ಕೊರೊನಾ; ಬಿಬಿಎಂಪಿ ವತಿಯಿಂದ ನಿರ್ಗತಿಕರಿಗೆ ದಿನಸಿ, ಸ್ಯಾನಿಟೈಸರ್
ಬೆಂಗಳೂರು, ಮಾರ್ಚ್ 30: ಬಿಬಿಎಂಪಿ ನೇತೃತ್ವದಲ್ಲಿ ಇಸ್ಕಾನ್ನ ಅಕ್ಷಯಪಾತ್ರೆ ವತಿಯಿಂದ ಬಡವರ್ಗದ ಜನರು, ವಲಸಿಗರು, ಕಟ್ಟಡ ಕೂಲಿ ಕಾರ್ಮಿಕರಿಗೆ 21 ದಿನಗಳವರೆಗೆ ಅಡುಗೆ ಮಾಡಲು ಬೇಕಾಗಿರುವ ಅಕ್ಕಿ, ಉಪ್ಪು, ಎಣ್ಣೆ, ಬೇಳೆ, ಸಾಂಬರ್ ಪುಡಿ ವಿತರಿಸಲಾಯಿತು.
ರಾಜಸ್ತಾನಿ ಯೂತ್ ಅಸೋಸಿಯೇಷನ್ ವತಿಯಿಂದ ಪೌರಕಾರ್ಮಿಕರು, ಪೊಲೀಸ್ ಸಿಬ್ಬಂದಿಗೆ 60,000 ಮಾಸ್ಕ್, 1,000 ಸ್ಯಾನಿಟೈಸರ್ ಹಾಗೂ ಆರೋಗ್ಯ ಸಿಬ್ಬಂದಿಗೆ 100 ಸಂಪೂರ್ಣ ದೇಹಗವಚು ವಿತರಿಸಲಾಯಿತು. ಮಹಾಪೌರ ಗೌತಮ್ ಕುಮಾರ್, ಕಂದಾಯ ಸಚಿವ ಆರ್.ಅಶೋಕ್ ಈ ವಸ್ತುಗಳನ್ನು ಬೆಂಗಳೂರಿನಲ್ಲಿ ಸೋಮವಾರ ವಿತರಿಸಿದರು.
ಭಾರತದಲ್ಲಿ 1000 ಗಡಿದಾಟಿದ ಕೊರೊನಾ ಸೋಂಕಿತರು, 29 ಸಾವು
ಈ ವೇಳೆ ಸಂಸದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ಆಯುಕ್ತರು ಬಿ.ಹೆಚ್.ಅನಿಲ್ ಕುಮಾರ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ
ಬಡ ವರ್ಗದವರು, ಕೂಲಿ ಕಾರ್ಮಿಕರು ಹಾಗೂ ಕಟ್ಟಡ ಕಾರ್ಮಿಕರಿಗೆ ಆಹಾರದ ಕೊರತೆ ನೀಗಿಸುವ ಸಲುವಾಗಿ ಇಸ್ಕಾನ್ ಸಂಸ್ಥೆಯ ಅಕ್ಷಯ ಪಾತ್ರೆ ಯಡಿ ಮೊದಲಿಗೆ 20,000 ಬಾಕ್ಸ್ ವಿತರಿಸಲು ಕ್ರಮವಹಿಸಲಾಗಿತ್ತು. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬ ಕಾರಣಕ್ಕೆ 40,000 ಬಾಕ್ಸ್ ವಿತರಣೆ ಮಾಡಲು ಮುಂದಾಗಿದ್ದಾರೆ ಎಂದು ಕಂದಾಯ ಸಚಿವರು ಆರ್.ಅಶೋಕ್ ರವರು ತಿಳಿಸಿದರು.
