ಎಟಿಎಂನಲ್ಲಿ ಜ್ಯೋತಿ ಮೇಲೆ ಹಲ್ಲೆ ಮಾಡಿದ್ದ ವ್ಯಕ್ತಿಯ ಬಂಧನ
2013ರ ನವೆಂಬರ್ 19ರಂದು ಬೆಂಗಳೂರಿನ ಕಾರ್ಪೊರೇಷನ್ ಸರ್ಕಲ್ ನಲ್ಲಿ ಬೆಳಗ್ಗೆ ಏಳರ ಸುಮಾರಿಗೆ ನಡೆದಿದ್ದ ದಾಳಿ
ಬೆಂಗಳೂರು, ಫೆಬ್ರವರಿ 4: ಮೂರು ವರ್ಷಗಳ ಹಿಂದೆ, ನಗರದ ಕಾರ್ಪೊರೇಷನ್ ಸರ್ಕಲ್ ನಲ್ಲಿನ ಎಟಿಎಂನಲ್ಲಿ ಜ್ಯೋತಿ ಎಂಬ ಮಹಿಳೆಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹಣ ದೋಚಿ ಪರಾರಿಯಾಗಿದ್ದ ಆರೋಪಿ ಕೊನೆಗೂ ಪೊಲೀಸರಿಗೆ ಸಿಕ್ಕಿಬಿದಿದ್ದಾನೆ.
ಸುಳಿವಿನ ಮೇರೆಗೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿಯಲ್ಲಿ ಅಲ್ಲಿನ ಪೊಲೀಸರು ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಹೇಳಲಾಗಿದೆ.[ಎಟಿಎಂ ಹಲ್ಲೆ ಪ್ರಕರಣಕ್ಕೆ 3 ವರ್ಷ: ತನಿಖೆ ನೆನೆಗುದಿಗೆ]
ಬಂಧಿತನನ್ನು ಮಧುಕರ ರೆಡ್ಡಿಯೆಂದು ಪೊಲೀಸರು ತಿಳಿಸಿದ್ದಾರೆ. ಈತನೇ ಬೆಂಗಳೂರಿನಲ್ಲಿ 2013ರ ನವೆಂಬರ್ 19ರಂದು ಬೆಂಗಳೂರು ಕಾರ್ಪೊರೇಷನ್ ವೃತ್ತದಲ್ಲಿರುವ ಎಟಿಎಂನಲ್ಲಿ ಹಲ್ಲೆ ಮಾಡಿದ ವ್ಯಕ್ತಿಯೆಂದು ಹೇಳಲಾಗಿದೆ. ಆದರೆ, ಪೊಲೀಸರಿನ್ನೂ ಈ ಬಗ್ಗೆ ಖಚಿತ ಮಾಹಿತಿ ನೀಡಿಲ್ಲ.
ಈವರೆಗೆ ಬಂದಿರುವ ಮಾಹಿತಿಗಳ ಪ್ರಕಾರ, ಈತ ಈ ಹಿಂದೆ ಕೆಲವಾರು ಅಪರಾಧ ಪ್ರಕರಣಗಳಲ್ಲಿ ಆಂಧ್ರಪ್ರದೇಶದ ಕಡಪಾ ಜೈಲಿನಲ್ಲಿ ಬಂಧಿಯಾಗಿದ್ದ ಈತ ಕೆಲವಾರು ವರ್ಷಗಳ ಹಿಂದೆ ಅಲ್ಲಿಂದ ತಪ್ಪಿಸಿಕೊಂಡಿದ್ದ. ಆನಂತರವೇ ಆತ ಬೆಂಗಳೂರಿನಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ್ದು ಎನ್ನಲಾಗಿದೆ. ವಿಚಾರಣೆ ವೇಳೆ ಆತ ತಪ್ಪೊಪ್ಪಿಕೊಂಡಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಆದರೆ, ಆ ಬಗ್ಗೆ ಪೊಲೀಸರು ಅಧಿಕೃತ ನೀಡಬೇಕಿದೆಯಷ್ಟೆ.
ಇತ್ತೀಚೆಗೆ ಮದನಪಲ್ಲಿಯಲ್ಲಿ ಕಾಣಿಸಿಕೊಂಡಿದ್ದ ಈತ ಜನವರಿ 31ರಂದು ಅಲ್ಲಿನ ಪೊಲೀಸರ ಕಣ್ಣಿಗೆ ಬಿದ್ದಿದ್ದ. ತಕ್ಷಣ ಜಾಗರೂಕರಾಗಿದ್ದ ಪೊಲೀಸರು ಈತನ ಚಲನವಲನಗಳ ಮೇಲೆ ನಿಗಾ ವಹಿಸಿ ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆನ್ನಲಾಗಿದೆ.
ಪ್ರಕರಣ ನಡೆದಾಗನಿಂದ ಪೊಲೀಸರ ತೀವ್ರ ಶೋಧನೆಯ ಹೊರತಾಗಿಯೂ ಸಿಗದಿದ್ದ ಈ ಆರೋಪಿಯ ಬಗ್ಗೆ ಸುಳಿವು ಕೊಟ್ಟವರಿಗೆ 5 ಲಕ್ಷ ರು. ಬಹುಮಾನ ಘೋಷಿಸಲಾಗಿತ್ತು.