ರಸ್ತೆಯಲ್ಲಿ ಕುಸಿದು ಬಿದ್ದು ಕೊರೊನಾ ಸೋಂಕಿತ ಸಾವು
ಬೆಂಗಳೂರು, ಜುಲೈ 3: ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಕೊರೊನಾ ಸೋಂಕಿತ ವ್ಯಕ್ತಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ದಕ್ಷಿಣ ಬೆಂಗಳೂರಿನಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿಗೆ ಕೊವಿಡ್ ಸೋಂಕು ತಗುಲಿತ್ತು. ಹೀಗಾಗಿ, ಆತನ ಪತ್ನಿ ಆಂಬುಲೆನ್ಸ್ಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಆದರೆ, ವಿಷಯ ತಿಳಿದ ಆಂಬುಲೆನ್ಸ್ ಮೂರು ಗಂಟೆಯ ಬಳಿಕ ಸ್ಥಳಕ್ಕೆ ತಲುಪಿದೆ ಎಂದು ತಿಳಿದು ಬಂದಿದೆ.
ರೋಗಿಗೆ ಚಿಕಿತ್ಸೆ ನಿರಾಕರಿಸಿದ 18 ಆಸ್ಪತ್ರೆಗಳಿಗೆ ಶೋಕಾಸ್ ನೋಟಿಸ್
ಆಂಬುಲೆನ್ಸ್ ತಡವಾಗಿ ಬಂದ ಕುರಿತು ಬೆಂಗಳೂರು ಮಹಾನಗರ ಪಾಲಿಕೆ ಪ್ರತಿಕ್ರಿಯೆ ನೀಡಿದ್ದು, ಸಂಹವನದ ಸಮಸ್ಯೆಯಿಂದ ತಡವಾಗಿದೆ ಎಂದು ಹೇಳಿದ್ದಾರೆ. ಮೃತ ವ್ಯಕ್ತಿಯ ಪತ್ನಿ ತಮ್ಮ ಮನೆಯ ಪಕ್ಕದ ಸ್ಥಳವೊಂದರ ವಿಳಾಸ ನೀಡಿದ್ದರು. ಮನೆಯ ವಿಳಾಸ ನೀಡಿದರೆ ನೆರಹೊರೆಯವರು ಆತಂಕಕ್ಕೆ ಒಳಗಾಗುತ್ತಾರೆ ಎಂಬ ಆಲೋಚನೆ ಮಾಡಿದ್ದರು ಎಂದು ಹೇಳಿದ್ದಾರೆ.
ಒಂದು ವೇಳೆ ಆಂಬುಲೆನ್ಸ್ ಕಡೆಯಿಂದ ತಪ್ಪಾಗಿದ್ದರೆ ಖಂಡಿತವಾಗಿಯೂ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ಇತ್ತೀಚಿಗಷ್ಟೆ ಬೆಂಗಳೂರಿನಲ್ಲಿ ಸೋಂಕಿತರ ಲಕ್ಷಣ ಹೊಂದಿದ್ದ ವ್ಯಕ್ತಿಯೊಬ್ಬರಿಗೆ ಸುಮಾರು 18 ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಣೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ವ್ಯಕ್ತಿಯೂ ಸಾವನ್ನಪ್ಪಿದ್ದರು. ಬಳಿಕ ರಾಜ್ಯ ಸರ್ಕಾರ 18 ಆಸ್ಪತ್ರೆಗಳಿಗೂ ಶೋಕಾಸ್ ನೋಟಿಸ್ ನೀಡಿತ್ತು.
ಶುಕ್ರವಾರ ರಾಜ್ಯ ಸರ್ಕಾರ 73 ಖಾಸಗಿ ಆಸ್ಪತ್ರೆಗಳ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಈ ಆಸ್ಪತ್ರೆಗಳಲ್ಲಿ ಕೊವಿಡ 19 ರೋಗಿಗಳಿಗೆ 50 ಶೇಕಡಾ ಹಾಸಿಗೆಗಳನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೊರೊನಾ ಪರೀಕ್ಷೆಯ ವರದಿ ಇಲ್ಲದಿದ್ದರೂ ತೀವ್ರ ತೊಂದರೆ ಅನುಭವಿಸುವ ರೋಗಿಗಳಿಗೆ ಯಾವುದೇ ಸಂಸ್ಥೆಯಲ್ಲಿ ಪ್ರವೇಶ ನಿರಾಕರಿಸಲಾಗುವುದಿಲ್ಲ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.