂದ್ರೀಕೃತ ಅಡುಗೆ ಮನೆಗಳನ್ನು ಬಳಸಿಕೊಳ್ಳಲು ಇಸ್ಕಾನ್ ಅಕ್ಷಯ ಪಾತ್ರ, ಅದಮ್ಯ ಚೇತನ ಮುಂತಾದ ಸಂಸ್ಥೆಗಳೊಂದಿಗೆ ಕೂಡಲೇ ಒಡಂಬಡಿಕೆ ಮಾಡಿಕೊಂಡು ರೋಗಿಗಳಿಗೆ ಹಾಗೂ ಸೀಲ್ಡ್ ಮಾಡಿರುವ ಪ್ರದೇಶಗಳಲ್ಲಿನ ನಿವಾಸಿಗಳಿಗೆ ಹೊಟ್ಟೆ ತುಂಬಾ ಸಿದ್ದಪಡಿಸಿದ ಆಹಾರ ತಲುಪಿಸಬೇಕು.
* ದೆಹಲಿ ಸರ್ಕಾರವು ಇಂದಿಗೂ ಸಹ ಹದಿಮೂರು ಲಕ್ಷ ಜನತೆಗೆ ಉತ್ತಮ ಗುಣಮಟ್ಟದ ಊಟದ ವ್ಯವಸ್ಥೆಯನ್ನು ಮಾಡುತ್ತಿದೆ.
ಪ್ಲಾಸ್ಮಾ ಬ್ಯಾಂಕ್ ಗಳನ್ನು ಸ್ಥಾಪಿಸಿ
* ವಿಪತ್ತು ನಿರ್ವಹಣಾ ಕಾಯ್ದೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸಬೇಕು. ಅದರಲ್ಲೂ ಗುಂಪು ಸೇರಿಸಿ ಸಭೆ ಸಮಾರಂಭಗಳನ್ನು ನಡೆಸುವ ರಾಜಕಾರಣಿಗಳ ಮೇಲೆ ಪಕ್ಷಾತೀತವಾಗಿ ಕ್ರಮ ಕೈಗೊಳ್ಳಬೇಕು.
* ದೆಹಲಿ ಮಾದರಿಯಲ್ಲಿ ಸುಸಜ್ಜಿತವಾದ ಪ್ಲಾಸ್ಮಾ ಬ್ಯಾಂಕ್ ಗಳನ್ನು ಸ್ಥಾಪಿಸಿ ಪ್ಲಾಸ್ಮಾ ಶಸ್ತ್ರಚಿಕಿತ್ಸೆಗಳನ್ನು ಮಾಡಬೇಕು.
ಈ ಸಲಹೆಗಳನ್ನು ಪರಿಗಣಿಸಿ ಜನಪರವಾಗಿ ಹೆಜ್ಜೆ ಇಡಬೇಕೆಂದು ಆಮ್ ಆದ್ಮಿ ಪಕ್ಷವು ಒತ್ತಾಯಿಸುತ್ತದೆ. ಇಲ್ಲದಿದ್ದ ಪಕ್ಷದಲ್ಲಿ ರಾಜ್ಯದಾದ್ಯಂತ ಲಕ್ಷಾಂತರ ಜನರ ಪ್ರತಿಭಟನೆಯನ್ನು ಮುಂದಿನ ದಿನಗಳಲ್ಲಿ ಎದುರಿಸುವ ಎಚ್ಚರಿಕೆಯನ್ನು ಸಹ ಪಕ್ಷವು ನೀಡುತ್ತಿದೆ.