''ರಾಜಕೀಯ ದ್ವೇಷದಿಂದ ಡಿಕೆಶಿ ಮನೆ ಮೇಲೆ ದಾಳಿ'': ಕೆಪಿಸಿಸಿ
ಬೆಂಗಳೂರು, ಅ.5: ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ ಸುರೇಶ್ ಅವರ ಮನೆ, ಕಚೇರಿ ಮೇಲೆ ಸೋಮವಾರ(ಅ.5) ಬೆಳಗ್ಗೆ ಸಿಬಿಐ ದಾಳಿ ನಡೆದಿದೆ. ರಾಜ್ಯದಲ್ಲಿ ಉಪ ಚುನಾವಣೆ ಘೋಷಣೆಯಾಗಿರುವಾಗ ನಡೆದಿರುವ ದಾಳಿ ರಾಜಕೀಯ ದ್ವೇಷದಿಂದ ಕೂಡಿದ್ದು, ಬಿಜೆಪಿಯ ಯಾವುದೇ ಕುತಂತ್ರಕ್ಕೆ ಕಾಂಗ್ರೆಸ್ ಬಗ್ಗುವುದಿಲ್ಲ, ಕುಗ್ಗುವುದಿಲ್ಲ ಎಂದು ಕರ್ನಾಟಕ ಕಾಂಗ್ರೆಸ್ ತಿರುಗೇಟು ನೀಡಿದೆ.
Recommended Video
ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ ಅವರ ಸದಾಶಿವನಗರ ನಿವಾಸ, ಶಿವಕುಮಾರ್ ಅವರ ಹುಟ್ಟೂರು ದೊಡ್ಡಾಲಹಳ್ಳಿ ಗ್ರಾಮದ ಮನೆಯ ಮೇಲೆ ಕೂಡಾ ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಆದರೆ ಯಾವ ಪ್ರಕರಣದ ವಿಷಯವಾಗಿ ದಾಳಿ ನಡೆದಿದೆ ಎಂಬುದರ ಮಾಹಿತಿಯೇ ಇನ್ನೂ ಹೊರ ಬಂದಿಲ್ಲ. ಕಾರಣವೇ ಇಲ್ಲದೇ ದಾಳಿ ಮಾಡಿ ಬೆದರಿಸುವ ತಂತ್ರ ಮಾಡಲಾಗಿದೆ. ಆದರೆ, ಇದೊಂದು ಷಡ್ಯಂತ್ರ ಇದಕ್ಕೆ ಕಾಂಗ್ರೆಸ್ ತಲೆ ಬಾಗಲ್ಲ ಎಂದು ಕೆಪಿಸಿಸಿ ಪ್ರತಿಕ್ರಿಯಿಸಿದೆ.
ಹೈಕೋರ್ಟ್ ಅನುಮತಿ ಇಲ್ಲದೆ ದಾಳಿ ನಡೆಸಲಾಗಿದೆ. ಪ್ರಕರಣ ನ್ಯಾಯಾಲಯದಲ್ಲಿರುವಾಗ ಈ ರೀತಿ ದಾಳಿ ಮಾಡಿರುವುದು ಸಂಪೂರ್ಣ ರಾಜಕೀಯ ದುರುದ್ದೇಶದಿಂದ ಕೂಡಿದೆ. ದಾಳಿ ನಡೆಸುವ ಬಗ್ಗೆ ರಾಜ್ಯ ಸರ್ಕಾರ ಅನುಮತಿ ನೀಡುವುದನ್ನು ಪ್ರಶ್ನಿಸಿ ಕೋರ್ಟಿಗೆ ಅರ್ಜಿ ಹಾಕಲಾಗಿದೆ. ದಾಳಿ ನಡೆಸದಂತೆ ತಡೆಯಾಜ್ಞೆಯಿದೆ. ಹಾಗಿದ್ದರೂ ಸಿಬಿಐ ದಾಳಿ ಮಾಡಿರುವುದು ಏಕೆ? ಎಂಬುದನ್ನು ಕೋರ್ಟ್ ನಲ್ಲಿ ಪ್ರಶ್ನಿಸುತ್ತೇವೆ ಎಂದು ಹಿರಿಯ ವಕೀಲ ಎ. ಪೊನ್ನಣ್ಣ ಪ್ರತಿಕ್ರಿಯಿಸಿದ್ದಾರೆ.