ಶಕ್ತಿದೇವತೆ ದ್ರೌಪದಿ ದೇವಿ ಕೊರೊನಾ ಓಡಿಸಿ 'ಕರಗ'ಕ್ಕೆ ದಾರಿ ಮಾಡಿಕೊಳ್ಳುತ್ತಾಳೆ
ಬೆಂಗಳೂರು, ಮಾರ್ಚ್ 24: ದೇಶ ಎಂತೆಂತಹ ಆಪತ್ತನ್ನು ಎದುರಿಸಿದರೂ, ಬೆಂಗಳೂರಿನ ಐತಿಹಾಸಿಕ ಕರಗ ಉತ್ಸವ ರದ್ದಾದ ಉದಾಹರಣೆಗಳಿಲ್ಲ.ಆದರೆ, ಇದೇ ಮೊದಲ ಬಾರಿಗೆ ಕರಗ ರದ್ದು ಮಾಡಿ ಮುಖ್ಯಮಂತ್ರಿ ಯಡಿಯೂರಪ್ಪನವರು ಆದೇಶ ಹೊರಡಿಸಿದ್ದಾರೆ.
"ಈ ವರ್ಷವೂ ಕರಗ ನಡೆಯುತ್ತದೆ. ಈ ಹಿಂದೆ ಪ್ಲೇಗ್, ಕಾಲರಾದಂತಹ ಮಾರಣಾಂತಿಕ ಕಾಯಿಲೆಗಳು ಬಂದಾಗಲೂ ಕರಗ ನಡೆದಿತ್ತು. ಈ ಬಾರಿಯೂ ಕರಗ ಉತ್ಸವ ನಡೆಯಲಿದೆ" ಎಂದು ಮಾರ್ಚ್ 12ರಂದು ನಗರದ ಮೇಯರ್ ಗೌತಮ್ ಕುಮಾರ್ ಹೇಳಿದ್ದರು.
ಕೊರೊನಾ ಭೀತಿ ನಡುವೆ ಮತ್ತೊಂದು ವೈರಸ್ಸಿಗೆ ವ್ಯಕ್ತಿ ಬಲಿ
ಆದರೆ, ಬದಲಾದ ಪರಿಸ್ಥಿತಿಯಲ್ಲಿ ಇಡೀ ರಾಜ್ಯವೇ ಲಾಕ್ ಡೌನ್ ಆಗಿರುವಾಗ, ಲಕ್ಷಾಂತರ ಜನ ಸೇರುವ ಕರಗ ಉತ್ಸವ ನಡೆಸುವುದು ಸರಿಯಲ್ಲ ಎನ್ನುವ ನಿರ್ಧಾರಕ್ಕೆ ಸರಕಾರ ಬಂದಿದೆ. ಆದರೂ, ಸರಕಾರ ಇದಕ್ಕೆ ಅವಕಾಶ ನೀಡಬಹುದು ಎನ್ನುವ ಆಶಾಭಾವನೆಯಲ್ಲಿದೆ ಧರ್ಮರಾಯ ದೇವಸ್ಥಾನದ ಆಡಳಿತ ಮಂಡಳಿ.
ಹನ್ನೊಂದು ದಿನಗಳ ಈ ಐತಿಹಾಸಿಕ ಬೆಂಗಳೂರು ಕರಗ ಮಾರ್ಚ್ 31ರಿಂದ ಆರಂಭವಾಗಬೇಕಿತ್ತು. ಒಂಬತ್ತನೇ ದಿನ ಹೂವಿನ ಕರಗ ನಡೆಯುವುದು ಪದ್ದತಿ. ಆದರೆ, ಸರಕಾರದ ನಿರ್ಧಾರದಿಂದ ಭಕ್ತರಿಗೆ ನಿರಾಸೆ ಉಂಟಾಗಿದೆ. ಶಕ್ತಿದೇವತೆ ದ್ರೌಪದಿ, ಕರಗಕ್ಕೆ ದಾರಿಮಾಡಿಕೊಡುತ್ತಾಳೆ ಎನ್ನುವ ನಂಬಿಕೆಯಲ್ಲಿದ್ದಾರೆ ಮಂಡಳಿ ಮತ್ತು ಭಕ್ತರು.
