ಅದ್ಯಮ ಚೇತನದಿಂದ ಸಾವಿರಾರು ಜನರ ಮನೆ ಮನೆಗೆ ಊಟ
ಬೆಂಗಳೂರು ಮಾರ್ಚ್ 30: ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಪರಿಣಾಮದಿಂದ ತೀವ್ರ ತೊಂದರೆಗೆ ಈಡಾಗಿರುವ ದಿನಗೂಲಿ ನೌಕರರು, ಅಶಕ್ತರು ಹಾಗೂ ವಯಸ್ಸಾದವರ ಕುಟುಂಬದವರ ಸಹಾಯಕ್ಕೆ ಅದಮ್ಯ ಚೇತನ ಸಂಸ್ಥೆ ಮುಂದಾಗಿದೆ. ಸೋಮವಾರದಿಂದ ಈಸಿ ಟು ಕುಕ್ ಉಪ್ಪಿಟ್ಟು ಮತ್ತು ಕಿಚಡಿ ಮಿಕ್ಸ್ ವಿತರಣೆ ಆರಂಭವಾಗಿದೆ.
ಕಾರ್ಮಿಕ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಸಾವಿರಾರು ಜನರ ಮನೆ ಮನೆಗೆ ಊಟ ತಲುಪಿಸುವ ಕಾರ್ಯ ಹಾಗೂ ಅದಮ್ಯ ಚೇತನ ಅಡುಗೆ ಮನೆಯು ಮತ್ತೆ ಕಾರ್ಯಾರಂಭ ಮಾಡಲಿದೆ ಎಂದು ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತಕುಮಾರ್ ಅವರು ಹೇಳಿದ್ದಾರೆ.
ಮೈಕ್ರೋ ಪ್ಲಾಸ್ಟಿಕ್ ವಿರುದ್ಧ ಸಮರ ಸಾರಿದ ತೇಜಸ್ವಿನಿ ಅನಂತಕುಮಾರ್
ಅಲ್ಲದೆ, ಆರ್ ಎಸ್ ಎಸ್ ಸಹಯೋಗದಲ್ಲಿ ಜನರಿಗೆ ಅಗತ್ಯವಿರುವ ದಿನನಿತ್ಯದ ಸಾಮಾಗ್ರಿಗಳನ್ನು ತಲುಪಿಸುವ ಮಹತ್ ಕಾರ್ಯದಲ್ಲೂ ಅದಮ್ಯ ಚೇತನ ಕೈಜೋಡಿಸಿರುವುದು ಬಹಳ ಸಂತಸದ ವಿಷಯವಾಗಿದೆ. ನಿನ್ನೆಯಿಂದ ಅದಮ್ಯ ಚೇತನ ಆವರಣದಲ್ಲಿ ಗ್ರೋಸರಿ ಪ್ಯಾಕೇಟ್ಗಳ ಪ್ಯಾಕೇಜಿಂಗ್ ಪ್ರಾರಂಭವಾಗಿದ್ದು, ಇದಕ್ಕೆ ಬೇಕಾಗಿರುವ ಸಾಮಗ್ರಿಗಳನ್ನು ಆರ್ ಎಸ್ ಎಸ್ ಸಂಘಟನೆಯು ಒದಗಿಸಿದೆ ಎಂದು ಹೇಳಿದರು.
ಊಟ ತಲುಪಿಸುವ ಯೋಜನೆ
ದಿನಗೂಲಿ ನೌಕರರು, ಅಶಕ್ತರು ಹಾಗೂ ವಯಸ್ಸಾದವರ ಜೊತೆಯಲ್ಲಿಯೇ ಅಗತ್ಯವಿರುವ ಕುಟುಂಬಗಳಿಗೆ ಸೋಮವಾರದಿಂದ ಸಾವಿರಾರು ಜನರಿಗೆ ಊಟ ತಲುಪಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಅದಮ್ಯ ಚೇತನ ಅಡುಗೆ ಮನೆಯನ್ನು ಕೇಂದ್ರೀಕೃತ ಅಡುಗೆ ಮನೆಯಾಗಿ ಗುರುತಿಸಲಾಗಿದ್ದು, ರಾಜ್ಯ ಸರಕಾರದ ಕಾರ್ಮಿಕ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳು ಈ ಕಾರ್ಯಕ್ಕೆ ಕೈಜೋಡಿಸಿವೆ.
