ಕ್ಷೇತ್ರದ ಜೊತೆ ಹುಟ್ಟೂರ ಪ್ರೀತಿ ಮೆರೆದ ಭೈರತಿ ಸುರೇಶ್: ಕೊರೊನಾಗಾಗಿ ಕೋಟಿ ಖರ್ಚು
ಬೆಂಗಳೂರು, ಏಪ್ರಿಲ್ 9: ಕೊರೊನಾ ವೈರಸ್ ಅನ್ನು ತಡೆಗಟ್ಟುವ ಸಲುವಾಗಿ ಲಾಕ್ ಡೌನ್ ಘೋಷಣೆಯಾದ್ಮೇಲೆ, ಜನ ಪಾಡು ಅತಂತ್ರವಾಗಿರುವುದು ನಿಜ.
ಅಭಿವೃದ್ಧಿ ವಿಚಾರಗಳ ಸಲುವಾಗಿ 'ನಮ್ಮ ಜನಪ್ರತಿನಿಧಿಗಳನ್ನು ಹುಡುಕಿ ಕೊಡಿ' ಅಂತ ಗೊಗರೆಯುವ ಕಾಲವೊಂದಿತ್ತು. ಆದರೆ, ಅದ್ಯಾವಾಗ ಕೊರೊನಾ ಕಾಲಿಟ್ಟಿತ್ತೋ, ಜನರ ಸಂಕಷ್ಟಗಳಿಗೆ ಜನಪ್ರತಿನಿಧಿಗಳು ಸ್ಪಂದಿಸಲು ಶುರು ಮಾಡಿದರು.
ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ನಿಂತ ಶಾಸಕರ ತಾಯಿ
ಮಹಾಮಾರಿ ಕೊರೊನಾದಿಂದ ತಮ್ಮ ತಮ್ಮ ಕ್ಷೇತ್ರದ ಜನರನ್ನು ಕಾಪಾಡಲು ಜನಪ್ರತಿನಿಧಿಗಳು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಕೆಲವರು ಶಾಸಕರ ನಿಧಿ, ಸಂಸದರ ನಿಧಿಗೆ ದೇಣಿಗೆ ನೀಡಿ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ಆರ್ಥಿಕ ಕ್ರೂಡೀಕರಣವನ್ನು ನಡೆಸುತ್ತಿದ್ದಾರೆ.
ಆದರೆ, ಇವರೆಲ್ಲರಿಗಿಂತ ಭಿನ್ನವಾಗಿ ಜನಸೇವೆಗೆ ನಿಂತು ಶಹಬ್ಬಾಸ್ ಎನಿಸಿಕೊಂಡವರು ಹೆಬ್ಬಾಳ ಶಾಸಕ ಭೈರತಿ ಸುರೇಶ್. ತಮ್ಮ ಕ್ಷೇತ್ರದ ಜೊತೆಗೆ ಹುಟ್ಟೂರು ಭೈರತಿಯಲ್ಲೂ ಕೊರೊನಾ ಸೃಷ್ಟಿಸಿರುವ ಸಂಕಷ್ಟದಿಂದ ಬಳಲುತ್ತಿರುವವರಿಗೆ ಭೈರತಿ ಸುರೇಶ್ ಸಹಾಯ ಹಸ್ತ ಚಾಚಿದ್ದಾರೆ.
ಇತರ ಶಾಸಕರಂತೆ ತಾವು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಶಾಸಕರ ವೇತನವನ್ನು ದೇಣಿಗೆ ನೀಡಿದ್ದೂ ಅಲ್ಲದೆ, ಕ್ಷೇತ್ರದ ಖರ್ಚಿಗಾಗಿ ಸ್ವಂತ ಜೇಬಿನಿಂದ ಒಂದು ಕೋಟಿಗೂ ಹೆಚ್ಚು ಹಣವನ್ನು ವ್ಯಯಿಸಿ ಸಹಾಯ ಕಾರ್ಯಗಳನ್ನು ಮಾಡಿದ್ದಾರೆ.
ತಮ್ಮ ಮತ ಕ್ಷೇತ್ರವಾದ ಹೆಬ್ಬಾಳದಲ್ಲಿ ದಿನನಿತ್ಯ ಸಾವಿರಾರು ಜನರಿಗೆ ಊಟ, ಬಡ-ಬಗ್ಗರಿಗೆ ರೇಷನ್ ಪೂರೈಕೆ, ನಾಗರೀಕರಿಗೆ ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್ ಸೇರಿದಂತೆ ಸಂಕಷ್ಟದ ಸಮಯದಲ್ಲಿ ಅವಶ್ಯಕತೆಗೆ ಬರುವ ಸಾಮಾಗ್ರಿಗಳನ್ನು ನೀಡುತ್ತಿದ್ದಾರೆ. ಇದೇ ಕಾರ್ಯವನ್ನು ಹುಟ್ಟೂರು ಭೈರತಿಯಲ್ಲೂ ಕೈಗೊಂಡಿದ್ದಾರೆ.
ಒನ್ ಇಂಡಿಯಾ ಜೊತೆಗೆ ಮಾತನಾಡಿದ ಭೈರತಿ ಸುರೇಶ್, ''ಸಂಕಷ್ಟದ ಸಮಯದಲ್ಲಿ ಜನರ ಜೊತೆ ನಿಲ್ಲುವುದು ನನ್ನ ಕರ್ತವ್ಯ. ಇದರಲ್ಲಿ ಯಾವುದೇ ರಾಜಕೀಯ ಲಾಭದ ಲೆಕ್ಕಚಾರವಿಲ್ಲ. ಮನುಷ್ಯನಾಗಿ ನನ್ನ ಧರ್ಮವನ್ನು ಪಾಲನೆ ಮಾಡುತ್ತಿದ್ದೇನೆ. ಅಗತ್ಯವಿದ್ದರೆ ನನ್ನ ಕ್ಷೇತ್ರಕ್ಕಾಗಿ ಇನ್ನಷ್ಟು ಖರ್ಚು ಮಾಡಲು ನಾನು ಸಿದ್ಧ'' ಎಂದು ಹೇಳಿಕೊಂಡರು.
ಶಾಸಕರ ನಿಧಿಗೆ ದೇಣಿಗೆ ಕೊಟ್ಟು ಕೈತೊಳೆದುಕೊಳ್ಳುತ್ತಿರುವ ಹಲವು ಶಾಸಕರ ಮಧ್ಯೆ ಭೈರತಿ ಸುರೇಶ್ ವಿಭಿನ್ನವಾಗಿ ನಿಂತಿದ್ದಾರೆ. ಸ್ವಂತ ದುಡ್ಡಿನಿಂದ ಕ್ಷೇತ್ರ ಮತ್ತು ಹುಟ್ಟೂರಿನಲ್ಲಿ ಜನರ ಸೇವೆ ಮಾಡಿ ಇತರರಿಗೂ ಮಾದರಿಯಾಗಿದ್ದಾರೆ.