ಬೆಂಗಳೂರು ಕರಗಕ್ಕೆ ಕೊರೊನಾ ಭೀತಿ ಇಲ್ಲ: ಮೇಯರ್
ಪಾಲಿಕೆ - ದೇವಾಲಯ ಮಂಡಳಿ ಸಭೆ
ಒಂದು ತಿಂಗಳ ಹಿಂದಿನಿಂದ ಇಲ್ಲಿಯವರೆಗೆ ಪಾಲಿಕೆ ಮತ್ತು ಧರ್ಮರಾಯ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರ ನಡುವೆ ಹಲವು ಸುತ್ತಿನ ಸಭೆಗಳು ನಡೆದಿದ್ದವು. ಆದರೆ, ಕೊರೊನಾ ಮಹಾಮಾರಿ ಕಾಲಿಟ್ಟ ನಂತರ, ಆರೋಗ್ಯ ಕಾಪಾಡುವ ಮತ್ತು ಸ್ವಚ್ಚತೆಗೆ ಆದ್ಯತೆ ನೀಡಬೇಕೆಂದು ಮಾತುಕತೆಗಳು ನಡೆದಿದ್ದವು. ಕರಗ ಉತ್ಸವಕ್ಕೆ ಸಿದ್ದತೆಯನ್ನೂ ಮಾಡಿಕೊಂಡು ಬರಲಾಗಿತ್ತು.
ಮಾರ್ಚ್ 31ರಿಂದ ಆರಂಭವಾಗಿ ಏಪ್ರಿಲ್ 10ರವರೆಗೆ
ಮಾರ್ಚ್ 31ರಿಂದ ಆರಂಭವಾಗಿ ಏಪ್ರಿಲ್ 10ರವರೆಗೆ ಕರಗ ಉತ್ಸವಕ್ಕೆ ದಿನಾಂಕ ನಿಗದಿಯಾಗಿತ್ತು. ಏಪ್ರಿಲ್ 8ರಂದು ವಿಶ್ವವಿಖ್ಯಾತ ಹೂವಿನ ಕರಗ, ದ್ರೌಪದಿ ದೇವಿಯ ಮಹಾರಥೋತ್ಸವ ನಡೆಯಬೇಕಾಗಿತ್ತು. ವಹ್ನಿಕುಲ ಕ್ಷತ್ರಿಯ ಸಮುದಾಯ ಈ ಉತ್ಸವವನ್ನು ನಡೆಸುತ್ತದೆ.
ಬ್ರಿಟಿಷರ ಕಾಲದಿಂದಲೂ, ಕರ್ಪ್ಯೂ ಇದ್ದಾಗಲೂ ಈ ಉತ್ಸವ ನಡೆದಿದೆ
"ಯಾವ ಕಾಯಿಲೆ ಬಂದರೂ, ಬ್ರಿಟಿಷರ ಕಾಲದಿಂದಲೂ, ಕರ್ಪ್ಯೂ ಇದ್ದಾಗಲೂ ಈ ಉತ್ಸವ ನಡೆದಿದೆ. ಯಾವ ಅಡಚಣೆಯಿಲ್ಲದೆಯೇ ಕರಗ ಉತ್ಸವ ನಡೆಯಲಿದೆ ಎನ್ನುವ ವಿಶ್ವಾಸದಲ್ಲಿದ್ದೇವೆ. ದ್ರೌಪದಿ ದೇವಿ, ಮಹಾಮಾರಿ ಕೊರೊನ ಓಡಿಸಿ, ಕರಗ ಉತ್ಸವವಕ್ಕೆ ದಾರಿ ಮಾಡಿಕೊಡುತ್ತಾಳೆ ಎನ್ನುವ ನಂಬಿಕೆ ನಮಗಿದೆ" ಎಂದು ಧರ್ಮರಾಯ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಹೇಳಿದ್ದಾರೆ.
ಶಕ್ತಿದೇವತೆ ದ್ರೌಪದಿ ದೇವಿ ಕೊರೊನಾ ಓಡಿಸಿ 'ಕರಗ'ಕ್ಕೆ ದಾರಿ ಮಾಡಿಕೊಳ್ಳುತ್ತಾಳೆ
"ಏಪ್ರಿಲ್ ಎಂಟರಂದು ಕರಗ ಮೆರವಣಿಗೆ ಇರಲಿದೆ. ಅಷ್ಟೊತ್ತಿಗೆ ಕೊರೊನಾ ಮಹಾಮಾರಿ ನಿಯಂತ್ರಣಕ್ಕೆ ಬರಬಹುದು. ಕೊನೆಯ ಕ್ಷಣದವರೆಗೂ ಸರಕಾರದ ಆದೇಶಕ್ಕೆ ಕಾಯುತ್ತೇವೆ. ಒಂದು ವೇಳೆ ಅನುಮತಿ ಸಿಗದೇ ಇದ್ದಲ್ಲಿ ಒಳಾಂಗಣದಲ್ಲಿ ಉತ್ಸವ ನಡೆಸುತ್ತೇವೆ" ಎಂದು ದೇವಾಲಯದ ಅಧಿಕಾರಿಗಳು ಹೇಳಿದ್ದಾರೆ.