ಮತ್ತೆ ಆರಂಭವಾದ ಅದಮ್ಯ ಚೇತನ ಅಡುಗೆ ಮನೆ
ಕೊರೊನಾ ಕರ್ಫ್ಯೂ ಹಿನ್ನಲೆಯಲ್ಲಿ ಸ್ಥಗಿತಗೊಂಡಿದ್ದ ಅದಮ್ಯ ಅಡುಗೆ ಮನೆ ಮತ್ತೆ ಸೋಮವಾರದಿಂದ ತನ್ನ ಕಾರ್ಯ ಪ್ರಾರಂಭಿಸಲಿದ್ದು ಆಯಾ ದಿನದ ಅಗತ್ಯಕ್ಕೆ ತಕ್ಕಂತಹ ಸಂಖ್ಯೆಯಲ್ಲಿ ಅಡುಗೆಯನ್ನು ತಯಾರಿಸಿ ಉಚಿತವಾಗಿ ಹಂಚುವ ಕಾರ್ಯಕ್ಕೆ ಮುಂದಾಗಲಿದೆ ಎಂದು ಅವರು ತಿಳಿಸಿದರು.
ಇದೇ ವೇಳೆ ಅದಮ್ಯ ಚೇತನ ಸಂಸ್ಥೆಯ ಎಲ್ಲಾ ನೌಕರರಿಗೂ ಗೌರವಧನದಲ್ಲಿ ಯಾವುದೇ ಕಡಿತವನ್ನು ಮಾಡದೆ, ಪೂರ್ತಿ ಗೌರವಧವನ್ನು ನೀಡುವ ನಿರ್ಧಾರವನ್ನು ಕೈಗೊಂಡಿದೆ ಎಂದು ಹೇಳಿದರು.
ಕೆಲವೇ ನಿಮಿಷಗಳಲ್ಲಿ ಅಡುಗೆ ತಯಾರಿಸಿ
ಈಸಿ ಟು ಕುಕ್ ಉಪ್ಪಿಟ್ಟು ಹಾಗೂ ಕಿಚಡಿ ಮಿಕ್ಸ್: ಈ ಮಿಕ್ಸ್ ಪ್ಯಾಕೇಟ್ ನ್ನು ಬಳಸಿ ಕೆಲವೇ ನಿಮಿಷಗಳಲ್ಲಿ ಅಡುಗೆ ತಯಾರಿಸಿಕೊಳ್ಳಬಹುದಾಗಿದೆ. ಈ ಮಿಕ್ಸ್ ನಲ್ಲಿ ಎಣ್ಣೆ, ರವೆ, ದಾಲ್ ಸೇರಿದಂತೆ ಅಗತ್ಯವಿರುವ ಎಲ್ಲಾ ಸಾಮಗ್ರಿಗಳು ಒಳಗೊಂಡಿರುತ್ತವೆ. ಈ ಮಿಕ್ಸ್ಗೆ ನೀರನ್ನು ಬೆರೆಸಿ ಬೇಯಿಸಿ ತಿನ್ನಬಹುದಾಗಿದೆ. ಅಗತ್ಯವಿರುವವರು ಸುಲಭವಾಗಿ ಅಹಾರ ತಯಾರಿಸಿಕೊಳ್ಳಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದು ಡಾ ತೇಜಸ್ವಿನಿ ಅನಂತಕುಮಾರ್ ವಿವರಿಸಿದರು.
ದೇಣಿಗೆ ನೀಡುವಂತೆ ಕೋರಿಕೆ
ಈಸಿ ಟು ಕುಕ್ ಉಪ್ಪಿಟ್ಟು ಹಾಗೂ ಕಿಚಡಿ ಮಿಕ್ಸ್ ಮತ್ತು ಉಚಿತ ಊಟದ ವ್ಯವಸ್ಥೆಯನ್ನು ಕೈಗೊಳ್ಳುವ ಕಾರ್ಯದಲ್ಲಿ ಅಗತ್ಯವಿರುವ ಹಣ ಸಹಾಯವನ್ನು ಮಾಡುವ ಮೂಲಕ ಸಾರ್ವಜನಿಕರು ಕೈಜೋಡಿಸಬಹುದಾಗಿದೆ ಎಂದು ಇದೇ ಸಂಧರ್ಭದಲ್ಲಿ ಮನವಿ ಮಾಡಿಕೊಂಡರು. ರೂ. 500 ಕ್ಕೂ ಮೀರಿದ ಎಲ್ಲ ದೇಣಿಗೆಗಳಿಗೆ 80ಜಿ ಸೌಲಭ್ಯವಿದೆ. ಶ್ರೀಮತಿ ಗಿರಿಜಾ ಶಾಸ್ತ್ರಿ ಸ್ಮಾರಕ ಸಂಸ್ಥೆ ಎಚ್ ಡಿ ಎಫ್ ಸಿ ಖಾತೆಗೆ ಬ್ಯಾಂಕ್ ಖಾತೆಗೆ RTGS/NEFT ಮುಖಾಂತರ ದೇಣಿಗೆ ವರ್ಗಾಯಿಸಬಹುದು. ಸಂಸ್ಥೆಯ UPI ID 7892098948@yblಗೂ ಕಳುಹಿಸಬಹುದು.