ಕೊವಿಡ್ 19 ಹಗರಣ: ಆರೋಗ್ಯ ಸಚಿವರ ರಾಜೀನಾಮೆಗೆ ಎಎಪಿ ಆಗ್ರಹ
ಬೆಂಗಳೂರು, ಜುಲೈ 23: ಆಮ್ ಆದ್ಮಿ ಪಕ್ಷವು ಪ್ರಾರಂಭದಿಂದಲೂ ಕೊರೊನಾ ನಿಯಂತ್ರಣದ ವಿಷಯದಲ್ಲಿ ಸರ್ಕಾರವು ಹಾಗೂ ಬಿಬಿಎಂಪಿ ಸಾಕಷ್ಟು ಭ್ರಷ್ಟಾಚಾರವನ್ನು ಎಸಗುತ್ತಿದೆ ಎಂಬ ಆರೋಪವನ್ನು ಮಾಡಿಕೊಂಡೆ ಬರುತ್ತಿದೆ.
Recommended Video
ಇಂತಹ ಸಂದಿಗ್ಧ ಸಮಯದಲ್ಲಿ ರಾಜ್ಯ ಸರ್ಕಾರವು ವೈದ್ಯಕೀಯ ಉಪಕರಣಗಳು ಹಾಗೂ ರೋಗ ನಿಯಂತ್ರಣ ಸಾಮಗ್ರಿಗಳ ಖರೀದಿಯಲ್ಲಿ 2000 ಕೋಟಿಗಳಿಗೂ ಅಧಿಕ ಭ್ರಷ್ಟಾಚಾರವನ್ನು ಎಸಗಿರುವ ಆರೋಪವನ್ನು ರಾಜ್ಯದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ದಾಖಲೆಗಳ ಸಮೇತ ಬಿಡುಗಡೆ ಮಾಡಿದ್ದಾರೆ.
ಕೊವಿಡ್ 19 ಹಗರಣ: ಉತ್ತರ ಕೊಡಿ ಬಿಜೆಪಿ ಟ್ವಿಟ್ಟರಲ್ಲಿ ಟ್ರೆಂಡಿಂಗ್
ಕಳಪೆ ಪಿಪಿಇ ಕಿಟ್, ವೆಂಟಿಲೇಟರ್ ಗಳು ,ಮಾಸ್ಕ್ , ಸ್ಯಾನಿಟೈಸರ್, ಪಲ್ಸ್ ಆಕ್ಸಿ ಮೀಟರ್ ಗಳು ಸೇರಿದಂತೆ ಹಲವಾರು ಸಾಮಗ್ರಿಗಳ ಖರೀದಿ ವಿಚಾರದಲ್ಲಿ ದುಪ್ಪಟ್ಟು ಹಾಗೂ ಮೂರು ಪಟ್ಟು ಹೆಚ್ಚಿನ ಬೆಲೆಯನ್ನು ನೀಡಿ ಅವ್ಯವಹಾರವನ್ನು ಎಸಗಿರುವುದು ಆರೋಗ್ಯ ಮಂತ್ರಿಗಳ ಮಾತಿನಲ್ಲೇ ಕೇಳಿ ಬರುತ್ತಿದೆ.
ಪೂರೈಕೆದಾರರು ಹೆಚ್ಚಿನ ಬೆಲೆಯನ್ನು ಬೇಡಿಕೆ ಇಟ್ಟಿದ್ದರಿಂದ ಕೊಂಡುಕೊಳ್ಳುವ ಅನಿವಾರ್ಯತೆ ಬಂದಿದೆ ಎಂಬ ಅಸಹಾಯಕ ಉತ್ತರವನ್ನು ಆರೋಗ್ಯ ಮಂತ್ರಿಗಳಾಗಿ ಶ್ರೀರಾಮುಲು ನೀಡುತ್ತಿರುವುದು ಹಾಸ್ಯಾಸ್ಪದವೆನಿಸುತ್ತದೆ.
ಸರ್ಕಾರವು ಹಾಗೂ ಅಧಿಕಾರಿಗಳು ನೇರವಾಗಿ ಪೂರೈಕೆದಾರರೊಂದಿಗೆ ಅನೈತಿಕವಾಗಿ ಕೈಜೋಡಿಸಿ ಸಾವಿರಾರು ಕೋಟಿ ರೂ.ಗಳನ್ನು ಇಂತಹ ಮಹಾದುರಂತದ ಸಮಯದಲ್ಲಿ ಲಪಟಾಯಿಸಿರುವುದು ಕಂಡುಬರುತ್ತದೆ.
ಬಿಜೆಪಿ ಸರ್ಕಾರದಿಂದ ಭ್ರಷ್ಟಾಚಾರ: ಹೇಗಿದೆ ಸಿದ್ದರಾಮಯ್ಯ ಲೆಕ್ಕಾಚಾರ?
ಇಂತಹ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಜನತೆಯ ಆರೋಗ್ಯ ದೃಷ್ಟಿಗಾಗಿ ಟೆಂಡರ್ ಪ್ರಕ್ರಿಯೆಗಳಲ್ಲಿ ಪಾರದರ್ಶಕ ಕಾಯಿದೆಯನ್ನು ತೆಗೆದು ಹಾಕುವ ಮಹತ್ತರ ಉದ್ದೇಶವನ್ನೇ ದುರ್ಬಳಕೆ ಮಾಡಿಕೊಂಡು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ಅಮಾನವೀಯವಾದ ಅಮಾನುಷವಾದ ಹಣ ಮಾಡುವ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿರುವುದು ತೀರಾ ಕಳವಳಕಾರಿ.
ಈ ಕೂಡಲೇ ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜೀನಾಮೆಯನ್ನು ನೀಡಿ ಉಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಯನ್ನು ಕೈಗೊಳ್ಳಬೇಕೆಂದು ಆಮ್ ಆದ್ಮಿ ಪಕ್ಷವು ಒತ್ತಾಯಿಸುತ್ತದೆ.
ಈ ಬಗ್ಗೆ ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರಲ್ಲಿ ದೂರನ್ನು ಸಹ ನೀಡಲಾಗುವುದು ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಮಾಧ್ಯಮ ಸಂಚಾಲಕರಾದ ಜಗದೀಶ್ ವಿ. ಸದಂ ಹೇಳಿದ್ದಾರೆ.