ಕೊರೊನಾ ತಡೆಗೆ ಸಿಎಂ ಪರಿಹಾರ ನಿಧಿಗೆ ಗಾಯಕ ವಿಜಯ ಪ್ರಕಾಶ್ ನೆರವು
ಬೆಂಗಳೂರು, ಏಪ್ರಿಲ್ 04: ಕೊರೊನಾ ತಡೆಗೆ ಕನ್ನಡ ಚಿತ್ರರಂಗದ ಕೆಲವರು ಸಹಾಯ ಹಸ್ತಾ ಚಾಚಿದ್ದಾರೆ ಇದೀಗ ಗಾಯಕ ವಿಜಯ್ ಮುಖ್ಯಮಂತ್ರಿ ಪರಿಹಾರ ನಿಧಿಗೆ 10 ಲಕ್ಷ ಪರಿಹಾರ ಮೊತ್ತ ಹಸ್ತಾಂತರಿಸಿದ್ದಾರೆ.
''ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೋ' ಅಂತ ಪುರಂದರ ದಾಸರು ಹೇಳಿರುವಂತ ಮಾತು, ನನ್ನ ಜೀವನದಲ್ಲಿ ಸಮಸ್ತ ಕನ್ನಡ ಜನತೆ ಆ ಪ್ರೀತಿಯ ಬೊಗಸೆಯನ್ನ ತುಂಬಿಸಿ ಕೊಟ್ಟಿದ್ದಾರೆ. ಆ ಬೊಗಸೆಯಿಂದ ಒಂದು ಚಿಕ್ಕ ಕಾಣಿಕೆ ಜನರಿಗಾಗಿ ಮಾಡೋದು ನನ್ನ ಸೌಭಾಗ್ಯ, ನನ್ನ ಕರ್ತವ್ಯ, ಇದು ಭಗವಂತನ ಕೃಪೆ ಎಂದು ಭಾವಿಸುತ್ತೇನೆ.'' ಎಂದು ವಿಜಯ್ ಪ್ರಕಾಶ್ ಸಂತಸ ಹಂಚಿಕೊಂಡಿದ್ದಾರೆ.
ಮುಖ್ಯಮಂತ್ರಿ ಪರಿಹಾರ ನಿಧಿಗೆ 5 ಲಕ್ಷ ನೀಡಿದ ದೀಪಿಕಾ ದಾಸ್
''ಕರೋನಾ ಮಹಾಮಾರಿಯನ್ನ ನಾವೆಲ್ಲರೂ ಮನೆಯೊಳಗಿದ್ದು ಎದುರಿಸುತ್ತಿದ್ದರೆ, ಹೊರಗಡೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳು, ನಮ್ಮ ಸರ್ಕಾರದ ಎಲ್ಲ ಅಧಿಕಾರಿಗಳು, ಡಾಕ್ಟರ್ಸ್ ಹಾಗೂ ಅವರ ತಂಡ, ಪೊಲೀಸರು ಹೀಗೆ ಹಗಲು ರಾತ್ರಿ ನಮ್ಮನ್ನ ಈ ಒಂದು ಮಹಾಮಾರಿಯಿಂದ ರಕ್ಷಿಸಲು ಕೆಲಸ ಮಾಡ್ತಾ ಇದ್ದಾರೆ. ಇಂಥ ಒಂದು ಸಂದರ್ಭದಲ್ಲಿ ನಾವೆಲ್ಲರೂ ನಮ್ಮ ಕೈಯಲ್ಲಿ ಆದಷ್ಟು ಪರಿಹಾರ ನಿಧಿಗೆ ಕೊಟ್ಟರೆ ಅದು ಎಲ್ಲಿಯೋ ಯಾರೋ ಒಬ್ಬರ ಪ್ರಾಣವನ್ನ ಉಳಿಸಲು ಅನುಕೂಲವಾಗಬಹುದು ಎಂದು ಭಾವಿಸುತ್ತೇನೆ. ನನ್ನ ಪ್ರಾರ್ಥನೆ, ನಿಮ್ಮ ಕೈಯಲ್ಲಿ ಆದಷ್ಟು ಕೊಡುಗೆಯನ್ನ ಈ ಪರಿಹಾರ ನಿಧಿಗೆ ಮಾಡಿ. ನಿಮ್ಮಿಂದ ಯಾರೋ ಒಬ್ಬರ ಜೀವ ಉಳಿಯಲಿಕ್ಕೆ ಸಾಧ್ಯವಾಗುತ್ತೆ'' ಎಂದು ಮನವಿ ಮಾಡಿದ್ದಾರೆ.
ಕರ್ನಾಟಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ಮಾತ್ರವಲ್ಲದೆ, ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ಹಾಗೂ ಕೆಲವು ರಾಜ್ಯಗಳ ಪರಿಹಾರ ನಿಧಿಗೆ ಕೂಡ ದೇಣಿಗೆಯನ್ನ ವಿಜಯ್ ಪ್ರಕಾಶ್ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ''ಇಂಥ ಸಮಯದಲ್ಲಿ ನಾವೆಲ್ಲರೂ ಕೈಜೋಡಿಸಿ ನಿಂತರೆ, ಖಂಡಿತವಾಗಿಯೂ ಈ ಕರೋನಾ ಅನ್ನುವ ಮಹಾಮಾರಿಯನ್ನ ಗೆದ್ದು ಮೊದಲಿನಂತೆಯೇ ಸಮಾಜದಲ್ಲಿ ಸುಖವಾಗಿ, ಸಂತೋಷವಾಗಿ ಬದುಕುತ್ತೇವೆ ಅನ್ನುವ ಭರವಸೆ ನನಗಿದೆ.'' ಎಂದು ಜನರಿಗೆ ಧೈರ್ಯ ತುಂಬಿದ್ದಾರೆ.