ಭಾರತದ ಜಿಡಿಪಿ ಇತಿಹಾಸದಲ್ಲೇ ಅತ್ಯಂತ ಕಡಿಮೆ ದಾಖಲಾಗಲಿದೆ: ನಾರಾಯಣ ಮೂರ್ತಿ
ಬೆಂಗಳೂರು, ಆಗಸ್ಟ್ 11: ದೇಶದ ಜಿಡಿಪಿ ಸ್ವಾತಂತ್ರ್ಯದ ಇತಿಹಾಸದಲ್ಲೇ ಕಾಣದ ಅತ್ಯಂತ ಕಡಿಮೆ ಅಂಶಕ್ಕೆ ಸಾಕ್ಷಿಯಾಗಲಿದೆ ಎಂದು ಇನ್ಫೋಸಿಸ್ ಸ್ಥಾಪಕ ಎನ್. ಆರ್ ನಾರಾಯಣಮೂರ್ತಿ ಹೇಳಿದ್ದಾರೆ.
ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್-ಟೆಕ್ನಾಲಜೀಸ್ ಇಂಡಿಯಾ ಡಿಜಿಟಲ್ ಕಾನ್ವರ್ಸೇಷನ್ಸ್ ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ನಾರಾಯಣ ಮೂರ್ತಿ ಕೊರೊನಾವೈರಸ್ ಜೊತೆಯಲ್ಲಿಯೇ ಬದುಕುವುದಕ್ಕೆ ಜನರನ್ನು ತಯಾರುಗೊಳಿಸಬೇಕು, ಆರ್ಥಿಕತೆಯನ್ನು ಹಳಿಗೆ ಮರಳಿ ತರಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
2020-21ರ ನೈಜ ಜಿಡಿಪಿ ಬೆಳವಣಿಗೆ ನಕಾರಾತ್ಮಕವಾಗಿರಲಿದೆ: ಆರ್ಬಿಐ
ದೇಶದಲ್ಲಿ ಲಾಕ್ಡೌನ್ ಹೇರಿದಾಗಲೇ ಕೊರೊನಾವೈರಸ್ ಹಾಗೂ ಆರ್ಥಿಕತೆ ಕುರಿತು ಮಾತನಾಡಿದ್ದ ನಾರಾಯಣಮೂರ್ತಿ ಇಡೀ ದೇಶದ ಜನತೆಯ ಸಂಪೂರ್ಣ ಪರೀಕ್ಷೆ ಮುಗಿಸಲು ಹಲವಾರು ವರ್ಷಗಳೇ ಬೇಕಾಗುತ್ತದೆ. ಕೊರೊನಾವೈರಸ್ ಜೊತೆಗೆ ಬದುಕುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದ್ದರು.
ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಪ್ರತಿ ಕ್ಷೇತ್ರವೂ ಸಹ ಸಂಪೂರ್ಣವಾಗಿ ಕೆಲಸ ಮಾಡುವಂತಹ ವ್ಯವಸ್ಥೆಯನ್ನು ನಿರ್ಮಾಣ ಮಾಡಬೇಕಿದೆ. ಭಾರತದ ಜಿಡಿಪಿ ಕನಿಷ್ಟ ಶೇ.5 ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಜಿಡಿಪಿ ಬೆಳವಣಿಗೆ ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲೇ ಕಡಿಮೆಯಾಗುವ ಭಯವಿದೆ ಎಂದು ನಾರಾಯಣ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.