ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ನಿಂತ ಶಾಸಕರ ತಾಯಿ
ಬೆಂಗಳೂರು, ಏಪ್ರಿಲ್ 9: ಕೋವಿಡ್-19 ತಡೆಗಟ್ಟುವ ಸಲುವಾಗಿ ಘೋಷಿಸಿರುವ ಲಾಕ್ ಡೌನ್ ನಿಂದಾಗಿ ಹಲವು ಸಂಕಷ್ಟಗಳು ಎದುರಾಗಿವೆ. ಲಾಕ್ ಡೌನ್ ತೀವ್ರಗೊಳಿಸಿರುವ ಹಿನ್ನಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಅಂಗಡಿಗಳಿಗೆ ಹೋದರೆ, ದುಪ್ಪಟ್ಟು ಬೆಲೆ ನೀಡಿ ಅಗತ್ಯ ವಸ್ತುಗಳನ್ನು ಖರೀದಿ ಮಾಡುವ ಪರಿಸ್ಥಿತಿ ಬಂದೆರಗಿದೆ. ಈ ಬವಣೆಯೊಳಗೆ ಸಿಲುಕಿ ನಲುಗುತ್ತಿರುವ ದಿನಗೂಲಿ ನೌಕರರ ಪಾಡಂತೂ ಹೇಳತೀರದು. ಇಂಥವರ ಕಷ್ಟಕ್ಕೆ ಹಲವರು ಸಹಾಯ ಹಸ್ತ ಚಾಚಿ, ಮಾನವೀಯತೆ ಮೆರೆಯುತ್ತಿದ್ದಾರೆ.
ಕೋವಿಡ್-19: 50 ಲಕ್ಷ ದೇಣಿಗೆ ನೀಡಿದ ಪುನೀತ್ ರಾಜ್ ಕುಮಾರ್
ಬೆಂಗಳೂರಿನ ಮಹದೇವಪುರ ಕ್ಷೇತ್ರ ವ್ಯಾಪ್ತಿಯಲ್ಲೂ ಸಂಕಷ್ಟದಲ್ಲಿದ್ದ ಬಡಜನರಿಗೆ ಸಹಾಯ ಮಾಡುವ ಮೂಲಕ ಶಾಸಕರ ತಾಯಿಯೊಬ್ಬರು ಇತರರಿಗೆ ಮಾದರಿ ಆಗಿದ್ದಾರೆ.
ಹೆಬ್ಬಾಳ ಶಾಸಕ ಭೈರತಿ ಸುರೇಶ್ ಅವರ ತಾಯಿ ಸುಶೀಲಮ್ಮ ತಮ್ಮೂರು ಭೈರತಿ ಮತ್ತು ಸುತ್ತಮುತ್ತಲಿನ ನೂರಾರು ಬಡ ಕುಟುಂಬಗಳಿಗೆ ಹಸಿವು ನೀಗಿಸಲು ಮುಂದಾಗಿದ್ದಾರೆ.
ಅಗತ್ಯ ಆಹಾರ ಪದಾರ್ಥಗಳ ಕಿಟ್ ಖರೀದಿಗಾಗಿ ಹತ್ತು ಲಕ್ಷ ರೂಪಾಯಿಗಳ ದೇಣಿಗೆಯನ್ನ ತಮ್ಮ ಸ್ವಂತ ಖಾತೆಯಿಂದ ವಿನಿಯೋಗಿಸಿದ್ದಾರೆ. ಗ್ರಾಮದಲ್ಲಿ ಯಾರೂ ಕಷ್ಟಕಾಲದಲ್ಲಿ ಹಸಿವಿನಿಂದ ಒದ್ದಾಡಬಾರದೆಂಬುದು ಅವರ ಕಳಕಳಿ.
ಒಂದುಕಡೆ ಶಾಸಕ ಭೈರತಿ ಸುರೇಶ್ ಕೊರೊನಾ ಸಂಕಷ್ಟ ಪೀಡಿತರಿಗಾಗಿ ತಮ್ಮ ಶಾಸಕರ ಸಂಬಳವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದಾರೆ. ಜೊತೆಗೆ ತಮ್ಮ ಸ್ವಂತ ಖರ್ಚಿನಿಂದ ತಮ್ಮ ಕ್ಷೇತ್ರದಲ್ಲಿ ಜನುಪಯೋಗಿ ಕೆಲಸಗಳನ್ನು ಮಾಡುತ್ತಿದ್ದಾರೆ.
ಇನ್ನೊಂದೆಡೆ ಅವರ ತಾಯಿ ಸುಶೀಲಮ್ಮ ಕೂಡ ತಮ್ಮ ಸ್ವಂತ ದುಡ್ಡನ್ನು ದೇಣಿಗೆ ನೀಡುವ ಮೂಲಕ ಕಷ್ಟಕಾಲದಲ್ಲಿ ಜನಪ್ರತಿನಿಧಿಗಳು ಮತ್ತವರ ಕುಟುಂಬ ಸಮಾಜದೊಂದಿಗೆ ಹೇಗೆ ನಿಲ್ಲಬೇಕೆಂಬುದನ್ನ ತೋರಿಸಿಕೊಟ್ಟಿದ್ದಾರೆ.