ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಕಾಮಗಾರಿ ಮತ್ತಷ್ಟು ವಿಳಂಬ
ಬೆಂಗಳೂರು, ಜೂನ್ 11: ಕೊರೊನಾ ಸೋಂಕು ಎನ್ನುವುದೂ ದೇಶದ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೂ ಅಡ್ಡಲಾಗಿ ನಿಂತಿದೆ.
ಹಾಗೆಯೇ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಕಾಮಗಾರಿ ಕೂಡ ನಿಧಾನಗತಿಯಲ್ಲಿ ಸಾಗುತ್ತಿದೆ. ಅಂದಾಜು 7,400 ಕೋಟಿ ರೂ. ವೆಚ್ಚದಲ್ಲಿ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, 9 ದೊಡ್ಡ ಸೇತುವೆಗಳು, 44 ಕಿರು ಸೇತುವೆಗಳು, ನಾಲ್ಕು ರಸ್ತೆ ಮೇಲ್ಸುತುವೆಯನ್ನು ಇದು ಒಳಗೊಂಡಿದೆ.
ಬೆಂಗಳೂರಿನಿಂದ ಮದ್ದೂರಿನ ನಿಡಘಟ್ಟದವರೆಗೂ (56.2 ಕಿ.ಮೀ) ಮತ್ತು ನಿಡಘಟ್ಟದಿಂದ ಮೈಸೂರಿನವರೆಗೂ (60 ಕಿ.ಮೀ) ಎರಡು ಹಂತಗಳಲ್ಲಿ ಯೋಜನೆಯನ್ನು ವಿಭಜಿಸಲಾಗಿದೆ.
ಬಿಡದಿ, ರಾಮನಗರ, ಚೆನ್ನಪಟ್ಟಣ, ಮದ್ದೂರು, ಮಂಡ್ಯ ಮತ್ತು ಶ್ರೀರಂಗಪಟ್ಟಣದಲ್ಲಿ ಬೈಪಾಸ್ ಕೂಡಾ ಇರಲಿದೆ. ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿಯನ್ನು ಹತ್ತು ಪಥದ ರಾಷ್ಟ್ರೀಯ ಹೆದ್ದಾರಿಯಾಗಿ (ಎನ್ ಹೆಚ್ -275) ವಿಸ್ತರಿಸುವುದಾಗಿ ಕೇಂದ್ರ ಭೂ ಸಾರಿಗೆ ಸಚಿವಾಲಯ 2014 ಮಾರ್ಚ್ ತಿಂಗಳಲ್ಲಿ ಪ್ರಕಟಿಸಿತ್ತು.
ಇದು ಬೆಂಗಳೂರಿನ ನೈಸ್ ರಸ್ತೆ ಪ್ರವೇಶದಿಂದ ಮೈಸೂರಿನ ರಿಂಗ್ ರೋಡ್ ಜಂಕ್ಷನ್ ವರೆಗೂ 117 ಕಿ.ಮೀ ದೂರದವರೆಗೂ ಸೇರಿಕೊಂಡಿದೆ. ಈ ಯೋಜನೆ 2018ರಲ್ಲಿ ಪ್ರಾರಂಭವಾಗಿ 30 ತಿಂಗಳೊಳಗೆ ಅಂದರೆ 2020ರಲ್ಲಿ ಮುಗಿಯಬೇಕಾಗಿತ್ತು.
ಆದರೆ, ಧೀರ್ಘ ವಿಳಂಬದ ನಂತರ 2019ರಲ್ಲಿ ಕೆಲಸವನ್ನು ಆರಂಭಿಸಲಾಯಿತು. ಭೂ ಸ್ವಾಧೀನ, ಸಲಕರಣೆಗಳ ಸ್ಥಳಾಂತರ, ಕಾನೂನು ಅಂಶಗಳು ಸೇರಿದಂತೆ ಅನೇಕ ಕಾರಣಗಳಿಂದಾಗಿ ಗಡುವನ್ನು 2021ಕ್ಕೆ ನಿಗದಿಪಡಿಸಲಾಯಿತು.
ಕಳೆದ ವರ್ಷ ಲಾಕ್ ಡೌನ್ ಹಾಗೂ ಉತ್ತರ ಭಾರತ ಮೂಲದ ಅನೇಕ ಕೆಲಸಗಾರರು ತಮ್ಮೂರಿಗೆ ಹೋಗಿದ್ದರಿಂದ ಕೆಲಸಕ್ಕೆ ತೀವ್ರ ಅಡ್ಡಿಯುಂಟಾಯಿತು. ಈ ವರ್ಷ ಕೂಡಾ ಕೆಲಸ ಮುಂದುವರೆದಿದ್ದರೂ, ಕೆಲಸಗಾರರಲ್ಲಿ ಸೋಂಕು ಹಿನ್ನೆಲೆಯಲ್ಲಿ ನಿಧಾನಗತಿಯಲ್ಲಿ ಕೆಲಸ ಸಾಗುತ್ತಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಕೆಲವು ಸಣ್ಣ ಪ್ರದೇಶಗಳನ್ನು ಹೊರತುಪಡಿಸಿ ಅಗತ್ಯವಿರುವ ಶೇ. 98 ರಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದೇವೆ.ಆದರೆ, ಕಾರ್ಮಿಕರ ಬಗ್ಗೆ ಕಾಳಜಿ ವಹಿಸಬೇಕಾಗಿದೆ ಎಂದರು.
ಮಾರ್ಚ್ 2022ರೊಳಗೆ ಮೊದಲ ಪ್ಯಾಕೇಜ್ ಪೂರ್ಣಗೊಳ್ಳಬೇಕಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಎನ್ ಹೆಚ್ ಎಐ ಪ್ರಾಜೆಕ್ಟ್ ಡವಲಪ್ ಮೆಂಟ್ ಅಫೀಸರ್, ಶ್ರೀಧರ್, ಕೆಲಸ ನಡೆಯುತ್ತಿದೆ ಆದರೆ, ನಿಧಾನಗತಿಯಲ್ಲಿ ಸಾಗುತ್ತಿದೆ. 8 ಸಾವಿರ ಕೆಲಸಗಾರರ ಪೈಕಿಯಲ್ಲಿ 200 ಮಂದಿಗೆ ಕೋವಿಡ್-19 ಸೋಂಕು ತಗುಲಿದೆ.
Recommended Video
ಕೆಲವರಿಗೆ ಮನೆಯಲ್ಲಿಯೇ ಐಸೋಲೇಷನ್ ಆಗಲು ಸಲಹೆ ನೀಡಲಾಗಿದೆ. ಮತ್ತೆ ಕೆಲವರು ತಮ್ಮೂರಿಗೆ ತೆರಳಿದ್ದಾರೆ ಎಂದರು.