ವಿಮಾನ ನಿಲ್ದಾಣಕ್ಕೆ ಸುಳ್ಳು ಬಾಂಬ್ ಕರೆ, ನಿಶ್ಚಿತಾರ್ಥದ ಜೋಡಿಯ ಕಿಲಾಡಿ ಐಡಿಯಾ
ಕೊಚ್ಚಿಗೆ ತೆರಳಬೇಕಿದ್ದ ವಿಮಾನ ತಪ್ಪಿಸಿಕೊಳ್ತೀವಿ ಎಂಬ ಕಾರಣಕ್ಕೆ ನಿಶ್ಚಿತಾರ್ಥವಾಗಬೇಕಿದ್ದ ಜೋಡಿಯೊಂದು ತಮ್ಮ ಸ್ನೇಹಿತನ ಮೂಲಕ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕರೆ ಮಾಡಿಸಿ, ಹುಸಿ ಬಾಂಬ್ ಬೆದರಿಕೆ ಹಾಕಿಸಿದ್ದಾರೆ.
ಬೆಂಗಳೂರು, ಫೆಬ್ರವರಿ 10: ನಿಶ್ಚಿತಾರ್ಥ ಮಾಡಿಕೊಂಡು ಖುಷಿಯಾಗಿರಬೇಕಿದ್ದ ಜೋಡಿಯೊಂದು ಪೊಲೀಸರ ಅತಿಥಿಯಾಗಿರುವ ವರದಿ ಇದು. ಬೆಂಗಳೂರಿನ ಈ ಜೋಡಿ ತಮ್ಮ ನಿಶ್ಚಿತಾರ್ಥ ಗುರುವಾರ ರಾತ್ರಿ ಕೊಚ್ಚಿಯಲ್ಲಿತ್ತು. ಅದಕ್ಕಾಗಿ ಬುಧವಾರ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹೋಗಬೇಕಾಗಿತ್ತು.
ಅದರೆ, ಕೊಚ್ಚಿ ವಿಮಾನವನ್ನು ಸರಿಯಾದ ಸಮಯಕ್ಕೆ ಹಿಡಿಯಲಾರೆವು ಅಂತ ಇಬ್ಬರಿಗೂ ಅನ್ನಿಸಿ, ಏರ್ ಪೋರ್ಟ್ ನಲ್ಲಿ ಬಾಂಬ್ ಇದೆ ಅಂತ ಕಾಗೆ ಹಾರಿಸಿ, ವಿಮಾನ ನಿಲ್ದಾಣದ ಅಧಿಕಾರಿಗಳಿದೆ ಕರೆ ಹೋಗುವಂತೆ ಮಾಡಿದ್ದಾರೆ. ಈ ಕಾರಣದಿಂದ ವಿಮಾನ ಏಳು ಗಂಟೆ ತಡವಾಗಿ ಹೊರಟಿದೆ.[ಬೆಂಗಳೂರು: ಅಪ್ರಾಪ್ತ ಯುವತಿ ಮೇಲೆ ಇವೆಂಟ್ ಮ್ಯಾನೇಜರ್ ಅತ್ಯಾಚಾರ]
ಬೆಂಗಳೂರು ಬಿಟಿಎಂ ಲೇಔಟ್ ನ ಅರ್ಜುನ್- ನೇಹಾ ಗೋಪಿನಾಥ್ ಸುಳ್ಳು ಕರೆ ಮಾಡಿಸಿದವರು. ತಾವು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದೀವಿ ಎಂದು ಅಂಗಲಾಚಿದ ನಂತರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಬಿಡುಗಡೆ ಮಾಡಿದ್ದಾರೆ. "ಕೆಲ ದಿನಗಳ ನಂತರ ವಾಪಸ್ ಬರ್ತೀವಿ ಎಂದು ಮುಚ್ಚಳಿಕೆ ಬರೆದುಕೊಟ್ಟ ನಂತರ ಬಿಟ್ಟು ಕಳಿಸಿದ್ದೇವೆ" ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರೂ ತಮ್ಮ ಸ್ನೇಹಿತನೊಬ್ಬನಿಗೆ ಹೇಳಿ ಟರ್ಮಿನಲ್ ಮ್ಯಾನೇಜರ್ ಗೆ ಕರೆ ಮಾಡಿಸಿ, ಕೊಚ್ಚಿ ವಿಮಾನದಲ್ಲಿ ಬಾಂಬ್ ಇರುವುದಾಗಿ ಹೇಳುವಂತೆ ತಿಳಿಸಿದ್ದಾರೆ. ಅರ್ಜುನ್ ಹಾಗೂ ನೇಹಾ ಏರ್ ಏಷ್ಯಾ ವಿಮಾನದಲ್ಲಿ ರಾತ್ರಿ 8.45ಕ್ಕೆ ಬುಧವಾರ ರಾತ್ರಿ ಬೆಂಗಳೂರಿನಿಂದ ಕೊಚ್ಚಿಗೆ ಹೋಗಬೇಕಾಗಿತ್ತು.
