ಕೊರೊನಾ ಭೀತಿಯಿದ್ದರೂ ಡಿಕೆಶಿ ಮನೆ ಮುಂದೆ ಜನಸಾಗರ!
ಬೆಂಗಳೂರು, ಮಾರ್ಚ್ 13: ಮಾರಣಾಂತಿಕ ಕೊರೊನಾ ವೈರಸ್ ಸೋಂಕಿನಿಂದ ಕರ್ನಾಟಕದಲ್ಲಿ ಆತಂಕ ಹೆಚ್ಚಾಗಿದ್ದು, ಇಂದಿನಿಂದ ಒಂದು ವಾರ ಕಾಲ ಸಿನಿಮಾ ಥಿಯೇಟರ್ ಗಳು, ಪಬ್, ಕ್ಲಬ್ ಗಳನ್ನು ಬಂದ್ ಮಾಡುವಂತೆ ಸೂಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರದ ಆದೇಶ ಅನ್ವಯ ಇನ್ನೊಂದು ವಾರ ಹೆಚ್ಚು ಜನ ಒಂದೆಡೆ ಸೇರುವ ಮದುವೆ ಸಮಾರಂಭಗಳಾಗಲಿ, ಮೇಳಗಳಾಗಲಿ, ಜಾತ್ರೆಗಳಾಗಲಿ ನಡೆಯುವಂತಿಲ್ಲ. ಹೀಗಿದ್ದರೂ, ಇಂದು ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ ಮುಂದೆ ಜನಸಾಗರ ಹರಿದು ಬಂದಿದೆ.
ಮಾರ್ಚ್ 14ರಿಂದ ಕರ್ನಾಟಕ ಬಂದ್: ಸಿಎಂ ಯಡಿಯೂರಪ್ಪ ಆದೇಶ
ಕೆಪಿಸಿಸಿ ನೂತನ ಅಧ್ಯಕ್ಷರಾಗಿ ನಿಯೋಜಿತಗೊಂಡಿರುವ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಲು, ಅವರ ಸದಾಶಿವನಗರದ ಮನೆ ಮುಂದೆ ಅಸಂಖ್ಯಾತ ಅಭಿಮಾನಿಗಳು ಜಮಾಯಿಸಿದ್ದರು.
ಕೊರೊನಾ ವೈರಸ್ ಸೋಂಕು ಹರಡದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜನಸಂದಣಿಯನ್ನು ಕಡಿಮೆ ಮಾಡಲು ಶಾಲಾ-ಕಾಲೇಜುಗಳಿಗೆ ರಜೆ ನೀಡಿದೆ. ಜನಜಂಗುಳಿ ಇರುವ ಮಾಲ್ ಗಳಿಗೆ ಬೀಗ ಹಾಕಲು ಸರ್ಕಾರ ಸೂಚಿಸಿದೆ. ಅಂಥದ್ರಲ್ಲಿ, ಇದ್ಯಾವುದಕ್ಕೂ ಕಿಮ್ಮತ್ತು ಕೊಡದೆ ಡಿ.ಕೆ.ಶಿವಕುಮಾರ್ ನಿವಾಸದ ಮುಂದೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.
ನೂತನ ನಿಯೋಜಿತ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸುವುದೇನೋ ಸರಿ. ಆದ್ರೆ, ಕೊರೊನಾ ಸೋಂಕಿನಿಂದ ತಲ್ಲಣ ಸೃಷ್ಟಿಯಾಗಿರುವ ಈ ಹೊತ್ತಲ್ಲಿ ಈ ರೀತಿಯ ಜನಜಂಗುಳಿ ಬೇಕೇ.? ಸಾಮಾಜಿಕ ಜವಾಬ್ದಾರಿ ಎಲ್ಲರಿಗೂ ಇರಬೇಕು ಅಲ್ಲವೇ.?