ಕರ್ನಾಟಕದಲ್ಲಿ ಕೊರೊನಾ ನಿಯಂತ್ರಿಸಲು ಜೈಲು ಕೈದಿಗಳು ನೆರವು
ಬೆಂಗಳೂರು, ಮಾರ್ಚ್ 23: ಕರ್ನಾಟಕದಲ್ಲಿ ಕೊರೊನಾ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಎಲ್ಲ ರೀತಿಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ರಾಜ್ಯದಲ್ಲಿ ಅನೇಕ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಗಳು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ.
ಇದೀಗ, ಕೊರೊನಾ ನಿಯಂತ್ರಿಸಲು ಜೈಲಿನಲ್ಲಿರುವ ಕೈದಿಗಳು ಕೂಡ ಸರ್ಕಾರಕ್ಕೆ ನೆರವಾಗಿದ್ದಾರೆ ಎಂಬ ವಿಷಯ ತಿಳಿದು ಬಂದಿದೆ. ಹೌದು, ಜನಸಾಮಾನ್ಯರಿಗೆ ಅಗತ್ಯವಾಗಿರುವ ಮಾಸ್ಕ್ ತಯಾರಿಸುವ ಕೆಲಸದಲ್ಲಿ ಕೈದಿಗಳು ತೊಡಗಿಕೊಂಡಿದ್ದು, ಇದುವರೆಗೂ 17 ಸಾವಿರ ಮಾಸ್ಕ್ ನೀಡಿದ್ದಾರೆ ಎಂದು ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
'ಕೈದಿಗಳು ನಿತ್ಯ 5 ಸಾವಿರ ಮಾಸ್ಕ್ ತಯಾರಿಸುತ್ತಿದ್ದಾರೆ. ಈಗಾಗಲೇ 17 ಸಾವಿರ ಮಾಸ್ಕ್ ನೀಡಿದ್ದಾರೆ. ಇನ್ನು ಒಂದು ವಾರ ಇಲಾಖೆಗೆ ಅಗತ್ಯವಿರುವ ಮಾಸ್ಕ್ ತಯಾರು ಮಾಡುತ್ತಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ.
ಜೈಲು ಕೈದಿಗಳ ಸುರಕ್ಷತೆ ಬಗ್ಗೆ ಕೂಡ ಸರ್ಕಾರ ಕ್ರಮ ಜರುಗಿಸಿದ್ದು, 'ಕೈದಿಗಳು ಜೈಲಿನ ಒಳಗೆ ಕ್ವಾರಂಟೈನ್ ಗೆ ಒಳಗಾಗುತ್ತಿದ್ದಾರೆ. ನೋಡಲು ಬರುವವರನ್ನ ತಡೆಯಿರಿ ಎಂದು ಹೇಳಲಾಗಿತ್ತು ಅದರಂತೆ ಎಲ್ಲರೂ ನಡೆದುಕೊಳ್ಳುತ್ತಿದ್ದಾರೆ. ಹೊಸ ಕೈದಿಗಳಿಗೆ ಪೂರ್ತಿ ಪ್ರಮಾಣದಲ್ಲಿ ಸ್ಕ್ರೀನಿಂಗ್ ಮಾಡಲಾಗುತ್ತೆ' ಎಂದು ಮಾಹಿತಿ ನೀಡಿದ್ದಾರೆ ಗೃಹ ಮಂತ್ರಿ.
'ಪೊಲೀಸ್ ಇಲಾಖೆಯಿಂದ ಎರಡು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ ಗೃಹ ಮಂತ್ರಿ 'ಕ್ವಾರಂಟೈನ್ ಗೆ ಓಳಗಾದವರನ್ನ ಸಂಪೂರ್ಣವಾಗಿ ಗುರುತಿಸೋ ಕೆಲಸ ಮುಂದುವರೆದಿದೆ. ಕೆಲವರು ಉಲ್ಲಂಘನೆ ಮಾಡುತ್ತಿದ್ದಾರೆ, ಮನೆ ಹೊರಗೆ, ಹೊರಗೆ ಓಡಾಡುತ್ತಿರುವವರ ಬಗ್ಗೆ ಒಂದು ನೋಟೀಸ್ ನೀಡಲು ಮುಂದಾಗಿದ್ದೇವೆ ಎಂದಿದ್ದಾರೆ. ಕ್ವಾರಂಟೈನ್ ನಲ್ಲಿ ಇರುವವರ ಮನೆ ಬಾಗಿಲಿಗೆ ನೋಟೀಸ್ ನೀಡಲಿದ್ದೇವೆ. ಕ್ವಾರಂಟೈನ್ ಎಲ್ಲಿಂದ ಎಲ್ಲಿಯ ವರೆಗೂ ಇರುತ್ತೆ ಅಂತ ಆ ನೋಟೀಸ್ ನಲ್ಲಿ ಇರುತ್ತೆ. ಇನ್ನುಳಿದಂತೆ 9 ಜಿಲ್ಲೆಗಳಲ್ಲಿ ಸೆಕ್ಷನ್ 144 ಮುಂದುವರೆಸಲಾಗುತ್ತೆ. 9 ಜಿಲ್ಲೆಗಳಲ್ಲಿ ವಾಣಿಜ್ಯ ವ್ಯವಹಾರ ಇಲ್ಲ ಕೇವಲ ನಿತ್ಯದ ಅವಶ್ಯಕತೆಗಳಿಗ ಮಾರಾಟಕ್ಕೆ ಮಾತ್ರ ಅವಕಾಶ' ಎಂದು ತಿಳಿಸಿದ್ದಾರೆ.