ಅಲಪುಳದಲ್ಲಿ ಗುರುವಾರ ಅವರಿಬ್ಬರ ನಿಶ್ಚಿತಾರ್ಥವಿತ್ತು. ರಾತ್ರಿ 8 ಗಂಟೆಗೆ ಟ್ರಾಫಿಕ್ ನಲ್ಲಿ ಸಿಲುಕಿಕೊಂಡಿದ್ದರು. ಯಾವಾಗ ತಾವು ಸರಿಯಾದ ಸಮಯಕ್ಕೆ ವಿಮಾನ ನಿಲ್ದಾಣ ತಲುಪುವುದಿಲ್ಲ ಎಂದು ಗೊತ್ತಾಯಿತೋ ಅಗ ಹುಸಿ ಬಾಂಬ್ ಬೆದರಿಕೆಯ ಕರೆ ಮಾಡಿಸಿದ್ದಾರೆ ಎಂದು ಇನ್ ಸ್ಪೆಕ್ಟರ್ ತಿಳಿಸಿದ್ದಾರೆ.[ಸಿಡ್ನಿ ಟೆಕ್ಕಿ ಪ್ರಭಾ ಕೊಲೆ ಪ್ರಕರಣ: ಸಂಬಂಧಿಕರಿಂದಲೇ ಹತ್ಯೆ?]
8.35-8.40ರ ಮಧ್ಯೆ ಟರ್ಮಿನಲ್ ಮ್ಯಾನೇಜರ್ ಗೆ ಕರೆ ಮಾಡಿದ್ದ ವ್ಯಕ್ತಿ, ಕೊಚ್ಚಿ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ತಿಳಿಸಿದ್ದ. ತಕ್ಷಣವೇ ಬಾಂಬ್ ನಿಷ್ಕ್ರಿಯ ದಳದವರು ಬಂದು, ಪರಿಶೀಲನೆ ಮಾಡಿ, ಬಾಂಬ್ ಇಲ್ಲ ಎಂದು ಖಾತ್ರಿ ಪಡಿಸಿ, ವಿಮಾನ ಹೊರಡುವಷ್ಟರಲ್ಲಿ ಮಧ್ಯರಾತ್ರಿ 3 ಗಂಟೆ ಆಗಿತ್ತು.
ಬಾಂಬ್ ಹುಡೂಕುವ ವೇಳೆಯಲ್ಲಿ ಪೊಲೀಸರು ಕರೆ ಮಾಡಿದ ವ್ಯಕ್ತಿಯ ಮೂಲ ಪತ್ತೆ ಹಚ್ಚಲು ತೊಡಗಿದ್ದಾರೆ. ಅದು ಅಲಪುಳದಿಂದ ಬಂದಿರುವುದು ಗೊತ್ತಾಗಿದೆ. ಮತ್ತು ಇವರಿಬ್ಬರು ಅಲ್ಲಿಯವರೇ ಎಂದು ಗೊತ್ತಾಗಿದೆ. ತಾವು ಟ್ರಾಫಿಕ್ ನಲ್ಲಿ ಸಿಲುಕಿಕೊಂಡಿದ್ದೇವೆ. ಬರುವುದು ತಡವಾಗುತ್ತದೆ. ಸ್ವಲ್ಪ ಸಮಯ ಕಾಯಬಹುದಾ? ಎಂದು ಇವರಿಬ್ಬರು ಟರ್ಮಿನಲ್ ಮ್ಯಾನೇಜರ್ ಗೆ ಮನವಿ ಮಾಡಿದ್ದಾರೆ. ಆದ್ದರಿಂದ ಇಬ್ಬರನ್ನೂ ವಶಕ್ಕೆ ಪಡೆದು, ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಗೊತ್ತಾಗಿದೆ.