ಕೊರೊನಾ ಲಾಕ್ ಡೌನ್: KSRTC ಇಂದ 2 ಪ್ರಮುಖ ಘೋಷಣೆ
ಬೆಂಗಳೂರು: ಮಾರಣಾಂತಿಕ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ಲಾಕ್ ಡೌನ್ ಘೋಷಿಸಲಾಗಿದೆ. ಮೇ 3 ರವರೆಗೂ ಲಾಕ್ ಡೌನ್ ಮುಂದುವರೆಯಲಿದೆ. ಲಾಕ್ ಡೌನ್ ನಿಂದಾಗಿ ಕಳೆದ ಒಂದು ತಿಂಗಳಿನಿಂದ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಹೀಗಿರುವಾಗಲೇ, ಕೆ.ಎಸ್.ಆರ್.ಟಿ.ಸಿ ಕಡೆಯಿಂದ 2 ಪ್ರಮುಖ ಘೋಷಣೆಗಳು ಹೊರಬಿದ್ದಿವೆ.
1. ವಾಣಿಜ್ಯ ಮಳಿಗೆಗಳಿಗೆ ಕೆ.ಎಸ್.ಆರ್.ಟಿ.ಸಿ ಕಡೆಯಿಂದ ಬಂಪರ್ ಗಿಫ್ಟ್
Recommended Video
ಗುಜರಿ ಸೇರಲಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಗಳಿಗೆ 'ಸ್ತ್ರೀ' ಭಾಗ್ಯ!
ಲಾಕ್ ಡೌನ್ ನಿಂದಾಗಿ ವ್ಯಾಪಾರವಿಲ್ಲದೆ ಕಂಗಾಲಾಗಿರುವ ವಾಣಿಜ್ಯ ಮಳಿಗೆಗಳ ಮಾಲೀಕರು ಬಾಡಿಗೆ ಪಾವತಿಸುವ ಅಗತ್ಯವಿಲ್ಲ ಎಂದು ಕೆ.ಎಸ್.ಆರ್.ಟಿ.ಸಿ ತಿಳಿಸಿದೆ. ಹೋಟೆಲ್ ಮತ್ತು ಮಳಿಗೆಗಳ ಬಾಡಿಗೆ ಶುಲ್ಕಕ್ಕೆ ಕೆ.ಎಸ್.ಆರ್.ಟಿ.ಸಿ ವಿನಾಯಿತಿ ನೀಡಿದೆ.
ಬಸ್ ಸಂಚಾರ ನಿಂತಿದ್ರಿಂದಾಗಿ ಬಸ್ ನಿಲ್ದಾಣದ ಹೋಟೆಲ್ ಗಳು, ಜಾಹೀರಾತು, ರಸ್ತೆ ಬದಿ ಹೋಟೆಲ್ ಗಳು ಯಾವುದೇ ವಹಿವಾಟು ನಡೆಸಿಲ್ಲ. ಹೀಗಾಗಿ ಹೋಟೆಲ್ ಮತ್ತು ಜಾಹೀರಾತುದಾರರು ನೀಡಬೇಕಾದ ಒಂದು ತಿಂಗಳ ಸಂಪೂರ್ಣ ಶುಲ್ಕವನ್ನು ಮಾನವೀಯತೆ ಆಧಾರದ ಮೇಲೆ ಮನ್ನಾ ಮಾಡಲಾಗಿದೆ.
ಆದ್ರೆ, ಈ ವಿನಾಯಿತಿ ಮೊಬೈಲ್ ಟವರ್ ಮತ್ತು ಎಟಿಎಂ ಗಳಿಗೆ ಅನ್ವಯವಾಗುವುದಿಲ್ಲ.
2. ಬಾಡಿಗೆ ಒಪ್ಪಂದದ ಮೇರೆಗೆ ಕೆ.ಎಸ್.ಆರ್.ಟಿ.ಸಿ ಬಸ್ ಲಭ್ಯ
ಮೇ 3ಕ್ಕೆ ಎರಡನೇ ಹಂತದ ಲಾಕ್ ಡೌನ್ ಮುಕ್ತಾಯಗೊಳ್ಳುವುದರಿಂದ, ಒಪ್ಪಂದದ ಮೇರೆಗೆ ಬಸ್ ಓಡಿಸಲು ಕೆ.ಎಸ್.ಆರ್.ಟಿ.ಸಿ ಸಜ್ಜಾಗಿದೆ. ಸಾಂದರ್ಭಿಕ ಒಪ್ಪಂದದ ಬಸ್ಸುಗಳಿಗೆ ಬೇಡಿಕೆ ಬಂದ್ರೆ ಬಸ್ ಒದಗಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ರಾಜ್ಯ ಸರ್ಕಾರ ಅನುಮತಿಸಿರುವ ಅಗತ್ಯ ಸೇವೆಗಳಿಗೆ ಬಸ್ ಗಳನ್ನ ನೀಡುವುದಾಗಿ ಕೆ.ಎಸ್.ಆರ್.ಟಿ.ಸಿ ಪ್ರಕಟಣೆಯಲ್ಲಿ ತಿಳಿಸಿದೆ. ಕೈಗಾರಿಕೆಗಳು, ಸರ್ಕಾರಿ ಮತ್ತು ಖಾಸಗೀ ಸಂಸ್ಥೆಗಳು, ಐಟಿ-ಬಿಟಿ ವಲಯಗಳಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಬಾಡಿಗೆಗೆ ಸಿಗಲಿದೆ.
ಸಾಮಾನ್ಯ ಬಸ್ ಮತ್ತು ರಾಜಹಂಸ ಬಸ್ಸುಗಳನ್ನು ಬಾಡಿಗೆಗೆ ನೀಡಲು ಕೆ.ಎಸ್.ಆರ್.ಟಿ.ಸಿ ನಿರ್ಧರಿಸಿದ್ದು, ಪ್ರತಿ ಕಿ.ಲೋ ಮೀಟರ್ ಗೆ 40 ರೂ, 12 ಗಂಟೆ ಅವಧಿಗೆ 8 ಸಾವಿರ, 24 ಗಂಟೆ ಅವಧಿಗೆ 10 ಸಾವಿರ ರೂ ಬಾಡಿಗೆ ನಿಗದಿ ಪಡಿಸಿದೆ. ಕರ್ನಾಟಕ ಸಾರಿಗೆ ಬಸ್ ನಲ್ಲಿ 20 ಅಥವಾ 30 ಮಂದಿಗೆ ಮಾತ್ರ ಅವಕಾಶ ಕಲ್ಪಿಸಿದೆ.
ರಾಜಹಂಸ ಬಸ್ ಪ್ರತಿ ಕಿ.ಮೀ ಗೆ 45 ರೂ, 12 ಗಂಟೆ ಅವಧಿಗೆ 9 ಸಾವಿರ ರೂ, 24 ಗಂಟೆ ಅವಧಿಗೆ 11,250 ರೂಪಾಯಿ ಬಾಡಿಗೆ ನಿಗದಿಯಾಗಿದ್ದು, ಈ ಬಸ್ ನಲ್ಲಿ 16 ಮಂದಿ ಪ್ರಯಾಣಿಸಲು ಅವಕಾಶವಿದೆ. ಷರತ್ತುಗಳನ್ವಯ ಬಾಡಿಗೆಗೆ ನೀಡುವುದಾಗಿ ಕೆ.ಎಸ್.ಆರ್.ಟಿ.ಸಿ ಸುತ್ತೋಲೆ ಹೊರಡಿಸಿದೆ.