ಪ್ರತಿನಿತ್ಯ ಹೆಚ್ಚುತ್ತಲೇ ಇದೆ
ಆಹಾರ ಸಾಮಗ್ರಿ, ಮಾಸ್ಕ್, ಸ್ಯಾನಿಟೈಸರ್ ವಿತರಿಸಉವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವರು, ನಗರದಲ್ಲಿ ಊಟದ ವ್ಯವಸ್ಥೆ ಕಲ್ಪಿಸುವಂತೆ 15,000 ನೊಂದಾವಣಿ ಮಾಡಿಕೊಂಡಿದ್ದಾರೆ. ಆ ಸಂಖ್ಯೆ ಪ್ರತಿನಿತ್ಯ ಹೆಚ್ಚುತ್ತಲೇ ಇದೆ. ಈ ಸಂಬಂಧ ಪಾಲಿಕೆ 8 ವಲಯ ಹಾಗೂ ಡಿಸಿಪಿ ಕಛೇರಿಗಳಿಗೆ ಆಹಾರ ಸಾಮಗ್ರಿಗಳನ್ನು ಇಂದೇ ಕಳುಹಿಸಿ, ಎಲ್ಲೂ ಹಂಚಕೆ ಮಾಡದೆ ಹೊಯ್ಸಳ ವಾಹನದ ಮೂಲಕ ಮನೆ-ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ಕಟ್ಟಡ ಕಾರ್ಮಿಕರು ಇದ್ದಲ್ಲಿ ಆಹಾರ ಸಹಾಯವಾಣಿ 15524 ಅಥವಾ ಪೊಲೀಸ್ ಇಲಾಖೆ 100ಗೆ ಕರೆ ಮಾಡಿದರೆ ಕೂಡಲೆ ಆಹಾರ ವ್ಯವಸ್ಥೆ ಕಲ್ಪಿಸಲಾಗವುದು ಎಂದು ಹೇಳಿದರು.
ಊರುಗಳಿಗೆ ಹೂಗುವಂತೆ ಒತ್ತಾಯ ಮಾಡಬಾರದು
ಡೆವಲಪರ್ಸ್ ಹಾಗೂ ಗುತ್ತಿಗೆದಾರರ ಜೊತೆ ನಾಳೆ ಸಭೆ ನಡೆಸಿ, ಬೇರೆ ಕಡೆಯಿಂದ ಕೆಲಸ ಮಾಡಲು ಬಂದಿರುವ ಕಟ್ಟಡ ಕಾರ್ಮಿಕರನ್ನು ಯಾವುದೇ ಕಾರಣಕ್ಕೂ ಅವರ ಊರುಗಳಿಗೆ ಹೂಗುವಂತೆ ಒತ್ತಾಯ ಮಾಡಬಾರದು. ಇರುವ ಸ್ಥಳದಲ್ಲೇ ಊಟ ಹಾಗೂ ವೈದ್ಯಕೀಯ ತಪಾಸಣೆ ಮಾಡಿಸಬೇಕು. ಒಂದು ವೇಳೆ ಮಾಡದಿದ್ದಲ್ಲಿ, ಅವರಿಗೆ ನೀಡಿರುವ ಕಟ್ಟಡ ನಿರ್ಮಾಣ ನಕ್ಷೆಯನ್ನು ಕೂಡಲೆ ಹಿಂಪಡೆದು, ಅಂತಹವರ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವರು ತಿಳಿಸಿದರು.
ಮಾಧ್ಯಮದವರಿಗೂ 10,000 ಮಾಸ್ಕ್
ರಾಜಸ್ಥಾನಿ ಯೂತ್ ಅಸೋಶಿಯೇಷನ್ ವತಿಯಿಂದ ಪೌರಕಾರ್ಮಿಕರಿಗೆ 50,000 ಮಾಸ್ಕ್ಗಳನ್ನು ವಿತರಿಸಲು ಕ್ರಮವಹಿಸಲಾಗಿದೆ. ಪ್ರತಿ ಪೌರಕಾರ್ಮಿಕರಿಗೂ 5 ಮಾಸ್ಕ್ಗಳನ್ನು ವಿತರಿಸಲಾಗುತ್ತಿದೆ. ಪೊಲೀಸ್ ಸಿಬ್ಬಂದಿಗೆ 10,000 ಮಾಸ್ಕ್ಗಳನ್ನು ನೀಡಲಾಗುತ್ತಿದೆ. ಇದರ ಜೊತೆಗೆ 800 ಸ್ಯಾನಿಟೈಸರ್ ನೀಡಲಾಗಿದೆ. ಎಲ್ಲರೂ ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾಧ್ಯಮದವರಿಗೂ 10,000 ಮಾಸ್ಕ್ ವಿತರಿಸಲು ಸೂಚಿಸಲಾಗಿದೆ ಕಂದಾಯ ಸಚಿವರು ಎಂದರು.