ಚಾಲಕರಿಗೆ "5 ಸಾವಿರ ಕೊಡಿ", ಎಎಪಿ ವಿನೂತನ ಪ್ರತಿಭಟನೆ
ಬೆಂಗಳೂರು, ಆ. 19": ಬಿಜೆಪಿ ಸರ್ಕಾರದ ಸರಣಿ ಭ್ರಷ್ಟಾಚಾರದ ಮೂಲಕ ಕರ್ನಾಟಕದ ಜನರ ವಿಶ್ವಾಸವನ್ನೇ ಕಳೆದುಕೊಂಡಿದೆ. ಮೂರು ಪಕ್ಷಗಳು ಕರ್ನಾಟಕವನ್ನು ಕೊಳ್ಳೆ ಹೊಡೆದಿವೆ. ಕೊರೋನಾ ನೆಪದಲ್ಲಿ ರಾಜ್ಯ ಸರ್ಕಾರ ಲೂಟಿ ಹೊಡೆದಿದೆ, ಇದನ್ನು ಪ್ರಶ್ನಿಸಬೇಕಾಗಿದ್ದ ವಿರೋಧ ಪಕ್ಷಗಳು ಕೂಡ ಸರ್ಕಾರದ ಜತೆ ಶಾಮೀಲಾಗಿ ಒಂದೂ ಮಾತನ್ನೂ ಆಡದೆ ರಾಜ್ಯದ ಜನರ ಕಣ್ಣಿಗೆ ಮಣ್ಣೆರೆಚುತ್ತಿದ್ದಾರೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಪ್ರಮುಖ ಮೂರು ಪಕ್ಷಗಳು ಸಹ ಅಧಿಕಾರದ ರುಚಿಯನ್ನು ಅನುಭವಿಸಿವೆ, ಇದು ಒಳ ಒಪ್ಪಂದ ಅಲ್ಲದೇ ಮತ್ತೇನು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿ ಅವರು ಪ್ರಶ್ನಿಸಿದ್ದಾರೆ.
Recommended Video
ಕೊವಿಡ್ 19 ಲಾಕ್ಡೌನ್ ಸಂದರ್ಭದಲ್ಲಿಆಟೋರಿಕ್ಷಾ ಚಾಲಕರಿಗೆ 5 ಸಾವಿರ ನೀಡುವುದಾಗಿ ಘೋಷಣೆ ಮಾಡಿದ್ದ ಸರ್ಕಾರ ಕೊಟ್ಟ ಮಾತು ತಪ್ಪಿದೆ. ಇನ್ನು 15 ದಿನದ ಒಳಗೆ ಹಣವನ್ನು ಚಾಲಕರ ಖಾತೆಗೆ ಹಾಕದಿದ್ದರೆ ಪ್ರತಿ ಸಂಸದರ ಹಾಗೂ ಶಾಸಕರ, ಸಚಿವರುಗಳ ಮನೆ ಮುಂದೆ "5 ಸಾವಿರ ಕೊಡಿ" ಎನ್ನುವ ಅಭಿಯಾನ ನಡೆಸಲಾಗುವುದು ಎಂದು ಪೃಥ್ವಿ ರೆಡ್ಡಿ ಎಚ್ಚರಿಕೆ ನೀಡಿದರು.
ಆಟೋ, ಟ್ಯಾಕ್ಸಿ ಚಾಲಕರು 5 ಸಾವಿರ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಆಟೋ ಸಂಘಟನೆಗಳು ಇಂದು ಒಂದೇ ವೇದಿಕೆಯಲ್ಲಿ
ರಾಜ್ಯದ ಎಲ್ಲಾ ಆಟೋ ಸಂಘಟನೆಗಳು ಇಂದು ಒಂದೇ ವೇದಿಕೆಯಲ್ಲಿ ಬಂದಿವೆ ಇದು ರಾಜ್ಯ ಇತಿಹಾಸದಲ್ಲಿ ಮೊದಲು. ಇಲ್ಲಿ ಯಾವುದೇ ರಾಜಕೀಯವಿಲ್ಲ ನಮಗೆಲ್ಲರಿಗೂ ಇರುವುದು ಒಂದೇ ಉದ್ದೇಶ "ಚಾಲಕರ ಜೀವನ ಮಟ್ಟ ಸುಧಾರಿಸಬೇಕು" ಎನ್ನುವುದು ನಮ್ಮ ಉದ್ದೇಶವಾಗಿರುವುದರಿಂದ ಇಂದು ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಂದಾಗಿದ್ದೇವೆ, ಮುಂದೆ ಒಂದಾಗಿಯೇ ಇರುತ್ತೇವೆ ಎಂದು ಹೇಳಿದರು.
ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ ಎನ್ನುವ ನೆಪ
ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ ಎನ್ನುವ ಕುಂಟು ನೆಪ ಮಾಡಿಕೊಂಡು ಚಾಲಕರ ಹೊಟ್ಟೆ ಮೇಲೆ ಸರ್ಕಾರ ಹೊಡೆಯುತ್ತಿದೆ. ಆದರೆ ಪ್ರಭಾವಿ ಶಾಸಕರ ಕ್ಷೇತ್ರಗಳಿಗೆ ಸಾವಿರಾರು ಕೋಟಿ ಕೊಡುಗೆ ನೀಡುತ್ತಿದ್ದಾರೆ. ಇದಕ್ಕೆ ಎಲ್ಲಿಂದ ದುಡ್ಡು ಬರುತ್ತಿದೆ ಈ ಪ್ರಶ್ನೆಗೆ ಉತ್ತರಿಸುವಿರಾ ಯಡಿಯೂರಪ್ಪ ಅವರೇ ಎಂದು ಆಮ್ ಆದ್ಮಿ ಪಕ್ಷ ಬೆಂಗಳೂರು ಘಟಕದ ಅಧ್ಯಕ್ಷರಾದ ಮೋಹನ್ ದಾಸರಿ ವ್ಯಂಗ್ಯವಾಡಿದರು.
5 ಸಾವಿರ ಪರಿಹಾರ ಪಡೆಯಲು ಆಟೋ, ಟ್ಯಾಕ್ಸಿ ಚಾಲಕರಿಗೆ ಅರ್ಹತೆಗಳು
413 ಆಟೋಗಳನ್ನು ಸ್ಯಾನಿಟೈಜ್ ಮಾಡಲಾಯಿತು
ಪ್ರತಿಭಟನೆಯ ನಂತರ ಸುಮಾರು 413 ಆಟೋಗಳನ್ನು ಸ್ಯಾನಿಟೈಜ್ ಮಾಡಲಾಯಿತು. ಪ್ರತಿಭಟನೆಗೆ ಬಂದಿದ್ದ ಆಟೋ ಚಾಲಕರ ದೇಹದ ಉಷ್ಣತೆ, ಪಲ್ಸ್ ಆಕ್ಸಿ ಮೀಟರ್ ಮೂಲಕ ಆಮ್ಲಜನಕ ಮಟ್ಟ ಪರೀಕ್ಷಿಸಲಾಯಿತು ಎಂದು ಆಮ್ ಆದ್ಮಿ ಪಕ್ಷ, ಕರ್ನಾಟಕದ ರಾಜ್ಯ ಮಾಧ್ಯಮ ಸಂಚಾಲಕರಾದ ಜಗದೀಶ್ ವಿ ಸದಂ ತಿಳಿಸಿದರು
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪ್ರಮುಖರು
ಪ್ರತಿಭಟನೆಯಲ್ಲಿ ಆಟೋ ಘಟಕದ ಅಧ್ಯಕ್ಷರಾದ ಅಯೂಬ್ ಖಾನ್, ಉಪಾಧ್ಯಕ್ಷರಾದ ವೆಂಕಟೇಗೌಡ, ಪೀಸ್ ಆಟೋ ಡ್ರೈವರ್ ಸಂಘಟನೆಯ ರಘು ನಾರಾಯಣ ಗೌಡ, ಆದರ್ಶ ಆಟೋ ಸಂಘಟನೆಯ ಡಾ.ಸಂಪತ್, ಆಟೋ ಮಿತ್ರ ಪತ್ರಿಕೆಯ ಜಯರಾಂ, ರಾಜೀವ್ ಗಾಂಧಿ ಆಟೋ ಸಂಘಟನೆಯ ಬಿ.ಚಂದ್ರಶೇಖರ್, ಜಯಕರ್ನಾಟಕ ಸಂಘಟನೆಯ ಆನಂದ್.ಎಚ್, ಕರವೇ ಆಟೋ ಚಾಲಕರ ಸಂಘದ ಗಂಧರ್ವ ರಮೇಶ್, ವಿವಿಧ ಆಟೋ ಚಾಲಕರ ಸಂಘಗಳ ಮುಖಂಡರಾದ ರಾಮಕೃಷ್ಣ, ಸಿ.ಟಿ.ಲೋಕೇಶ್, ನವೀದ್, ಕೆ.ಕೆ.ಚಿಕ್ಕೇಗೌಡ, ಎಜೆ.ಖಾನ್, ಫೈರೋಜ್ ಇದ್ದರು.